ಪ್ರಣಬ್ ಗೆ 2 ಬಾರಿ ಪಿಎಂ ಸ್ಥಾನ ತಪ್ಪಿಸಿದ ಕಾಂಗ್ರೆಸ್
ಕೊಲ್ಕತ್ತಾದ ಬ್ರಿಗೇಡ್ ಪರೇಡ್ ಗ್ರೌಂಡ್ ನಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ನರೇಂದ್ರ ಮೋದಿ ಅವರು ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು. ಆ ಸಂದರ್ಭದಲ್ಲಿ ರವೀಂದ್ರನಾಥ ಠಾಗೋರ್, ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್, ಅರಬಿಂದೋ ಅವರುಗಳನ್ನು ಸ್ಮರಿಸಿದ ಮೋದಿ, ಕೋಲ್ಕೊತ್ತಾದ ಸ್ವಾದಿಷ್ಟ ರಸಗುಲ್ಲಾವನ್ನು ಸವಿದರು.
ಬಂಗಾಳದ ವೈಭವೋಪೇತ ದುರ್ಗಾ ಪೂಜೆಯನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಲಘುವಾಗಿ ತರಾಟೆಗೆ ತೆಗೆದುಕೊಂಡರು. ಪಶ್ಚಿಮ ಬಂಗಾಲ ಯಾರ ಆಳ್ವಿಕೆಯಲ್ಲೂ ಅಭಿವೃದ್ಧಿ ಕಾಣಲಿಲ್ಲ. ರಾಜ್ಯದಲ್ಲಿ 42 ಸ್ಥಾನಗಳಲ್ಲೂ ಗೆಲ್ಲಿಸುವುದರೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಬಂಗಾಳದಲ್ಲಿ ಸುವರ್ಣ ದಿನಗಳ ಮಳೆಗರೆಸುವುದಾಗಿ (ಸೋನಾರ್ ಬಾಂಗ್ಲಾ) ಭರವಸೆ ನೀಡಿದರು.
ಇತ್ತ ದೆಹಲಿಯಲ್ಲಿ ತೃತೀಯ ರಂಗದ ನಾಯಕರು ಸಭೆ ಸೇರಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ನರೇಂದ್ರ ಮೋದಿ, ತೃತೀಯ ರಂಗ ಅಧಿಕಾರಕ್ಕೆ ಬಂದರೆ ದೇಶವೂ ತೃತೀಯ ದರ್ಜೆಗೆ ಕುಸಿಯಲಿದೆ ಎಂದು ವ್ಯಂಗ್ಯವಾಡಿದರು.
ಆದರೆ ಮೋದಿ ಭಾಷಣದ ಪ್ರಮುಖ ಅಂಶವೆಂದರೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಹೆಸರನ್ನು ಪ್ರಸ್ತಾಪಿಸಿದ್ದು. 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದಾಗ ಮತ್ತು 2004ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮನಮೋಹನ ಸಿಂಗ್ ಅವರನ್ನು ಪ್ರಧಾನಿಯಾಗಿಸುವ ಮೂಲಕ ಕಾಂಗ್ರೆಸ್ ಪಕ್ಷವು 2 ಬಾರಿ ಪ್ರಣಬ್ ದಾ ಗೆ ಪ್ರಧಾನಿ ಹುದ್ದೆಯನ್ನು ತಪ್ಪಿಸಿತು ಎಂದು ಜರಿದರು.