Chandrayaan-3: ಕೇರಳದ ಭದ್ರಕಾಳಿ ದೇಗುಲದಲ್ಲಿ ಇಸ್ರೋ ಅಧ್ಯಕ್ಷರ ವಿಶೇಷ ಪೂಜೆ
ತಿರುವನಂತಪುರ: ಭಾರತಕ್ಕೆ ಇಸ್ರೋ ಮೂಲಕ ದೊಡ್ಡ ಹೆಸರು ಬಂದಿದೆ. ಚಂದ್ರಯಾನ 3 ಯೋಜನೆ ಮೂಲಕ ಅಸಾಧ್ಯವಾದ ವಿಚಾರದಲ್ಲಿ ಭಾರತ ಮಹಾನ್ ಸಾಧನೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಎಂಬ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಈ ಖುಷಿಯಲ್ಲಿ 'ಇಸ್ರೋ' ಅಧ್ಯಕ್ಷರು ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಸ್ರೋ ಅಧ್ಯಕ್ಷರು ಚಂದ್ರಯಾನ-3 ಲಾಂಚ್ಗೆ ಮೊದಲು ಕೂಡ, ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದೀಗ ಯೋಜನೆ ಯಶಸ್ಸಿನ ಬಳಿಕ ಕೇರಳದ ತಿರುವನಂತಪುರಕ್ಕೆ ಭೇಟಿ ನೀಡಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್. ಸೋಮನಾಥ್, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೌರ್ಣಮಿ-ಭದ್ರಕಾಳಿ ದೇವಾಲಯದಲ್ಲಿ ಎಸ್.ಸೋಮನಾಥ್ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಇಸ್ರೋ ಮಾಡಿದ ಸಾಧನೆ ಬಗ್ಗೆ ಅವರು ಸಂತಸ ಹಂಚಿಕೊಂಡಿದ್ದಾರೆ. ಹಾಗಾದರೆ ಇಸ್ರೋ ಅಧ್ಯಕ್ಷರು ಏನಂದ್ರು? ಮುಂದೆ ಓದಿ.

ಮತ್ತಷ್ಟು ಯೋಜನೆಗೆ ಇಸ್ರೋ ಸನ್ನದ್ಧ!
ಇನ್ನು ಪೌರ್ಣಮಿ-ಭದ್ರಕಾಳಿ ದೇವಾಲಯದಲ್ಲಿ ಎಸ್.ಸೋಮನಾಥ್ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು. ದೇಶದ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರದೃಷ್ಟಿ ಇದೆ. ಕನಸನ್ನು ನನಸಾಗಿಸಲು ಇಸ್ರೋ ಸಿದ್ದವಾಗಿದೆ. ಭಾರತ ಮತ್ತಷ್ಟು ಯೋಜನೆಗಳನ್ನ ನಡೆಸಲು ಸಮರ್ಥವಾಗಿದೆ. ಬಾಹ್ಯಾಕಾಶ ಕ್ಷೇತ್ರ ವಿಸ್ತರಣೆ ಮೂಲಕ ದೇಶದ ಒಟ್ಟಾರೆ ಪ್ರಗತಿ ನಮ್ಮ ಗುರಿಯಾಗಿದೆ ಅಂತಾ ಎಸ್. ಸೋಮನಾಥ್ ಅವರು ಈ ವೇಳೆ ತಿಳಿಸಿದ್ದಾರೆ. ಅಲ್ಲದೆ ಚಂದ್ರಯಾನ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಸೇರಿ ಚಂದ್ರಯಾನ-3 ಯೋಜನೆ ಸಂಪೂರ್ಣ ಯಶಸ್ಸು ಕಂಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸೂರ್ಯನ ಯೋಜನೆಗೆ ಇಸ್ರೋ ಸಜ್ಜು!
ಈಗಾಗಲೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ಇಳಿಸಿ ಸಾಧನೆ ಮಾಡಿರುವ ಇದೇ ಇಸ್ರೋ, ಮುಂದಿನ ಗುರಿಯಾಗಿ ಸೂರ್ಯನನ್ನ ಆಯ್ಕೆ ಮಾಡಿಕೊಂಡಿದೆ. ಈವರೆಗೆ ನಾಸಾ ಬಿಟ್ಟರೆ ಸೂರ್ಯನ ಬಗ್ಗೆ ಯಾವುದೇ ದೇಶ ಯೋಜನೆ ಕೈಗೊಂಡಿಲ್ಲ. ಈಗ ಭಾರತದಿಂದ ಮತ್ತೊಂದು ಮಹತ್ವದ ಸಾಧನೆ ಪಕ್ಕಾ ಆಗಿದೆ. ಇಸ್ರೋ ಅಧ್ಯಕ್ಷರು ಸೂರ್ಯನ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ 'ಆದಿತ್ಯ-ಎಲ್1' ಯೋಜನೆ ಕೈಗೊಳ್ಳಲಿದ್ದು, ಇನ್ನೆರಡು ದಿನಗಳಲ್ಲಿ ದಿನಾಂಕ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ಮತ್ತೊಂದು ಮಹತ್ವದ ಯೋಜನೆಗೆ ದಿನಗಣನೆ ಆರಂಭವಾಗಿದೆ.

ಜಗತ್ತಿಗೇ ತನ್ನ ಶಕ್ತಿ ತೋರಿಸಿದ ಭಾರತ
ಇಸ್ರೋ ಸಂಸ್ಥೆ ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಇಡೀ ಜಗತ್ತಿನ ಮೊದಲ ದೇಶವಾಗಿ ಭಾರತಕ್ಕೆ ಹೆಮ್ಮೆ ತಂದು ಕೊಟ್ಟಿದೆ. ಸೂರ್ಯನ ಬೆಳಕು ಕಾಣದ ಚಂದ್ರನ ದಕ್ಷಿಣ ಧ್ರುವದ ಮೇಲೆ ಜಗತ್ತು ಕಣ್ಣಿಟ್ಟು ಕೂತಿತ್ತು. ಆದರೆ ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗಿ ಅಧ್ಯಯನ ಮಾಡಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಇಸ್ರೋ ಮಾತ್ರ ಯಾವುದೇ ಭಯವಿಲ್ಲದೆ ಚಂದ್ರನ ದಕ್ಷಿಣ ಧ್ರುವಕ್ಕೆ ನುಗ್ಗಿ ತನ್ನ ಲ್ಯಾಂಡರ್ ಅನ್ನ ಯಶಸ್ವಿಯಾಗಿ ಇಳಿಸಿದೆ.
ಒಟ್ನಲ್ಲಿ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರತದ ಇಸ್ರೋ 'ಚಂದ್ರಯಾನ-3' ಯೋಜನೆ ಕೈಗೊಂಡಿತ್ತು. ಚಂದ್ರಯಾನ-3 ಮಿಷನ್ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲೂ ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್ನ್ನು ಹೊತ್ತ ರಾಕೆಟ್ ಯಶಸ್ವಿಯಾಗಿ ಚಂದ್ರನ ಕಕ್ಷೆ ಪ್ರವೇಶ ಮಾಡಿತ್ತು. ಹಾಗೇ ಆಗಸ್ಟ್ 23 ರಂದು ತನ್ನ ಲ್ಯಾಂಡರ್ ಅನ್ನ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿತ್ತು ಇಸ್ರೋ.












Click it and Unblock the Notifications