ರಾಕೇಶ್ ಅಸ್ಥಾನ ಕೈಲಿದ್ದ ಮಲ್ಯ ಕೇಸ್ ಕತೆ ಏನಾಗಲಿದೆ?
ನವದೆಹಲಿ ಅಕ್ಟೋಬರ್ 24: ಸಿಬಿಐನ ನಂ.1 ಅಲೋಕ್ ವರ್ಮಾ ಹಾಗೂ ನಂ.2 ರಾಕೇಶ್ ಅಸ್ಥಾನ ನಡುವಿನ ಆಂತರಿಕ ಯುದ್ಧದಿಂದಾಗಿ ಅನೇಕ ಪ್ರಕರಣಗಳ ತನಿಖೆ ಕುಂಠಿತವಾಗಿದೆ ಎಂಬ ಆರೋಪವಿದೆ.
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಬಳಿಕ, ಅವರು ತನಿಖೆ ನಡೆಸುತ್ತಿದ್ದ ಎಲ್ಲ ಪ್ರಕರಣಗಳನ್ನು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮಂಗಳವಾರದಂದು ಹಿಂಪಡೆದಿದ್ದರು.
ಸಿಬಿಐನಲ್ಲಿ ವಿಶೇಷ ತನಿಖಾ ದಳದ ನೇತೃತ್ವ ವಹಿಸಿದ್ದ ಅಸ್ಥಾನಾ ಇನ್ಮುಂದೆ ಕೇವಲ ಸಿಬಿಐ ವಿಶೇಷ ನಿರ್ದೇಶಕರಾಗಿ ಮುಂದುವರಿಯಬೇಕಾಗಿತ್ತು. ಆದರೆ, ಬುಧವಾರದಂದು ಸಂಪೂರ್ಣ ಚಿತ್ರಣ ಬದಲಾಗಿದ್ದು, ರಾಕೇಶ್ ಅಸ್ಥಾನ ಅವರ ಎಲ್ಲಾ ಜವಾಬ್ದಾರಿಗಳನ್ನು ಕಿತ್ತುಕೊಳ್ಳಲಾಗಿದ್ದು, ದೀರ್ಘಕಾಲಿಕ ರಜೆ ಮೇಲೆ ತೆರಳುವಂತೆ ಸೂಚಿಸಲಾಗಿದೆ.
ಸಿಬಿಐ ಹಂಗಾಮಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕ
ಇದಲ್ಲದೆ, ಸಿಬಿಐನ ಹಂಗಾಮಿ ನಿರ್ದೇಶಕರಾಗಿ ಎಂ ನಾಗೇಶ್ವರ್ ರಾವ್ ಅವರನ್ನು ಕೇಂದ್ರ ಸರ್ಕಾರವು ನೇಮಿಸುತ್ತಿದ್ದಂತೆ ಅಲೋಕ್ ವರ್ಮಾ ಅವರಿಗೂ ರಾಕೇಶ್ ಅಸ್ಥಾನ ಸ್ಥಿತಿ ಬಂದೊದಗಿದೆ. ವರ್ಮಾ ಕೂಡಾ ರಜೆ ಮೇಲೆ ತೆರಳಬೇಕಿದೆ. ಪರಿಸ್ಥಿತಿ ಹೀಗಿರುವಾಗ, ರಾಕೇಶ್ ಉಸ್ತುವಾರಿಯಲ್ಲಿ ನಡೆಯುತ್ತಿದ್ದ ಹೈ ಪ್ರೊಫೈಲ್ ಕೇಸುಗಳ ತನಿಖೆ ಕತೆ ಏನು?
ಬಂಧನ ಭೀತಿಯಲ್ಲಿರುವ ರಾಕೇಶ್ ಅಸ್ಥಾನ
ಭ್ರಷ್ಟಾಚಾರ ಆರೋಪ ಹೊತ್ತುಕೊಂಡಿರುವ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಅವರು ಬಂಧನ ಭೀತಿಯಿಂದ ಕೋರ್ಟ್ ಮೊರೆ ಹೊಕ್ಕಿದ್ದರು. ಮಂಗಳವಾರದಂದು ಸಿಬಿಐ ನಂ.2ಗೆ ಮಂಗಳವಾರದಂದು ಮಿಶ್ರಫಲ ಸಿಕ್ಕಿತ್ತು.
ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ಸಲ್ಲಿಸಿರುವ ಪ್ರಕರಣ, ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ರಾಕೇಶ್ ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಆದರೆ, ಮುಂದಿನ ವಿಚಾರಣೆ ತನಕ ಅವರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.
ಯಾವ ಯಾವ ಹೈ ಪ್ರೊಫೈಲ್ ಕೇಸುಗಳಿವೆ
ಗುಜರಾತ್ ಕೆಡರ್ ಐಪಿಎಸ್ ಅಧಿಕಾರಿಯಾಗಿರುವ ಅಸ್ಥಾನ ಹಾಗೂ ತಂಡವು, ಆಗಸ್ಟಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣ ಹಾಗೂ ವಿಜಯ್ ಮಲ್ಯ ವಿರುದ್ಧದ ವಂಚನೆ ಪ್ರಕರಣ, ರಾಬರ್ಟ್ ವದ್ರಾ ಭೂ ಹಗರಣ, ದಯಾನಿಧಿ ಮಾರನ್, ಪಿ ಚಿದಂಬರಂ ಆಕ್ರಮ ಅಸ್ತಿ, ಹರ್ಯಾಣ ಸಿಎಂ ಭೂಪಿಂದರ್ ಹೂಡಾ ಭೂ ಹಗರಣ ಸೇರಿದಂತೆ ಹಲವು ಪ್ರಕರಣಗಳ ವಿಚಾರಣೆ ನಡೆಸುತ್ತಿದೆ. ಆದರೆ, ಈಗ ಅಸ್ಥಾನ ವಿರುದ್ಧ ಅಪರಾಧಿಕ ಸಂಚು, ಭ್ರಷ್ಟಾಚಾರ ಹಾಗೂ ಅಪರಾಧಿಕ ದುರ್ವರ್ತನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈಗ ಈ ಕೇಸುಗಳು ಹಂಗಾಮಿ ನಿರ್ದೇಶಕ ನಾಗೇಶ್ವರ್ ರಾವ್ ಅವರ ಕೈಗೆ ಬರಲಿದೆ. ಆದರೆ, ಅಧಿಕಾರ ಮಿತಿಯಲ್ಲಿ ಹೈ ಫ್ರೊಫೈಲ್ ಕೇಸುಗಳು ತ್ವರಿತಗತಿಯಲ್ಲಿ ತನಿಖೆ ನಡೆಸುವ ಸಾಧ್ಯತೆ ಬಹಳ ಕಡಿಮೆ. ಹೀಗಾಗಿ, ಆಂತರಿಕ ಯುದ್ಧದಿಂದ ತನಿಖಾ ಸಂಸ್ಥೆಯ ಚುರುಕುತನಕ್ಕೆ ತಕ್ಕಮಟ್ಟಿನ ಹಿನ್ನಡೆ ಖಂಡಿತಾ ಆಗಿದೆ ಎನ್ನಬಹುದು.
ಅಸ್ಥಾನ ಜತೆಗಿದ್ದ ಸಿಬಿಐ ಎಸ್ ಪಿ ಬಂಧನ
ಭ್ರಷ್ಟಾಚಾರ, ವಂಚನೆ, ಬೆದರಿಕೆ ಪ್ರಕರಣದಲ್ಲಿ ರಾಕೇಶ್ ಅಸ್ಥಾನ ಅವರು ಬಂಧನ ಭೀತಿಯಿಂದ ತಾತ್ಕಾಲಿಕವಾಗಿ ಮುಕ್ತರಾಗಿದ್ದಾರೆ. ಆದರೆ, ಅವರ ಜತೆಗೆ ಹೈ ಪ್ರೊಫೈಲ್ ಕೇಸುಗಳನ್ನು ನಡೆಸುತ್ತಿದ್ದ ಸಿಬಿಐ ಎಸ್ ಪಿ ದೇವೇಂದ್ರ ಕುಮಾರ್ ಅವರನ್ನು ಬಂಧಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 17 ರ ಉಲ್ಲಂಘನೆ ಆರೋಪ ಹೊರೆಸಲಾಗಿದೆ.
ದೇವೇಂದ್ರರನ್ನು ಅಕ್ಟೋಬರ್ 22ರನ್ನು ಬಂಧಿಸಿ, ಪಟಿಯಾಲ ಕೋರ್ಟಿಗೆ ಹಾಜರುಪಡಿಸಲಾಗಿದೆ, 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಕ್ಟೋಬರ್ 15ರಂದು ಹಾಕಲಾಗಿರುವ ಎಫ್ಐಆರ್ ನಂಬರ್ ಆರ್ ಸಿ #13(ಎ) 2018/ಎಸಿ-3 ನಲ್ಲಿ ರಾಕೇಶ್ ನಂ.1 ಆರೋಪಿಯಾಗಿದ್ದರೆ, ದೇವೇಂದ್ರ ಕುಮಾರ್, ಮನೋಜ್ ಪ್ರಸಾದ್, ಸೋಮೇಶ್ ಪ್ರಸಾದ್ ಕ್ರಮವಾಗಿ ನಂ.2,3,4 ಎಂದು ಹೆಸರಿಸಲಾಗಿದೆ.
ಇಷ್ಟಕ್ಕೂ ಏನಿದು ಲಂಚ ಪ್ರಕರಣ?
ಮಾಂಸ ರಫ್ತುದಾರ ಮೊಯಿನ್ ಖುರೇಶಿ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಕರಣದಲ್ಲಿ ಉದ್ಯಮಿ ಸತೀಶ್ ಸನಾ ಕೂಡಾ ಆರೋಪಿಯಾಗಿದ್ದಾರೆ. ಈ ಕೇಸಿನಿಂದ ಹೊರಕ್ಕೆ ಬರಲು ಸನಾ ಅವರು ಸಿಬಿಐ ನಿರ್ದೇಶಕ ಅಲೋಕ್ ವರ್ಮಾಗೆ 2 ಕೋಟಿ ರು ಲಂಚ ನೀಡಿದ್ದರು ಎಂದು ರಾಕೇಶ್ ಅಸ್ಥಾನ ಆರೋಪಿಸಿದ್ದಾರೆ. ಮಧ್ಯವರ್ತಿಯೊಬ್ಬರು 2 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಆಸ್ಥಾನ ಈ ಹಿಂದೆ ಆಗಸ್ಟ್ 24ರಂದು ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ನಂತರ ಈ ವಿಷಯವನ್ನು ಕೇಂದ್ರ ವಿಚಕ್ಷಣ ಆಯೋಗದ ಪರಿಶೀಲನೆಗೆ ವಹಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಯುತ್ತಿದೆ.