ಮದುವೆ ಮರುದಿನವೇ ವರನನ್ನು ಸೆರೆಮನೆಗಟ್ಟಿದ ವಧು
ಕೊರಿಯಾ (ಛತ್ತೀಸಗಢ), ಮೇ 30 : ಗಂಡು ಹೆಣ್ಣಿನ ಕತ್ತಿಗೆ ಮಂಗಳಸೂತ್ರ ಬಿಗಿದು, ಔತಣವೆಲ್ಲ ಮುಗಿದು, ಇನ್ನೇನು ಮೊದಲ ರಾತ್ರಿಗೆ ವಧುವರರಿಬ್ಬರು ಸಿದ್ಧವಾಗಬೇಕು, ಅಷ್ಟರಲ್ಲಿ ನನಗೆ ರೆಫ್ರಿಜರೇಟರ್, ಚಿನ್ನದ ಚೈನು ಬೈಕು ಎಂದು ವರ ಬೇಡಿಕೆ ಇಟ್ಟ.
ಆತ ತನ್ನ ಗಂಡ, ಈಗಷ್ಟೇ ಮದುವೆಯಾಗಿದೆ ಎಂಬುದನ್ನು ಲಕ್ಷಿಸದ ವಧು ನೇರವಾಗಿ ಪೊಲೀಸರಿಗೆ ದೂರು ನೀಡಿ ತನ್ನ ಗಂಡನನ್ನೇ ಬಂಧಿಸುವಂತೆ ಮಾಡಿದ ಘಟನೆ ಮಂಗಳವಾರ ನಡೆದಿದೆ.[ಮಗಳ ಮದುವೆಗೆ ಟೀ ಮಾರೋನು ಕೊಟ್ಟಿದ್ದು 1.50 ಕೋಟಿ ವರದಕ್ಷಿಣೆ]
ವರನನ್ನು ಈಗ ಇದೆಲ್ಲ ಬೇಡ ಅಂತ ವಧುವಿನ ಕಡೆಯವರು ಎಷ್ಟು ಸಂತೈಸಲು ಯತ್ನಿಸಿದರೂ ಪ್ರಯತ್ನ ಫಲಿಸಿಲ್ಲ. ಆತ ವಧುವಿನವರ ಮೇಲೆ ಹರಿಹಾಯುತ್ತಲೇ ಇದ್ದ. ಬಾಯಿಗೆ ಬಂದಂತೆ ಬೈಗುಳಗಳ ಮಳೆ ಸುರಿಸಿದ್ದಾನೆ.[ಮದುವೆಯಾಗಿ ವರ್ಷವಾಗಿಲ್ಲ, ಬೀದಿಗೆ ಬಿದ್ದ ಯುವತಿಯ ಬದುಕು]
ಮತ್ತಷ್ಟು ವರದಕ್ಷಿಣೆ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ವಧುವಿನ ಕಡೆಯವರು ಹೇಳುತ್ತಿದ್ದಂತೆ, ವರನ ಕಡೆಯವರು ವಧುವನ್ನು ಅಲ್ಲಿಯೇ ಬಿಟ್ಟು ತಮ್ಮ ಮನೆಗೆ ತೆರಳಿದ್ದಾರೆ. ವಧು ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ವರದಕ್ಷಿಣೆ ಕಿರುಕುಳದ ಕೇಸನ್ನು ಜಡಿದಿದ್ದಾಳೆ.
ದೂರನ್ನು ದಾಖಲಿಸಿಕೊಂಡ ಪೊಲೀಸರು, ಆತನ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಕೇಸನ್ನು ಹಾಕಿದ್ದು, ಆತನನ್ನು ಮಂಗಳವಾರ ಬಂಧಿಸಿ ಸೆರೆಮನೆಗಟ್ಟಿದ್ದಾರೆ.