ದಟ್ಟ ಮಂಜು: ರೈಲು, ವಿಮಾನ ವಿಳಂಬ, ಜನವರಿ 18ರ ವರೆಗೆ ಶೀತಗಾಳಿ ಮುಂದುವರಿಕೆ
ನವದೆಹಲಿ, ಜ. 15: ಶೀತ ಅಲೆ ಮತ್ತು ಮಂಜು ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆಯ ಮೇಲೆ ಪರಿಣಾಮ ಬೀರುವುದು ಮುಂದುವರೆಸಿದೆ. ಭಾನುವಾರ ದಟ್ಟ ಮಂಜಿನಿಂದಾಗಿ 20 ರೈಲುಗಳು, ಆರು ವಿಮಾನಗಳ ಸಂಚಾರ ವಿಳಂಬವಾಗಿ ಪ್ರಯಾಣಿಕರು ಪರದಾಡಿದ್ದಾರೆ.
ಇನ್ನು ಜನವರಿ 18ರ ಬುಧವಾರದವರೆಗೆ ಶೀತಗಾಳಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳು ತಿಳಿಸಿದ್ದಾರೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಶೀತ ಅಲೆಯ ಸ್ಥಿತಿಗತಿ ಇಲ್ಲಿದೆ
ಭಾನುವಾರ ಮತ್ತು ಸೋಮವಾರದಂದು ದೆಹಲಿ, ಪಂಜಾಬ್ ಮತ್ತು ಹರಿಯಾಣದಲ್ಲಿ ದಟ್ಟವಾದ ಮಂಜು ಮತ್ತು ಚಳಿಯ ವಾತಾವರಣ ಮುಂಡುವರೆಯಲಿದ್ದು ಭಾರತರೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಉತ್ತರ ರೈಲ್ವೆಯ ಅಧಿಕಾರಿಗಳ ಪ್ರಕಾರ ಭಾನುವಾರ, ದರ್ಭಾಂಗಾ - ನವದೆಹಲಿ ಕ್ಲೋನ್ ವಿಶೇಷ, ಪುರಿ - ನವದೆಹಲಿ ಪುರುಷೋತ್ತಮ ಎಕ್ಸ್ಪ್ರೆಸ್, ಗಯಾ - ನವದೆಹಲಿ ಮಹಾಬೋಧಿ ಎಕ್ಸ್ಪ್ರೆಸ್, ಮಾಲ್ಡಾ ಟೌನ್- ದೆಹಲಿ ಫರಕ್ಕಾ ಎಕ್ಸ್ಪ್ರೆಸ್, ಬರೌನಿ - ನವದೆಹಲಿ ಕ್ಲೋನ್ ವಿಶೇಷ, ಬನಾರಸ್ - ನವದೆಹಲಿ ಕಾಶಿ ವಿಶ್ವನಾಥ್ ಎಕ್ಸ್ಪ್ರೆಸ್, ದಿಬ್ರುಗಢ್ ಟೌನ್ ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್, ಸಾಯಿ ನಗರ ಶಿರಡಿ ಟರ್ಮಿನಸ್ - ಕಲ್ಕಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್, ಕಾಮಾಖ್ಯ - ದೆಹಲಿ ಬ್ರಹ್ಮಪುತ್ರ ಮೇಲ್, ಕತಿಹಾರ್ - ಅಮೃತಸರ ಅಮ್ರಪಾಲಿ ಎಕ್ಸ್ಪ್ರೆಸ್ ರೈಲುಗಳು ಕನಿಷ್ಠ 2 ಗಂಟೆಗಳ ಕಾಲ ವಿಳಂಬವಾಗಲಿವೆ.
"ರಾಯಗಢ-ಹಜರತ್ ನಿಜಾಮುದ್ದೀನ್ ಗೊಂಡ್ವಾನಾ ಎಕ್ಸ್ಪ್ರೆಸ್, ವಿಶಾಖಪಟ್ಟಣಂ - ನವದೆಹಲಿ ಆಂಧ್ರಪ್ರದೇಶ ಎಕ್ಸ್ಪ್ರೆಸ್, ಅಯೋಧ್ಯಾ ಕ್ಯಾಂಟ್ - ನವದೆಹಲಿ ಎಕ್ಸ್ಪ್ರೆಸ್, ರಾಜ್ಗೀರ್ - ನವದೆಹಲಿ ಶ್ರಮಜೀವಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್, ರಕ್ಸಾಲ್ - ಆನಂದ್ ವಿಹಾರ್ ಟರ್ಮಿನಲ್ ಸದ್ಭಾವನಾ ಎಕ್ಸ್ಪ್ರೆಸ್, ಜಬಲ್ಪುರ-ಹಜರತ್ ನಿಜಾಮುದ್ದೀನ್ ನಿಜಾಮುದ್ದೀನ್, ಗೋರತ್ ನಿಜಾಮುದ್ದೀನ್ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ, ಎಂಜಿಆರ್ ಚೆನ್ನೈ ಸೆಂಟ್ರಲ್ - ನವದೆಹಲಿ ಗ್ರ್ಯಾಂಡ್ ಟ್ರಂಕ್ ಎಕ್ಸ್ಪ್ರೆಸ್, ಎಂಜಿಆರ್ ಚೆನ್ನೈ ಸೆಂಟ್ರಲ್-ನವದೆಹಲಿ ತಮಿಳುನಾಡು ಎಕ್ಸ್ಪ್ರೆಸ್, ಹೈದರಾಬಾದ್ ಡೆಕ್ಕನ್ ನಾಮೋಲ್ಲಿ-ನವದೆಹಲಿ ತೆಲಂಗಾಣ ಎಕ್ಸ್ಪ್ರೆಸ್ ಕೂಡ 2 ಗಂಟೆಗಳ ಕಾಲ ತಡವಾಗಿ ಚಲಿಸುತ್ತಿವೆ" ಎಂದು ಉತ್ತರ ರೈಲ್ವೆ ತಿಳಿಸಿದೆ.
ರೈಲುಗಳ ಜೊತೆಗೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಐಜಿಐ) ಹೊರಡಬೇಕಿದ್ದ ಸುಮಾರು ಆರು ವಿಮಾನಗಳು ಮಂಜಿನಿಂದಾಗಿ ವಿಳಂಬವಾಗಿವೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಭಾನುವಾರ ತಿಳಿಸಿದೆ.
ದೆಹಲಿ - ರಿಯಾದ್, ದೆಹಲಿ - ಶಿಮ್ಲಾ - ಕುಲ್ಲು, ದೆಹಲಿ - ವಾರಣಾಸಿ, ದೆಹಲಿ - ಧರ್ಮಶಾಲಾ - ಶ್ರೀನಗರ, ದೆಹಲಿ - ಶಿಮ್ಲಾ - ಧರ್ಮಶಾಲಾ, ದೆಹಲಿ - ಡೆಹ್ರಾಡೂನ್ ವಿಮಾನಯಾನ ಮಾರ್ಗಗಳು ದಟ್ಟ ಮಂಜಿನಿಂದ ಕೂಡಿವೆ. ಹೀಗಾವಿ ವಿಮಾನಗಳು ವಿಳಂಬವಾಗಿವೆ.
ಉಪಗ್ರಹ ಚಿತ್ರಣ ಮತ್ತು ಭಾರತೀಯ ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಈ ದಟ್ಟ ಮಂಜಿನ ಪದರವು ಪಂಜಾಬ್ , ರಾಜಸ್ಥಾನ, ಬಿಹಾರ, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಉತ್ತರ ಪ್ರದೇಶದಾದ್ಯಂತ ವಿಸ್ತರಿಸಿದೆ.
ಶನಿವಾರ ಹಿಮಾಚಲ ಪ್ರದೇಶದ ಹಲವಾರು ಜಿಲ್ಲೆಗಳು ಮತ್ತು ಉತ್ತರಾಖಂಡದ ಎತ್ತರದ ಶಿಖರಗಳಲ್ಲಿ ಹಿಮಪಾತವಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಮಂಧೋಲ್ ಗ್ರಾಮದಲ್ಲಿ ಶನಿವಾರ ಭಾರೀ ಹಿಮಪಾತವಾಗಿದೆ. ರಾಜ್ಯದ ಎತ್ತರದ ಪ್ರದೇಶಗಳಲ್ಲಿ, ಕುಲು ಜಿಲ್ಲೆಯ ನರಕಂದ, ಮನಾಲಿ ಮತ್ತು ಮಲಾನಾ ಗ್ರಾಮಗಳಲ್ಲಿಯೂ ಹಿಮಪಾತವಾಗಿದೆ. ಅಲ್ಲದೆ, ಬದರಿನಾಥ್ ಮತ್ತು ಚಮೋಲಿ ಜಿಲ್ಲೆಯ ಎತ್ತರದ ಶಿಖರಗಳು ಭಾರಿ ಹಿಮಪಾತಕ್ಕೆ ಸಾಕ್ಷಿಯಾಗಿವೆ.
ಹಿಮಾಚಲ ಪ್ರದೇಶದ ಮನಾಲಿಯಲ್ಲಿ 23 ಸೆಂ.ಮೀ ಹಿಮಪಾತವಾಗಿದ್ದು, ಖದ್ರಾಲಾ ಮತ್ತು ಶಿಲ್ಲಾರೊದಲ್ಲಿ ತಲಾ 16 ಸೆಂ.ಮೀ., ಕುಫ್ರಿಯಲ್ಲಿ 12 ಸೆಂ.ಮೀ., ಭರ್ಮೋರ್ನಲ್ಲಿ 10 ಸೆಂ.ಮೀ., ಶಿಮ್ಲಾ ಮತ್ತು ಗೊಂಡ್ಲಾದಲ್ಲಿ ತಲಾ 6 ಸೆಂ.ಮೀ., ಡಾಲ್ಹೌಸಿ ಮತ್ತು ಕಲ್ಪಾದಲ್ಲಿ ತಲಾ 4 ಸೆಂ.ಮೀ ಮತ್ತು ಹಂಸಾ ಮತ್ತು ಕೀಲಾಂಗ್ ನಲ್ಲಿ 3 ಸೆಂ.ಮೀ. ಹಿಮಪಾತವಾಗಿದೆ.