ಶೀಘ್ರದಲ್ಲೇ ಸಿಡಿಎಸ್ ನೇಮಕ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ನವದೆಹಲಿ, ಜೂನ್ 14: "ರಕ್ಷಣಾ ಸಿಬ್ಬಂದಿ ಅಥವಾ ಸಿಡಿಎಸ್ನ ನೂತನ ಮುಖ್ಯಸ್ಥರ ನೇಮಕವನ್ನು ಶೀಘ್ರದಲ್ಲೇ ಮಾಡಲಾಗುವುದು ಮತ್ತು ಅದರ ಪ್ರಕ್ರಿಯೆಯು ನಡೆಯುತ್ತಿದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಹುದ್ದೆ ಖಾಲಿಯಾಗಿದೆ. 2021ರ ಡಿಸೆಂಬರ್ 8ರಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರ್ ಬಳಿ ಜನರಲ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ವಾಯುಸೇನೆಯ ಹೆಲಿಕಾಪ್ಟರ್ ಅಪಘಾತಗೊಂಡಿತ್ತು.
"ಸಿಡಿಎಸ್ ನೇಮಕಾತಿಯನ್ನು ಶೀಘ್ರದಲ್ಲೇ ಮಾಡಲಾಗುವುದು. ಅದರ ಪ್ರಕ್ರಿಯೆಯು ನಡೆಯುತ್ತಿದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಶಸ್ತ್ರ ಪಡೆಗಳ "ಅಗ್ನಿಪಥ್" ನೇಮಕಾತಿ ಯೋಜನೆಯ ಬಗ್ಗೆ ಮಾಹಿತಿ ನೀಡುವ ವೇಳೆ ಹೇಳಿದ್ದಾರೆ.

ಜೂನ್ ಆರಂಭದಲ್ಲಿ ಸರ್ಕಾರವು ಅಧಿಸೂಚನೆಗಳನ್ನು ಹೊರಡಿಸಿದೆ. ಉನ್ನತ ಸ್ಥಾನಕ್ಕಾಗಿ ಆಯ್ಕೆ ಮಾಡಲು ಪ್ರಕ್ರಿಯೆ ಪ್ರಾರಂಭಿಸಿದೆ. ಹೊಸ ನಿಯಮಗಳ ಪ್ರಕಾರ, 62 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಸೇವೆಯಲ್ಲಿರುವ ಅಥವಾ ನಿವೃತ್ತ ಲೆಫ್ಟಿನೆಂಟ್ ಜನರಲ್, ಏರ್ ಮಾರ್ಷಲ್ ಮತ್ತು ವೈಸ್-ಅಡ್ಮಿರಲ್ ಅವರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಹುದ್ದೆ ನೇಮಕಾತಿಗೆ ಅರ್ಹರಾಗಿರುತ್ತಾರೆ.
ಸೇನೆ, ವಾಯುಪಡೆ ಮತ್ತು ನೌಕಾಪಡೆ ಕಾಯಿದೆಗಳಿಗೆ ಮಾಡಲಾದ ಬದಲಾವಣೆಗಳ ಪ್ರಕಾರ ತ್ರಿ-ಸ್ಟಾರ್ ಅಧಿಕಾರಿಗಳು ಈಗ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಲು ಅರ್ಹರಾಗಿದ್ದಾರೆ. ಜನರಲ್ ಬಿಪಿನ್ ರಾವತ್ ಜನವರಿ 1, 2020 ರಂದು ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಕಾರ್ಯಚಟುವಟಿಕೆಗಳಲ್ಲಿ ಸಮನ್ವಯತೆ ತರಲು ಮತ್ತು ದೇಶದ ಒಟ್ಟಾರೆ ಮಿಲಿಟರಿ ಪರಾಕ್ರಮವನ್ನು ಹೆಚ್ಚಿಸಲು ಶ್ರಮಿಸಿದ್ದರು.

ಥಿಯೇಟರ್ ಕಮಾಂಡ್ಗಳ ಸ್ಥಾಪನೆ ಸೇರಿದಂತೆ, ಕಾರ್ಯಾಚರಣೆಗಳನ್ನು ಜಂಟಿಯಾಗಿ ಮಾಡುವ ಮೂಲಕ ಸಂಪನ್ಮೂಲಗಳ ಅತ್ಯುತ್ತಮ ಬಳಕೆಗಾಗಿ ಮಿಲಿಟರಿ ಆಜ್ಞೆಗಳ ಪುನಃರಚನೆಯನ್ನು ಸುಲಭಗೊಳಿಸುವುದು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಮತ್ತೊಂದು ಪ್ರಮುಖ ಪಾತ್ರವಾಗಿದೆ.
ಮೂರು ಸೇನೆಗಳ ಬಗ್ಗೆ ಒಂದೇ ಕೇಂದ್ರದಿಂದ ಮಾಹಿತಿ ಪಡೆಯಲು ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಯನ್ನು ಸೃಷ್ಟಿಸಲು ಉದ್ದೇಶಿಸಲಾಯಿತು. 2019ರ ಜನವರಿ 11ರಂದು ಈ ಹುದ್ದೆಗೆ ಮೊದಲಿಗರಾಗಿ ಜನರಲ್ ಬಿಪಿನ್ ರಾವತ್ ಅಧಿಕಾರ ವಹಿಸಿಕೊಂಡಿದ್ದರು.
1999 ರ ಕಾರ್ಗಿಲ್ ಯುದ್ಧದ ಹಿನ್ನೆಲೆಯಲ್ಲಿ ದೇಶದ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಪರಿಶೀಲಿಸಲು ರಚಿಸಲಾದ ಉನ್ನತ ಮಟ್ಟದ ಸಮಿತಿಯು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನು ರಕ್ಷಣಾ ಸಚಿವರಿಗೆ ಸಿಂಗಲ್ ಪಾಯಿಂಟ್ ಮಿಲಿಟರಿ ಸಲಹೆಗಾರರನ್ನಾಗಿ ನೇಮಿಸಲು ಶಿಫಾರಸ್ಸು ಮಾಡಿತ್ತು.












Click it and Unblock the Notifications