Coronavirus: ಭಾರತದಲ್ಲಿ ಮತ್ತೆ ಶುರುವಾದ ಕೊರೊನಾ ಆತಂಕ: 8 ರಾಜ್ಯಗಳಿಗೆ ಕೇಂದ್ರ ಸಚಿವಾಲಯ ಪತ್ರ, ಪತ್ರದಲ್ಲೇನಿದೆ?
ನವದೆಹಲಿ, ಏಪ್ರಿಲ್ 21: ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಎಂಟು ರಾಜ್ಯಗಳಲ್ಲಿ ಕಳೆದೊಂದು ವಾರದಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ರಾಜ್ಯಗಳಿಗೆ ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯವು ಪತ್ರ ಬರೆದಿದೆ.
ದೇಶದಲ್ಲಿ ಕಳೆದ ಒಂದು ವಾರದಿಂದ 10ಸಾವಿರಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಈ ಪೈಕಿ ಉತ್ತರ ಪ್ರದೇಶ, ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಹರಿಯಾಣ ಹಾಗೂ ದೆಹಲಿಯ ಭಾಗದಲ್ಲಿ ಅತ್ಯಧಿಕ ಕೊರೊನಾ ಪ್ರಕರಣಗಳು ಕಂಡು ಬರುವ ಮೂಲಕ ದೇಶಾದ್ಯಂತ ಜನರಲ್ಲಿ ಮತ್ತೆ ಆತಂಕ ಹೆಚ್ಚಾಗುವಂತೆ ಮಾಡಿದೆ.

ಈ ಸಂಬಂದ ಆರೋಗ್ಯ ಸಚಿವಾಲಯ ಕಾರ್ಯದರ್ಶಿಗಳಾದ ಭೂಷಣ್ಈ ಎಂಟು ರಾಜ್ಯಗಳಿಗೆ ಪತ್ರ ಬರೆದಿದೆ.ಅದರಲ್ಲಿ ಕೋವಿಡ್ ಕಣ್ಗಾವಲು ಅನ್ನು ಬಲಪಡಿಸುವಂತೆ ಸೂಚಿಸಿದೆ. ಈ ಕುರಿತು ನಿಮ್ಮ ರಾಜ್ಯಗಳ ಎಲ್ಲ ಜಿಲ್ಲೆಗಳಲ್ಲು ಕ್ರಮ ವಹಿಸಬೇಕು. ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ನಿತ್ಯ ಹತ್ತು ಸಾವಿರಕ್ಕೂ ಅಧಿಕ ಪ್ರಕರಣ ದಾಖಲು
ಭಾರತದಲ್ಲಿ ಹಿಂದಿನ ತಿಂಗಳು ಮಾರ್ಚ್ 2023 ರಿಂದ ಕೋವಿಡ್-19 ಪ್ರಕರಣಗಳಲ್ಲಿ ಕ್ರಮೇಣ ಏರುಗತಿ ಕಂಡು ಬಂದಿದೆ. ಏಪ್ರಿಲ್ 20ಕ್ಕೆ ಕೊನೆಗೊಂಡಂತೆ ಹಿಂದಿನ ಏಳು ದಿನಗಳಲ್ಲಿ 10,262 ಪ್ರಕರಣಗಳು ವರದಿ ಆಗಿವೆ. ಕೊರೊನಾ ಪಾಸಿಟಿವಿಟಿ ದರದಲ್ಲೂ ಏರಿಕೆ ಆಗಿದೆ. ಕಳೆದ ವಾರದಲ್ಲಿ ಶೇಕಡಾ 5.5 ಪ್ರತಿಶತ ಕೋವಿಡ್ ಪಾಸಿಟಿವಿಟಿ ಇದ್ದು, ಅದರ ಹಿಂದಿನ ವಾರ ಕೇವಲ ಶೇಕಡಾ 4.7 ಪ್ರತಿಶತ ಸಕಾರಾತ್ಮಕತೆ ವರದಿಯಾಗಿದ್ದರಿಂದ ಆತಂಕ ಹೆಚ್ಚಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಎಂಟು ರಾಜ್ಯಗಳು ಜಿಲ್ಲೆಯಾದ್ಯಂತ ಕೊರೊನಾ ತಪಾಸಣೆ ಹೆಚ್ಚಿಸಬೇಕು. ಉಸಿರಾಟ ತೊಂದರೆ ಇರುವವರ ಮೇಲೆ ಹೆಚ್ಚು ಗಮನ ಹರಿಸಬೇಕು. ಸಂಗ್ರಹಿಸುವ ಮಾದರಿಯನ್ನು ಜೀನೋಮಿಕ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸುವ, ಕೈಗೊಂಡ ಕ್ರಮಗಳ ಬಗ್ಗೆ ಸಚಿವಾಲಯ ರಾಜ್ಯಗಳಿಂದ ಖಚಿತ ಮಾಹಿತಿ ಕೇಳಿದೆ.

ಪರಿಸ್ಥಿತಿ ಹದಗೆಡದಂತೆ ಮೇಲ್ವಿಚಾರಣೆ ಮಾಡಿ
ಕೊರೊನಾ ಸಾಂಕ್ರಾಮಿಕ ಪಿಡುಗು ಸಂಪೂರ್ಣವಾಗಿ ಅಂತ್ಯವಾಗಿಲ್ಲ. ಯಾವುದೇ ಹಂತದಲ್ಲೂ ನಾನು ನಿರ್ಲಕ್ಷ್ಯ ವಹಿಸದೇ ಸದಾ ಜಾಗರೂಕರಾಗಿರಬೇಕು. ನಿತ್ಯ ವರದಿಯಾಗುತ್ತಿರುವ ಕೋವಿಡ್ ದಾಖಲಾತಿ ಆಧಾರದಲ್ಲಿ ನಿರ್ವಹಣೆ ಬಗ್ಗೆ ಕ್ರಮ ವಹಿಸಬೇಕು. ಆರೋಗ್ಯ ಇಲಾಖೆಯು ಅನಾರೋಗ್ಯ ಪರಿಸ್ಥಿತಿ ಉದ್ಭವಿಸದಂತೆ ಮೇಲ್ವಿಚಾರಣೆ ಮಾಡುತ್ತಿರಬೇಕು ಎಂದು ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಕೊರೊನಾ ಹೆಚ್ಚುತ್ತಿರುವ ಸಂಬಂಧ ಬುಧವಾರ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರು ದೇಶದ ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು.
ಇಂದು 11,692 ಕೊರೊನಾ ಕೇಸ್ ಪತ್ತೆ
ಶುಕ್ರವಾರ ಬೆಳಗ್ಗೆ ಅಂತ್ಯಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಭಾರತದಲ್ಲಿ ಬರೊಬ್ಬರಿ 11,692 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಒಂದೇ ದಿನ 28 ಸಾವುಗಳ ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ
ಹೊಸದಾಗಿ ಪತ್ತೆಯಾದ ಕೊರೊನಾ ಪ್ರಕರಣದಿಂದಾಗಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 66,170ಕ್ಕೆ ಏರಿಕೆ ಆಗಿದೆ. ಒಂದು ದಿನದ ಒಟ್ಟು (28) ಸಾವುಗಳ ಪೈಕಿ ಕೇರಳ ಒಂದರಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಹೆಚ್ಚುತ್ತಿರುವ ಕೋವಿಡ್-19 ಪ್ರಕರಣದಿಂದ ಉತ್ತರ ಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ಸೇರಿದಂತೆ ಎಂಟು ರಾಜ್ಯಗಳಿಗೆ ಕಟ್ಟುನಿಟ್ಟಾದ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.












Click it and Unblock the Notifications