ಮಾನವ ತಿರಂಗದ ಮೂಲಕ ಗಿನ್ನಿಸ್ ದಾಖಲೆ ಮಾಡಿದ ಚಂಡೀಗಢ
ಚಂಡೀಗಂಢ, ಆಗಸ್ಟ್ 13: ಚಂಡೀಗಢವು ಸೆಕ್ಟರ್ 16 ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಬರೋಬ್ಬರಿ 7,500 ವಿದ್ಯಾರ್ಥಿಗಳನ್ನು ಬಳಸಿ ಭಾರತದ ಅತಿದೊಡ್ಡ ಹಾರಾಡುವ ರಾಷ್ಟ್ರಧ್ವಜವನ್ನು ನಿರ್ಮಿಸುವ ಮೂಲಕ ಹೊಸ ಗಿನ್ನಿಸ್ ವಿಶ್ವ ದಾಖಲೆ ಮಾಡಿತು.
ದೇಶದ ಸ್ವಾತಂತ್ರ್ಯದ 75ನೇ ವರ್ಷವನ್ನು ಸ್ಮರಿಸುವ ಆಜಾದಿ ಕಾ ಅಮೃತ್ ಮಹೋತ್ಸವದ ನೆನಪಿಗಾಗಿ ಅತಿದೊಡ್ಡ ಮಾನವ ಸರಪಳಿ ಬಳಸಿ ತ್ರಿವರ್ಣ ಧ್ವಜವನ್ನು ರೂಪಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನದಲ್ಲಿ ತನ್ನ ಹೆಸರನ್ನು ನೋಂದಾಯಿಸಿ ಛಾಪು ಮೂಡಿಸಿದೆ.
'ಹರ್ ಘರ್ ತಿರಂಗಾ': ಬಿಜೆಪಿ ನಾಯಕರ ಮನೆ ಮೇಲೆ ಧ್ವಜ
ಬರೋಬ್ಬರಿ 7,500 ವಿದ್ಯಾರ್ಥಿಗಳು ತಿರಂಗಾ ವೇಷ ಧರಿಸಿ ಮಾನವ ಸರಪಳಿ ರಚಿಸಿದರು. ಕೇಂದ್ರ ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ, ಚಂಡೀಗಢದ ಆಡಳಿತಾಧಿಕಾರಿ ಬನ್ವಾರಿಲಾಲ್ ಪುರೋಹಿತ್ ಮತ್ತು ಕುಸ್ತಿಪಟು ಯೋಗೇಶ್ವರ್ ದತ್ ಎನ್ಐಡಿ ಫೌಂಡೇಶನ್ ಮತ್ತು ಚಂಡೀಗಢ ವಿಶ್ವವಿದ್ಯಾಲಯ ಆಯೋಜಿಸಿದ್ದ ಈ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಚಂಡೀಗಢದ ಆಡಳಿತಾಧಿಕಾರಿ ಬನ್ವಾರಿಲಾಲ್ ಪುರೋಹಿತ್ ಅವರು ಗಿನ್ನಿಸ್ ದಾಖಲೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರತಿಯೊಬ್ಬರು ತಮ್ಮ ನಿವಾಸಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಒತ್ತಾಯಿಸಿದರು. ವಿಶ್ವದಾಖಲೆಯನ್ನು ಯಶಸ್ವಿಯಾಗಿ ರಚಿಸುವ ಮೂಲಕ ಭಾರತದ 75ನೇ ಸ್ವಾತಂತ್ರ್ಯೋತ್ಸವದಂದು ಇಡೀ ವಿಶ್ವಕ್ಕೆ ಮಹತ್ತರ ಸಂದೇಶವನ್ನು ನೀಡಿದ್ದಾರೆ ಎಂದರು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡದ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಮಾನವ ಧ್ವಜದ ರೂಪದಲ್ಲಿ ಸರತಿ ಸಾಲಿನಲ್ಲಿ ನಿಂತು ಗಾಳಿಯಲ್ಲಿ ಹಾರಾಡುವ ತ್ರಿವರ್ಣ ಧ್ವಜದಂತಹ ಆಕಾರವನ್ನು ನಿರ್ಮಿಸಿದರು.
ಹರ್ ಘರ್ ತಿರಂಗ: ದೇಶಾದ್ಯಂತ ತ್ರಿವರ್ಣ ಧ್ವಜದ ಕಲರವ
ಸಮಾರಂಭದಲ್ಲಿ ಉಪಸ್ಥಿತರಿದ್ದ ಗಿನ್ನೆಸ್ ವಿಶ್ವ ದಾಖಲೆಗಳ ತೀರ್ಪುಗಾರರ ಅಧಿಕಾರಿ ಸ್ವಪ್ನಿಲ್ ದಂಗಾರಿಕರ್ ಅವರು ದಾಖಲೆಯನ್ನು ಪರಿಶೀಲಿಸಿದರು. ಬಳಿಕ ರಾಷ್ಟ್ರೀಯ ಧ್ವಜ ಹಾರಾಡುತ್ತಿರುವ ಮಾದರಿಯಲ್ಲಿ ಜಗತ್ತಿನ ಅತಿದೊಡ್ಡ ಮಾನವ ಚಿತ್ರಕ್ಕಾಗಿ ವಿಶ್ವ ದಾಖಲೆ ಸೃಷ್ಟಿಯಾಗಿದೆ. ಈ ಹಿಂದೆ ಅಬುದಲ್ಲಿ ಜಿಇಎಂಎಸ್ ಶಿಕ್ಷಣದಿಂದ ಸಾಧಿಸಲಾಗಿತ್ತು. ಇಂದಿನ ಕಾರ್ಯಕ್ರಮದಲ್ಲಿ ಎನ್ಐಡಿ ಫೌಂಡೇಶನ್ ಮತ್ತು ಚಂಡೀಗಢ ವಿಶ್ವವಿದ್ಯಾನಿಲಯವು ಆ ದಾಖಲೆ ಮುರಿದು ಹೊಸ ವಿಶ್ವ ದಾಖಲೆಯನ್ನು ರಚಿಸಿದೆ ಎಂದರು.
7,500ಕ್ಕೂ ಹೆಚ್ಚು ಮಂದಿಯಿಂದ ಧ್ವಜ ಮಾದರಿ ಹಾರಾಟ
ಯುಎಇ 2017ರಲ್ಲಿ 4130 ಜನರೊಂದಿಗೆ ರಾಷ್ಟ್ರಧ್ವಜವನ್ನು ಬೀಸುವ ಅತಿದೊಡ್ಡ ಮಾನವ ಚಿತ್ರಕ್ಕಾಗಿ ದಾಖಲೆಯನ್ನು ಸಾಧಿಸಿತ್ತು. ಆದರೆ ಇಲ್ಲಿ7,500ಕ್ಕೂ ಹೆಚ್ಚು ಹುಡುಗರು ಮತ್ತು ಹುಡುಗಿಯರು ಬೀಸುವ ರಾಷ್ಟ್ರೀಯ ಧ್ವಜದ ಮಾದರಿಯನ್ನು ವಿಶ್ವದ ಅತಿದೊಡ್ಡ ಮಾನವ ಚಿತ್ರವನ್ನು ರೂಪಿಸುವ ಮೂಲಕ ಭಾರತವು ಆರಾಮವಾಗಿ ದಾಖಲೆಯನ್ನು ಮುರಿದಿದೆ ಎಂದು ಹೇಳಿದರು.
ನನ್ನ ಹೃತ್ಪೂರ್ವಕ ಅಭಿನಂದನೆ
ಈ ಕಾರ್ಯಕ್ರಮ ನಾನು ಊಹಿಸಿದ್ದಕ್ಕಿಂತಲೂ ದೊಡ್ಡದಾಗಿದೆ. ಚಂಡೀಗಢ ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ಎನ್ಐಡಿ ಫೌಂಡೇಶನ್ ಮುಖ್ಯ ಪೋಷಕ ಎಸ್. ಸತ್ನಮ್ ಸಿಂಗ್ ಸಂಧು ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ತಂಡವು ಈ ಸಾಧನೆಯನ್ನು ಮಾಡಿದೆ. ಇದು ಅವರ ಸಂಸ್ಥೆಗಳು ಮಾತ್ರವಲ್ಲ ಚಂಡೀಗಢ ಮತ್ತು ಇಡೀ ದೇಶ ಹೆಮ್ಮೆಪಡುವ ವಿಷಯವಾಗಿದೆ ಎಂದು ಪುರೋಹಿತ್ ಹೇಳಿದರು.
ಇದು ಶ್ಲಾಘನೀಯ ಕಾರ್ಯ
ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಲು ಎನ್ಐಡಿ ಫೌಂಡೇಶನ್ ಮತ್ತು ಚಂಡೀಗಢ ವಿಶ್ವವಿದ್ಯಾನಿಲಯವು ಜನರನ್ನು ಒಟ್ಟುಗೂಡಿಸಲು ಸಮರ್ಥವಾಗಿದೆ. ಇದು ಶ್ಲಾಘನೀಯ ಕಾರ್ಯವಾಗಿದೆ. ಭಾರತದಲ್ಲಿ ಒಳ್ಳೆಯ ಕಾರ್ಯಕ್ರಮದ ಯಶಸ್ಸಿಗೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.
ಭಗತ್ ಸಿಂಗ್ರನ್ನು ಭಯೋತ್ಪಾದಕ ಎನ್ನತ್ತಾರೆ
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಲೇಖಿ, ಯಾವುದೇ ಕತ್ತಿಯಿಲ್ಲದೆ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ನಾನು ನಂಬುವುದಿಲ್ಲ. ಇದನ್ನು ಆಗಾಗ್ಗೆ ಹೇಳಲಾಗುತ್ತದೆ. ಭಗತ್ ಸಿಂಗ್ ಅವರಂತಹ ಅನೇಕ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಕೆಲವರು, ತಮ್ಮ ರಾಜಕೀಯಕ್ಕಾಗಿ, ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಕರೆಯುತ್ತಾರೆ. ಆದರೆ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅವರು ನೀಡಿದ ಅರ್ಪಣೆ ಅವಿಸ್ಮರಣೀಯವಾಗಿದೆ. ಅವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂದು ಅವರು ಹೇಳಿದರು.