ಮದುವೆಯಾಗಿ ವರ್ಷವಾಗಿಲ್ಲ, ಬೀದಿಗೆ ಬಿದ್ದ ಯುವತಿಯ ಬದುಕು
ಶಾದಿ ಡಾಟ್ ಕಾಮ್ ಮೂಲಕ ಮದುವೆಯಾದ ದೆಹಲಿ ಮತ್ತು ಮಂಗಳೂರಿನ ದಂಪತಿಗಳ ವೈವಾಹಿಕ ಜೀವನವೊಂದು ವರದಕ್ಷಿಣೆ ಪ್ರಕರಣದಿಂದಾಗಿ ಒಂದೇ ವರ್ಷಕ್ಕೆ ಮುರಿದು ಬಿದ್ದಿದೆ. ಯುವತಿ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.
ಮಂಗಳೂರು, ಏಪ್ರಿಲ್ 11: ಇವನಿಗೆ ವಯಸ್ಸು ಮೀರುತ್ತಿದ್ದರೂ ಇಲ್ಲೆಲ್ಲೋ ಮದುವೆಗೆ ಹೆಣ್ಣು ಸಿಗುತ್ತಿರಲಿಲ್ಲ. ಅವಳಿಗೋ ತಂದೆ ತಾಯಿ ಇಲ್ಲದೆ ಕಿರಿಯ ಸಹೋದರರೇ ನೋಡಿಕೊಳ್ಳಬೇಕಾದ ಸ್ಥಿತಿಯಲ್ಲಿ ಮದುವೆ ಆಗಿರಲಿಲ್ಲ. ಜೋಡಿ ಸಮ ಎನಿಸಿತ್ತು; ಮದುವೆಯೂ ಆಗಿತ್ತು. ಆದರೆ ಮದುವೆ ಹೆಚ್ಚು ದಿನ ಬಾಳಲಿಲ್ಲ. ಮದುವೆಯಾಗಿ ವರ್ಷಪೂರ್ತಿಯಾಗುವ ಮೊದಲೇ ಯುವತಿಯ ಬದುಕು ಬೀದಿಗೆ ಬಂದಿದೆ.
ಆಕೆಯ ಹೆಸರು ಪ್ರಭಾ ಬೊಹ್ರಾ ಮೂಲತಃ ದೆಹಲಿಯ ರಜಪೂತ ಸಮುದಾಯದವಳು. ತಂದೆ- ತಾಯಿ ಚಿಕ್ಕಂದಿನಲ್ಲೇ ಮೃತಪಟ್ಟಿದ್ದಾರೆ. ಇವಳೇ ಹಿರಿಯವಳು. ಹೀಗಾಗಿ ಕಿರಿಯ ಸಹೋದರರ ಆಶ್ರಯದಲ್ಲಿ ಇರಬೇಕಾದ ಪರಿಸ್ಥಿತಿ ಇವರದು. ಹೀಗೆ ಸಹೋದರರು ದುಡಿಯುವ ಹಂತಕ್ಕೆ ಬರುವಾಗ ಮದುವೆಯ ವಯಸ್ಸು ಮೀರಿತ್ತು. ಸ್ಥಳೀಯವಾಗಿ ವರರು ದಕ್ಕದಾದಾಗ ಶಾದಿ ಡಾಟ್ ಕಾಮ್ ನಲ್ಲಿ ಹುಡುಕುವ ಪ್ರಯತ್ನ ಕಿರಿಯ ಸಹೋದರ ಮಾಡಿದ್ದ. ಆಗ ಸಂಪರ್ಕಕ್ಕೆ ಬಂದವನೇ ಮಂಗಳೂರು ಚಿಲಿಂಬಿ ಆದರ್ಶ ನಗರದ ಮನೋಜ್ ನಾಯ್ಕ್ . ಶಾದಿ ಡಾಟ್ ಕಾಮ್ ನಲ್ಲಿ ಪ್ರಭಾಳ ಮಾಹಿತಿ ಪಡೆದ ಮನೋಜ್ ಆಕೆಯ ಸಹೋದರನಿಗೆ ಕರೆ ಮಾಡಿ ಮದುವೆ ಪ್ರಸ್ತಾಪ ಇಟ್ಟಿದ್ದ. ಸಹೋದರ ಮಹೇಂದ್ರ ಸಿಂಗ್ ಮಂಗಳೂರಿಗೆ ಬಂದು ಮನೋಜನ ಕುಟುಂಬದವರನ್ನು ಭೇಟಿಯಾಗಿದ್ದ. ನಾವು ಬ್ರಾಹ್ಮಣರು, ಮನೋಜ್ ಇಂಜಿನಿಯರ್ ಎಂದೆಲ್ಲಾ ಪರಿಚಯಿಸಲಾಗಿತ್ತು.[ಬಾವಿಯಲ್ಲಿ ವಿವಾಹಿತೆಯ ಶವ ಪತ್ತೆ, ಆತ್ಮಹತ್ಯೆ ಶಂಕೆ]
ಅವರಿಗೆ ಬೇಕಾದ ಕೆಲವು ಆತ್ಮೀಯರ ಪರಿಚಯವನ್ನು ಮಾಡಿಸಲಾಗಿತ್ತು. ಒಳ್ಳೆಯ ಕುಟುಂಬ ತನ್ನ ಸಹೋದರಿಗೆ ತಕ್ಕದಾದ ವರ ಎಂದು ನಿರ್ಧರಿಸಿದ ಮಹೇಂದ್ರ ಸಿಂಗ್ ಮಾತುಕತೆಗೆ ಮುಂದಾದರು. ಆರಂಭದಲ್ಲಿ ಮದುವೆಯ ಖರ್ಚು ಅರ್ಧ ಅರ್ಧ ನಿಭಾಯಿಸುವುದು ಎಂದು ಹೇಳಲಾಗಿತ್ತು. ವರ್ಷದ ಹಿಂದೆ ನಿಶ್ಚಿತಾರ್ಥವೂ ಆಯಿತು. ನಿಶ್ಚಿತಾರ್ಥವಾದಂತೆ ಮನೋಜನ ಮನೆಯವರ ಬೇಡಿಕೆಯ ಪಟ್ಟಿ ಬೆಳೆಯ ತೊಡಗಿತ್ತು. ಪೂರ್ತಿ ಖರ್ಚು ವಧುವಿನ ಮನೆಯವರೇ ನಿಭಾಯಿಸಬೇಕಾಗಿ ಬಂದಿತ್ತು. ಹಾಗೂ ಹೀಗೂ ಕಳೆದ ಜುಲೈ ನಲ್ಲಿ ಮಂಗಳೂರಿನಲ್ಲಿ ಮದುವೆ ಆಯಿತು.
ಮದುವೆಯಾದ ನಂತರದ ದಿನಗಳದು. ಪ್ರಭಾಳ ಜೀವನ ಕಷ್ಟದಿಂದ ಮುಳುಗಿ ಹೋಗಿತ್ತು. ಗಂಡ, ಅತ್ತೆ, ನಾದಿನಿ ಕಾಟ ಆರಂಭವಾಗಿತ್ತು. ದಿನಕ್ಕೊಂದು ಬೇಡಿಕೆ ಗಂಡನ ಮನೆಯವರಿಂದ ಬರಲಾರಂಭಿಸಿತು. ಹೀಗಿರುವಾಗ ಇದ್ದಕ್ಕಿದ್ದಂತೆ ಪ್ರಭಾಳ ಆರೋಗ್ಯ ಹದಗೆಟ್ಟಿತ್ತು. ಕಳೆದ ಆಗಸ್ಟ್ ನಲ್ಲಿ ಸಹೋದರ ಮಹೇಂದ್ರ ಸಿಂಗ್ ಚಿಕಿತ್ಸೆಗಾಗಿ ಊರಿಗೆ ಕರೆದುಕೊಂಡು ಹೋಗಿದ್ದ. ಅದರ ಬಳಿಕ ಮೂರೂ ತಿಂಗಳು ಕಳೆದರೂ ಮನೋಜ್ ನಾಯ್ಕ್ ಪತ್ನಿಯನ್ನು ಕರೆದುಕೊಂಡು ಬರಲು ದೆಹಲಿಗೆ ಹೋಗಲೇ ಇಲ್ಲ. ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ ಅನಿವಾರ್ಯವಾಗಿ ಆಕೆಯ ಸಹೋದರನೇ ಪ್ರಭಾಳನ್ನು ಕರೆದುಕೊಂಡು ಬಂದಿದ್ದ. ನನ್ನ ಸಹೋದರಿ ಈಗ ನಿಮ್ಮ ಜವಾಬ್ದಾರಿ ಆಕೆಯ ಬೇಕು ಬೇಡಗಳನ್ನು ನೀವೇ ಪೂರೈಸಬೇಕು ನಮಗೇನು ಕೇಳಬೇಡಿ ಎಂದು ಹೇಳಿ ಹೋಗಿದ್ದ.[ಮಂಗಳೂರು: ಹಾಸ್ಟೆಲ್ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ]
ಮಹಿಳೆಯರಿಗೆ ಅವರದ್ದೇ ಆದ ಮೂಲಭೂತ ಅವಶ್ಯಕತೆಗಳು ಇರುತ್ತವೆ. ಇವುಗಳನ್ನು ಕೂಡಾ ಮನೋಜ್ ಪೂರೈಸಲು ಸಿದ್ಧವಾಗಲಿಲ್ಲ. ಯಾಕೆ ಹೀಗೆ ಎಂದು ಪ್ರಶ್ನಿಸಿದ್ದಕ್ಕೆ ಏಪ್ರಿಲ್ 2 ರಂದು ಪತ್ನಿ ಮೇಲೆ ಮನೋಜ್ ಹಲ್ಲೆ ನಡೆಸಿದ್ದ. ಜೊತೆಗೆ ಅತ್ತೆಯು ಸೇರಿ ಪ್ರಜ್ಞೆ ತಪ್ಪುವವರೆಗೆ ಹೊಡೆದಿದ್ದರು. ಪ್ರಜ್ಞೆ ಬಂದ ಬಳಿಕ ಅವರಿಂದ ತಪ್ಪಿಸಿಕೊಂಡು ಹೊರಗೋಡಿ ಬಂದ ಪ್ರಭಾ ಅಕ್ಕಪಕ್ಕದವರ ನೆರವು ಕೋರಿದ್ದಳು.
ಈಗ ನೆರೆಯವರ ಮನೆಯಲ್ಲೇ ಆಶ್ರಯ ಪಡೆಯುತ್ತಿದ್ದಾಳೆ. ಪತಿ ಮನೋಜ್ ನಾಯ್ಕ್ ಹಾಗೂ ಅವನ ಮನೆಯವರ ವಿರುದ್ಧ ಪ್ರಭಾ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾಳೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಳಲು ಆಕೆಯದು. ಈಗ ದೆಹಲಿಗೆ ತೆರಳಿ ಅಲ್ಲಿಯೇ ದೂರು ದಾಖಲಿಸಲು ಸಿದ್ಧಳಾಗಿದ್ದಾಳೆ.
ಬಾಲಕಿಗೆ ಲೈಂಗಿಕ ಕಿರುಕುಳ : ಅಜ್ಜನಿಗೆ ನ್ಯಾಯಾಂಗ ಬಂಧನ
60 ವರ್ಷದ ವ್ಯಕ್ತಿಯೊಬ್ಬರು ಮೂರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಬಂಧಿತನನ್ನ ಕಾಸರಗೋಡುವಿನ ತಟ್ಟೆನ್ ಗನಂ ಕಾಲೋನಿಯ ನಿವಾಸಿ ಕುರುವಿಲ್ಲ ಅಲಿಯಾಸ್ ಕುಟ್ಟಪ್ಪನ್ ಎಂದು ಗುರುತಿಸಲಾಗಿದೆ. ಬಾಲಕಿ ಆಟವಾಡಲು ಮನೆಯಿಂದ ಹೊರಗಡೆ ಬರುತ್ತಿದ್ದ ವೇಳೆ ಈ ವ್ಯಕ್ತಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಬಾಲಕಿ ಮನೆಯವರ ಬಳಿ ಹೇಳಿಕೊಂಡಿದ್ದಳು.
ಬಾಲಕಿ ಮನೆಯವರು ನೀಡಿದ ದೂರಿನಂತೆ ಚಿತ್ತರಿಕ್ಕಲ್ ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲಾ ಸೆಷನ್ ಕೋರ್ಟ್ ಆದೇಶದಂತೆ ಆರೋಪಿಯನ್ನ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.