ಇನ್ಮುಂದೆ ಆಧಾರ್ ಇದ್ರೆ ಅಷ್ಟೇ ಪಡಿತರ ಆಹಾರ, ಇಲ್ಲಂದ್ರೆ ಇಲ್ಲ
ಇನ್ಮುಂದೆ ಪ್ರತಿಯೊಂದಕ್ಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ಎಲ್ಲಾ ರೀತಿ ಸಿದ್ಧತೆಗಳು ನಡೆದಿವೆ. ಅದರಂತೆ ಈಗ ಪಡಿತ ಆಹಾರ ಪದಾರ್ಥಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನವದೆಹಲಿ, ಫೆಬ್ರವರಿ. 10 : ನರೇಗಾ ಕೂಲಿ ಕಾರ್ಮಿಕರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ ಬೆನ್ನಲ್ಲೇ ಪಡಿತರ ಆಹಾರ ಪದಾರ್ಥಗಳನ್ನು ಪಡೆಯಲು ಆಧಾರ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಫೆಬ್ರವರಿ 8ರಿಂದಲೇ ಇದು ಜಾರಿಗೆ ಬಂದಿದ್ದು ಆಧಾರ್ ಇಲ್ಲದವರಿಗೆ ನೋಂದಣಿ ಮಾಡಿಸಲು ಜೂನ್ 30ರವರೆಗೆ ಗಡುವು ನೀಡಲಾಗಿದೆ.
ಅಸ್ಸಾಂ, ಮೇಘಾಲಯ, ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಆಹಾರ ಧಾನ್ಯಗಳನ್ನು ಪಡೆಯಲು ಆಧಾರ ಕಡ್ಡಾಯಗೊಳಿಸಲಾಗುತ್ತಿದೆ.[ಏ. 1ರಿಂದ ನರೇಗಾ ಕೂಲಿ ಕಾರ್ಮಿಕರಿಗೂ ಆಧಾರ್ ಕಡ್ಡಾಯ]

ದೇಶದಲ್ಲಿ ಒಟ್ಟು 23 ಕೋಟಿ ಜನರು ಪಡಿತರ ಚೀಟಿಗಳನ್ನು ಹೊಂದಿದ್ದಾರೆ. 16.62 ಕೋಟಿ ಜನರಷ್ಟೇ ತಮ್ಮ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿಸಿದ್ದಾರೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಸಹಾಯಧನದಲ್ಲಿ ಆಹಾರ ಧಾನ್ಯ ಪೂರೈಸಲಾಗುತ್ತಿದೆ ಎಂದರು.[ಎಲ್ಲ ಮೊಬೈಲ್ ಸಂಖ್ಯೆಯೂ ವರ್ಷದೊಳಗೆ ಆಧಾರ್ ಜತೆಗೆ ಲಿಂಕ್ ಆಗಿರ್ಬೇಕು: ಸುಪ್ರೀಂ]
ಆಹಾರ ಭದ್ರತೆ ಕಾಯ್ದೆಯಡಿ ನೀಡಲಾಗುವ 1.4 ಲಕ್ಷ ಕೋಟಿಯಷ್ಟು ಸಹಾಯಧನ ಫಲಾನುಭವಿಗಳಿಗೆ ಸರಿಯಾಗಿ ತಲುಪಬೇಕು ಎಂಬ ಉದ್ದೇಶದಿಂದ ಪಡಿತರ ಅಂಗಡಿಯಿಂದ ಆಹಾರಧಾನ್ಯಗಳನ್ನು ಖರೀದಿಸಲು ಆಧಾರ್ ನೋಂದಣಿ ಕಡ್ಡಾಯಗೊಳಿಸಲಾಗುತ್ತಿದೆ.
ಜೂನ್ 30ರೊಳಗೆ ಆಧಾರ್ ನೋಂದಣಿ ಆಗದವರು ಪಡಿತರ ಚೀಟಿಯ ಜತೆಗೆ ಆಧಾರ್ ನೋಂದಣಿಗಾಗಿ ಸಲ್ಲಿಸಿದ ಅರ್ಜಿಯ ರಶೀದಿಯ ಪ್ರತಿ ನೀಡಿದರೆ ಸಾಕು.
ಆದರೆ, ಜತೆಗೆ ನಿಗದಿಪಡಿಸಲಾದ ಮತದಾರರ ಗುರುತು ಚೀಟಿ, ಪ್ಯಾನ್, ಪಾಸ್ಪೋರ್ಟ್, ಚಾಲನಾ ಪರವಾನಗಿ, ತಹಸೀಲ್ದಾರ್ ಅಥವಾ ಗೆಜೆಟೆಡ್ ಅಧಿಕಾರಿ ನೀಡಿದ ಭಾವಚಿತ್ರ ಸಹಿತ ಪ್ರಮಾಣಪತ್ರ, ಅಂಚೆ ಇಲಾಖೆ ನೀಡಿರುವ ಭಾವಚಿತ್ರ ಹೊಂದಿರುವ ವಿಳಾಸ ಪತ್ರ, ಕಿಸಾನ್ ಪಾಸ್ ಬುಕ್ ಇವುಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕು.












Click it and Unblock the Notifications