Jammu & Kashmir: ಜಮ್ಮು ಮತ್ತು ಕಾಶ್ಮೀರ ಮಾಜಿ ಗವರ್ನರ್ಗೆ ಸಿಬಿಐ ನೋಟೀಸ್
ನವದೆಹಲಿ, ಏಪ್ರಿಲ್ 22: ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಏಪ್ರಿಲ್ 28 ರಂದು ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಭ್ರಷ್ಟಾಚಾರದ ಆರೋಪದ ಪ್ರಕರಣದಲ್ಲಿ ಸಾಕ್ಷಿಯಾಗಿ ವಿಚಾರಣೆಗೆ ಕರೆದಿದೆ.
ಫುಲ್ವಾಮಾ ಭಯೋತ್ಪಾದಕರ ದಾಳಿ ಕುರಿತಂತೆ ಇತ್ತೀಚೆಗೆ ಸುದ್ದಿ ಸಂಸ್ಥೆಯೊಂದಕ್ಕೆ ಸತ್ಯಪಾಲ್ ಮಲಿಕ್ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಮಾತನಾಡಿದ್ದರು. ಆ ಎರಡು ದಿನಗಳ ನಂತರ ಈಗ ಸಿಬಿಐ ನೋಟೀಸ್ ಬಂದಿದೆ.

ಕೇಂದ್ರ ದೆಹಲಿಯಲ್ಲಿರುವ ಏಜೆನ್ಸಿಯ ಅಕ್ಬರ್ ರೋಡ್ ಗೆಸ್ಟ್ಹೌಸ್ನಲ್ಲಿ ಕೆಲವು ಸ್ಪಷ್ಟೀಕರಣಗಳಿಗಾಗಿ ಸಿಬಿಐ ತನ್ನ ಕಚೇರಿಗೆ ಬರುವಂತೆ ಕೇಳಿದೆ ಎಂದು ಮಲಿಕ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಅವರು (ಸಿಬಿಐ) ಕೆಲವು ಸ್ಪಷ್ಟೀಕರಣಗಳನ್ನು ಕೇಳಿದ್ದಾರೆ. ಅದಕ್ಕಾಗಿ ಅವರು ನಾನು ಸಿಬಿಐ ಕಚೇರಿಗೆ ಹಾಜರಾಗಬೇಕಿದೆ. ನಾನು ರಾಜಸ್ಥಾನಕ್ಕೆ ಹೋಗುತ್ತಿದ್ದೇನೆ. ಹಾಗಾಗಿ ನಾನು ಲಭ್ಯವಿದ್ದಾಗ ಅವರಿಗೆ ಏಪ್ರಿಲ್ 27 ರಿಂದ 29 ರವರೆಗೆ ದಿನಾಂಕಗಳನ್ನು ನೀಡಿದ್ದೇನೆ ಎಂದು ಮಲಿಕ್ ತಿಳಿಸಿದರು.
ಸತ್ಯಪಾಲ್ ಮಲಿಕ್ ಅವರು 2018 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿದ್ದಾಗ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಒಡೆತನದ ಕಂಪನಿಯ ಒಪ್ಪಂದವನ್ನು ರದ್ದುಗೊಳಿಸಿದ್ದರು. ಮೊದಲ ಮಾಹಿತಿ ವರದಿಯಲ್ಲಿ (ಎಫ್ಐಆರ್), ಜಮ್ಮು ಮತ್ತು ಕಾಶ್ಮೀರ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ವೈದ್ಯಕೀಯ ವಿಮಾ ಯೋಜನೆ ಕುರಿತ ಹಗರಣದಲ್ಲಿ ರಿಲಯನ್ಸ್ ಜನರಲ್ ಇನ್ಶುರೆನ್ಸ್ ಜೊತೆಗೆ ಟ್ರಿನಿಟಿ ಮರುವಿಮಾ ಬ್ರೋಕರ್ಗಳನ್ನು ಸಿಬಿಐ ಆರೋಪಿಗಳೆಂದು ಹೆಸರಿಸಿದೆ.
ಮಲಿಕ್ ಅವರು ವಿಮಾ ಯೋಜನೆಯಲ್ಲಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು, ನಂತರ ಸಿಬಿಐ ನೋಟಿಸ್ ಬಂದಿದೆ. ಸುಮಾರು 3.5 ಲಕ್ಷ ಉದ್ಯೋಗಿಗಳನ್ನು ಒಳಗೊಂಡಿರುವ ಈ ಯೋಜನೆಯನ್ನು ಸೆಪ್ಟೆಂಬರ್ 2018ರಲ್ಲಿ ಹೊರತರಲಾಯಿತು. ಅದನ್ನು ಸತ್ಯಪಾಲ್ ಮಲಿಕ್ ಅವರು ಒಂದು ತಿಂಗಳೊಳಗೆ ರದ್ದುಗೊಳಿಸಿದರು.
ನಾನೇ ಫೈಲ್ಗಳನ್ನು ಪರಿಶೀಲಿಸಿದ್ದೇನೆ ಮತ್ತು ಒಪ್ಪಂದವನ್ನು ತಪ್ಪಾಗಿ ನೀಡಲಾಗಿದೆ ಎಂಬ ತೀರ್ಮಾನಕ್ಕೆ ಬಂದಾಗ, ನಾನು ಅದನ್ನು ರದ್ದುಗೊಳಿಸಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮಲಿಕ್ ಅವರು ವಿಮಾ ಸಂಸ್ಥೆಗಳ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ಕಿರು ಜಲವಿದ್ಯುತ್ ಯೋಜನೆಯಲ್ಲಿ ಸಿವಿಲ್ ಕಾಮಗಾರಿಯ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರದ ಆರೋಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಿಬಿಐ ಅವರನ್ನು ಸಂಪರ್ಕಿಸಿದೆ ಎಂದರು.
ಕಳೆದ ವಾರ, 2019 ರ ಪುಲ್ವಾಮಾ ದಾಳಿಯ ಬಗ್ಗೆ ಸತ್ಯಪಾಲ್ ಮಲಿಕ್ ಅವರ ಹೇಳಿಕೆಗಳು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿತು. ಸುದ್ದಿ ವೆಬ್ಸೈಟ್ ದಿ ವೈರ್ಗೆ ನೀಡಿದ ಸಂದರ್ಶನದಲ್ಲಿ ಮಲಿಕ್ ಅವರು ಭದ್ರತಾ ಲೋಪಗಳು ಪುಲ್ವಾಮಾ ದಾಳಿಗೆ ಕಾರಣವಾಯಿತು, ಇದರಲ್ಲಿ 40 ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಪ್ರಯಾಣಿಸಲು ವಿಮಾನವನ್ನು ಕೇಳುವ ಅರೆಸೈನಿಕ ಪಡೆಗಳ ಮನವಿಯನ್ನು ಸರ್ಕಾರವು ನಿರಾಕರಿಸಿತು. ಇದರಿಂದಾಗಿ ಸೈನಿಕರು ರಸ್ತೆಯಲ್ಲಿ ಪ್ರಯಾಣಿಸಲು ಕಾರಣವಾಯಿತು ಎಂದು ಅವರು ಹೇಳಿದ್ದರು.












Click it and Unblock the Notifications