ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಮನೆಗೆ ಸಿಬಿಐ ತಂಡ ಭೇಟಿ
ನವದೆಹಲಿ, ಜೂನ್ 16: ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮನೆಗೆ ಸಿಬಿಐ ಅಧಿಕಾರಿಗಳು ಭೇಟಿ ನೀಡದ್ದಾರೆ. ಕಳೆದ ಜನವರಿಯಲ್ಲಿ ಎಎಪಿ ಸರಕಾರದ 'ಟಾಕ್ ಟು ಎಕೆ' ಸಾಮಾಜಿಕ ಜಾಲತಾಣಗಳ ಪ್ರಚಾರಾಂದೋಲನದಲ್ಲಿ ವಂಚನೆ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ವಿರುದ್ಧ ಪ್ರಾಥಮಿಕ ತನಿಖೆಗೆ ಸಿಬಿಐ ಆದೇಶ ನೀಡಿತ್ತು.
ಭೇಟಿ ಬಗ್ಗೆ ಪ್ರತಿಕ್ರಿಯೆನೀಡಿರುವ ಸಿಬಿಐ, "ಮನೆ ಮೇಲೆ ದಾಳಿ ನಡೆಸಿಲ್ಲ, ಯಾವುದೇ ಹುಡುಕಾಟಗಳನ್ನೂ ನಡೆಸಿಲ್ಲ. ಕೆಲವು ವಿಚಾರಗಳನ್ನು ಸ್ಪಷ್ಟನೆ ಪಡೆಯಲು ಸಿಬಿಐ ತಂಡ ಭೇಟಿ ನೀಡಿತ್ತು," ಎಂದು ಹೇಳಿದೆ.
ದೆಹಲಿ ಸರಕಾರದ ಜನಪ್ರಿಯ 'ಟಾಕ್ ಟು ಎಕೆ' (ಟಾಕ್ ಟು ಅರವಿಂದ್ ಕೇಜ್ರಿವಾಲ್) ಪ್ರಚಾರಾಂದೋಲನಕ್ಕೆ ಸಲಹೆಗಾರರನ್ನು ಪಡೆಯಲಾಗಿತ್ತು. ಇದಕ್ಕಾಗಿ 1.5 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಸರಕಾರದ ಜಾಗೃತ ದಳ ಸಿಬಿಐಗೆ ದೂರು ಸಲ್ಲಿಸಿತ್ತು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ಈ ದಾಳಿ ನಡೆಸಿದೆ.
ಮುಖ್ಯ ಕಾರ್ಯದರ್ಶಿ ಸಲಹೆಯನ್ನು ಕಡೆಗಣಿಸಿ ಸರಕಾರ ಸಲಹೆಗಾರರನ್ನು ನೇಮಮಿಸಿಕೊಂಡಿತ್ತು. ಮತ್ತು ಸಲಹೆಗಾರರು ಆ ಹಣವನ್ನು ಖರ್ಚು ಮಾಡಿದ್ದರು ಎಂದು ದೂರಿನಲ್ಲಿ ಜಾಗೃತ ದಳ ಉಲ್ಲೇಖಿಸಿತ್ತು.