ಮೇ 3ರ ನಂತರ ದೇಶದ ಪರಿಸ್ಥಿತಿ ಇನ್ನಷ್ಟು ವಿಷಮ: ಮನಮೋಹನ್ ಸಿಂಗ್
ನವದೆಹಲಿ, ಏಪ್ರಿಲ್ 25: "ಕೊರೊನಾ ವೈರಸ್ ವಿರುದ್ದ ಜಯಸಾಧಿಸಬೇಕಾದರೆ, ರಾಜ್ಯ ಮತ್ತು ಕೇಂದ್ರದ ನಡುವೆ ಹೊಂದಾಣಿಕೆ ಅತಿಮುಖ್ಯ"ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಮಾತನಾಡುತ್ತಿದ್ದ ಸಿಂಗ್, "ಕೊರೊನಾ ಹೋರಾಟದಲ್ಲಿ ಹಲವಾರು ವಿಷಯಗಳ ಬಗ್ಗೆ ಗಮನಹರಿಸುವುದು ಅವಶ್ಯಕವಾಗಿದೆ, ಜೊತೆಗೆ, ಇದು ನಮ್ಮಲ್ಲಿರುವ ಸಂಪನ್ಮೂಲಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಹೇಳಿದ್ದಾರೆ.
'ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹರಡುತ್ತಲೇ ಇದೆ. ದೇಶದ ಎಲ್ಲಾ ನಾಗರೀಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದರೆ ಮಾತ್ರ ಈ ಸೋಂಕನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯ"ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

"ಈ ಸೋಂಕಿನಿಂದ ಹೊರಬರುವ ಪರ್ಯಾಯ ಮಾರ್ಗ ನಮ್ಮಲ್ಲಿ ಸದ್ಯಕ್ಕಿಲ್ಲ. ಮೇ ಮೂರರ ನಂತರ, ದೇಶದ ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳುವ ಸಾಧ್ಯತೆಯಿಲ್ಲದಿಲ್ಲ"ಎಂದು ಸಿಂಗ್ ಹೇಳಿದ್ದಾರೆ.
"ಸರಕಾರ ಘೋಷಿಸಿದ ಪಡಿತರ ಇನ್ನೂ ಜನರಿಗೆ ತಲುಪಲಿಲ್ಲ. ಲಾಕ್ ಡೌನ್ ನಿಂದ ಸಣ್ಣ, ಮಧ್ಯಮವರ್ಗ ತುಂಬಾ ತೊಂದರೆಯನ್ನು ಅನುಭವಿಸುತ್ತಿದೆ. ದೇಶದಲ್ಲಿ ಪಿಪಿಇ ಕಿಟ್ ಅನ್ನು ಆದಷ್ಟು ಬೇಗ ಪೂರೈಸಬೇಕಿದೆ" ಎಂದು ಸಿಂಗ್ ಹೇಳಿದ್ದಾರೆ.
"ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಚಾರದಲ್ಲಿ ಕಾಂಗ್ರೆಸ್ ಈಗಾಗಲೇ ಕೇಂದ್ರ ಸರಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದೆ. ಆದರೆ, ಲಾಕ್ ಡೌನ್ ಈಗ ಸಾಗುತ್ತಿರುವ ಹಾಗೇ ಮುಂದಿನ ದಿನಗಳಲ್ಲೂ ಸಾಗಿದರೆ ಮತ್ತು ಮೇ ಮೂರರ ನಂತರ ಲಾಕ್ ಡೌನ್ ಹಿಂದಕ್ಕೆ ಪಡೆದುಕೊಂಡರೆ, ಪರಿಸ್ಥಿತಿ ಗಂಭೀರವಾಗಲಿದೆ" ಎಂದು ಸಿಡಬ್ಲ್ಯುಸಿ ಸಭೆಯಲ್ಲಿ ಸೋನಿಯಾ ಗಾಂಧಿ ಎಚ್ಚರಿಕೆಯನ್ನು ನೀಡಿದ್ದರು.












Click it and Unblock the Notifications