ಕ್ಷಮೆ ಕೇಳಿ, ಇಲ್ಲದಿದ್ದರೆ ಸಾಕ್ಷ್ಯ ನೀಡಿ: ಮೋದಿ ವಿರುದ್ಧ ಕಾಂಗ್ರೆಸ್ ಆಕ್ರೋಶ
ನವದೆಹಲಿ, ಡಿಸೆಂಬರ್ 15: ಗುಜರಾತ್ ಚುನಾವಣೆಗೆ ಪಾಕಿಸ್ತಾನದ ಜತೆ ಕಾಂಗ್ರೆಸಿಗರು ಕೈಜೋಡಿಸಿದ್ದಾರೆ ಎಂಬ ಅರ್ಥದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನಿಮ್ಮ ರಾಜಕೀಯಕ್ಕೆ ನಮ್ಮನ್ನು ಎಳೆಯಬೇಡಿ: ಮೋದಿಗೆ ಪಾಕ್ ತಿರುಗೇಟು
"ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಸೇನಾ ಮುಖ್ಯಸ್ಥರು ಮತ್ತು ಇತರರು ಪಾಕಿಸ್ತಾನದ ಜತೆ ಸೇರಿ ಗುಜರಾತ್ ಚುನಾವಣೆಗೆ ಸಂಚು ರೂಪಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ," ಎಂದು ಹೇಳಿರುವ ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್, "ತಮ್ಮ ಹೇಳಿಕಗೆ ಸಂಬಂಧಿಸಿದಂತೆ ಪ್ರಧಾನಿ ಮಂತ್ರಿಗಳು ಸದನ (ರಾಜ್ಯಸಭೆ)ಕ್ಕೆ ಸಾಕ್ಷ್ಯಗಳ ಸಮೇತ ಆಗಮಿಸಬೇಕು. ಇಲ್ಲದಿದ್ದಲಿ ಸದನದ ಮುಂದೆಯಲ್ಲ ಇಡೀ ದೇಶದ ಮುಂದೆ ಕ್ಷಮೆಯಾಚಿಸಬೇಕು," ಎಂದು ಗುಡುಗಿದ್ದಾರೆ.
ಈ ಸಂಬಂಧ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿ ಗದ್ದಲವೆಬ್ಬಿಸಿದ ಹಿನ್ನಲೆಯಲ್ಲಿ ಸದನವನ್ನು ಅಪರಾಹ್ನಕ್ಕೆ ಮುಂದೂಡಲಾಗಿದೆ.
ಇದಕ್ಕೂ ಮೊದಲು ರಾಜ್ಯಸಭಾ ಸದಸ್ಯರ ಶರದ್ ಯಾದವ್ ಮತ್ತು ಅಲಿ ಅನ್ವರ್ ಅನ್ಸಾರಿ ಪದಚ್ಯುತಿಗೆ ಸಂಬಂಧಿಸಿದಂತೆ ಮೊದಲ ಬಾರಿಗೆ 20 ನಿಮಿಷಗಳ ಕಾಲ ಸದನವನ್ನು ಮುಂದೂಡಲಾಯಿತು.
ಇದಾಗಿ ಮತ್ತೆ ಸದನ ಸೇರಿ ಪ್ರಶ್ನೋತ್ತರ ಕಲಾಪ ಆರಂಭಿಸುತ್ತಿದ್ದಂತೆ ವಿರೋಧ ಪಕ್ಷಗಳು ಪ್ರಧಾನಿ ಹೇಳಿಕೆ ಬಗ್ಗೆ ಚರ್ಚೆಗೆ ಆಗ್ರಹಿಸಿದವು.
ಇದಕ್ಕೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವಕಾಶ ನೀಡದಿದ್ದಾಗ ಸದನವನ್ನು ಅಪರಾಹ್ನ 2.30ಕ್ಕೆ ಮುಂದೂಡಲಾಯಿತು.