ಕರ್ನಾಟಕ ಸೇರಿ 6 ರಾಜ್ಯಗಳಿಗೆ 4381 ಕೋಟಿ ಹೆಚ್ಚುವರಿ ನೆರವು ಘೋಷಿಸಿದ ಕೇಂದ್ರ
ನವದೆಹಲಿ, ನವೆಂಬರ್ 13: ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ (ಎಚ್ಎಲ್ಸಿ) ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ 4,381.88 ಕೋಟಿ ರೂ ನೆರವು ನೀಡಲು ಅನುಮೋದನೆ ನೀಡಿದೆ. ಪ್ರಸಕ್ತ ವರ್ಷ ಚಂಡಮಾರುತ, ಪ್ರವಾಹ ಮತ್ತು ಭೂಕುಸಿತಗಳಿಂದ ಹಾನಿಗೊಳಗಾದ ರಾಜ್ಯಗಳಿಗೆ ಈ ನೆರವು ನೀಡಲಾಗುತ್ತಿದೆ.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ (ಎನ್ಡಿಆರ್ಎಫ್) ಅಡಿಯಲ್ಲಿ ಕೇಂದ್ರ ಸರ್ಕಾರವು ಈ ಅನುದಾನವನ್ನು ಬಿಡುಗಡೆ ಮಾಡಿದೆ.
ಮೋದಿ ಎದುರು ಮಾತನಾಡುವ ಧೈರ್ಯ ಇರದಿದ್ರೆ ನನ್ನನ್ನು ಕರೆದೊಯ್ಯಿರಿ!
ಅನುದಾನ ವಿತರಣೆ ಹೇಗೆ?
* 'ಅಂಫಾನ್' ಚಂಡಮಾರುತದಿಂದ ಹಾನಿಗೊಳಗಾದ ಪಶ್ಚಿಮ ಬಂಗಾಳಕ್ಕೆ 2,707.77 ಕೋಟಿ ರೂ ಮತ್ತು ಒಡಿಶಾಕ್ಕೆ 128.23 ಕೋಟಿ ರೂ ನೀಡಲಾಗಿದೆ.
* ಮಹಾರಾಷ್ಟ್ರಕ್ಕೆ 'ನಿಸರ್ಗ' ಚಂಡಮಾರುತದಿಂದ ಉಂಟಾದ ಹಾನಿಗಾಗಿ 268.59 ಕೋಟಿ ರೂ ಮಂಜೂರು ಮಾಡಲಾಗಿದೆ.
* ನೈಋತ್ಯ ಮುಂಗಾರಿನಿಂದ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ತೀವ್ರ ನಷ್ಟ ಅನುಭವಿಸಿದ ಕರ್ನಾಟಕಕ್ಕೆ 577.84 ರೂ. ನೆರವು ಮಂಜೂರು ಮಾಡಲಾಗಿದೆ. ಜತೆಗೆ ಮಧ್ಯಪ್ರದೇಶಕ್ಕೆ 611.61 ಕೋಟಿ ರೂ ಮತ್ತು ಸಿಕ್ಕಿಂಗೆ 87.84 ಕೋಟಿ ರೂ. ನೀಡಲಾಗಿದೆ.
ಬೆಂಗಳೂರು ಮಳೆ: ಹಾನಿಗೊಳಗಾದ ಕುಟುಂಬಕ್ಕೆ 25,000 ಪರಿಹಾರ
ಮಧ್ಯಂತರ ಪರಿಹಾರ
ಅಂಫಾನ್ ಚಂಡಮಾರುತದ ಅಬ್ಬರದ ಬಳಿಕ ಅಪಾರ ಹಾನಿಗೊಳಗಾದ ಪಶ್ಚಿಮ ಬಂಗಾಳಕ್ಕೆ 1,000 ಕೋಟಿ ರೂ ಮತ್ತು ಒಡಿಶಾಗೆ 500 ಕೋಟಿ ರೂ. ಮಧ್ಯಂತರ ಪರಿಹಾರವನ್ನು ಮೇ 22ರಂದು ಪ್ರಧಾನಿ ಮೋದಿ ಘೋಷಿಸಿದ್ದರು. ಆಗ ಅವರು ಈ ಎರಡೂ ರಾಜ್ಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದ್ದರು.
ಜತೆಗೆ, ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಹಾಗೂ ಗಾಯಾಳುಗಳಿಗೆ 50,000 ರೂ ನೆರವನ್ನು ಕೂಡ ಪ್ರಧಾನಿ ಘೋಷಿಸಿದ್ದರು.
ಈ ಆರು ರಾಜ್ಯಗಳಲ್ಲಿ ವಿಪತ್ತು ಸಂಭವಿಸಿದ ಕೂಡಲೇ ಕೇಂದ್ರ ಸರ್ಕಾರವು ಅಂತರ್ ಸಚಿವಾಲಯಗಳ ಕೇಂದ್ರ ತಂಡಗಳನ್ನು (ಐಎಂಸಿಟಿ) ನಿಯೋಜನೆ ಮಾಡಿತ್ತು. 2020-21ರ ಅವಧಿಯಲ್ಲಿ ಇದುವರೆಗೂ ಕೇಂದ್ರ ಸರ್ಕಾರವು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 28 ರಾಜ್ಯಗಳಿಗೆ 15,524.43 ಕೋಟಿ ರೂ. ಬಿಡುಗಡೆ ಮಾಡಿದೆ.