ಕೊರೊನಾ ಹೆಚ್ಚಾದ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ರಮ ಚುರುಕುಗೊಳಿಸಲು ಸೂಚನೆ
ನವದೆಹಲಿ, ಮಾರ್ಚ್ 6: ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿರುವ ರಾಜ್ಯಗಳಿಗೆ ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರ, "ಟೆಸ್ಟ್, ಟ್ರ್ಯಾಕ್, ಟ್ರೀಟ್" ಎಂಬ ಕಾರ್ಯಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಆದ್ಯತಾ ಜನಸಂಖ್ಯೆಗೆ ಕೊರೊನಾ ಲಸಿಕೆಯನ್ನು ಶೀಘ್ರವೇ ನೀಡುವಂತೆ ಸೂಚಿಸಿದೆ.
ಶನಿವಾರ ಆರೋಗ್ಯ ಸಚಿವಾಲಯ ಈ ಕುರಿತು ಸಭೆ ನಡೆಸಿದ್ದು, ಕೊರೊನಾ ಲಸಿಕೆ ನೀಡುವ ಕುರಿತು ಖಾಸಗಿ ಆಸ್ಪತ್ರೆಗಳೊಂದಿಗೆ ವೇಳಾ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಹೇಳಿದೆ.
ಈಚೆಗೆ ಕೆಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದು, ಅಲ್ಲೆಲ್ಲ ಪರೀಕ್ಷಾ ಪ್ರಕ್ರಿಯೆಯನ್ನು ಚುರುಕುಗೊಳಿಸಲು ನಿರ್ದೇಶಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹಾಗೂ ನೀತಿ ಆಯೋಗದ ಸದಸ್ಯ ವಿನೋದ್ ಕೆ ಪೌಲ್ ಆರೋಗ್ಯ ಕಾರ್ಯದರ್ಶಿಗಳು ಹಾಗೂ ಹಲವು ರಾಜ್ಯಗಳ ರಾಷ್ಟ್ರೀಯ ಆರೋಗ್ಯ ಆಯೋಗದ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದರು.

ದೆಹಲಿಯ ಒಂಬತ್ತು ಜಿಲ್ಲೆಗಳು, ಹರಿಯಾಣದ 15 ಜಿಲ್ಲೆಗಳು, ಆಂಧ್ರದ ಹತ್ತು ಜಿಲ್ಲೆಗಳು, ಒಡಿಶಾದ ಹತ್ತು ಜಿಲ್ಲೆಗಳು ಹಾಗೂ ಹಿಮಾಚಲದ ಒಂಬತ್ತು ಜಿಲ್ಲೆಗಳು, ಉತ್ತರಾಖಂಡದ ಏಳು ಜಿಲ್ಲೆಗಳು, ಗೋವಾದ ಎರಡು ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದು, ಇಲ್ಲಿ ಪರೀಕ್ಷಾ ಪ್ರಕ್ರಿಯೆಯೂ ನಿಧಾನಗತಿಯಾಗಿರುವುದಾಗಿ ತಿಳಿದುಬಂದಿದೆ.
ಇದರಿಂದ ನೆರೆಹೊರೆಯ ರಾಜ್ಯಗಳಿಗೂ ಕೊರೊನಾ ಹರಡುವ ಭೀತಿ ಎದುರಾಗಿದೆ. ಹೀಗಾಗಿ ಇಂಥ ಪ್ರದೇಶಗಳಲ್ಲಿ ಟೆಸ್ಟ್, ಟ್ರ್ಯಾಕ್ ಹಾಗೂ ಟ್ರ್ಯಾಕ್ ಎಂಬ ಕಾರ್ಯಸೂಚಿಯನ್ನು ಪಾಲಿಸಲು ಸೂಚಿಸಲಾಗಿದೆ.












Click it and Unblock the Notifications