ಕಾವೇರಿ ವಿವಾದದ ವಿಚಾರಣೆ ಮಾರ್ಚ್ 21ಕ್ಕೆ ಮುಂದೂಡಿಕೆ
ಕಾವೇರಿ ನೀರು ಹಂಚಿಕೆ ನ್ಯಾಯಾಧೀಕರಣದ ತೀರ್ಪಿನ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿ, ಮಾರ್ಚ್ 21ಕ್ಕೆ ಮುಂದೂಡಿದೆ.
ನವದೆಹಲಿ, ಫೆಬ್ರವರಿ 07: ಕಾವೇರಿ ನೀರು ಹಂಚಿಕೆ ನ್ಯಾಯಾಧೀಕರಣದ ತೀರ್ಪಿನ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 21ಕ್ಕೆ ತ್ರಿಸದಸ್ಯ ಪೀಠ ಮುಂದೂಡಿದೆ.
1892ರಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಆಗಿದ್ದ ಒಪ್ಪಂದ ಸಾಧುವೇ? ಅಂದು ಬಳಸಿದ ಮಾನದಂಡ ಯಾವುದು? ಇತ್ತೀಚಿನ ಅಂಕಿ ಅಂಶಗಳ ಬಳಸಿ ಸಮೀಕ್ಷೆ ನಡೆಸುತ್ತಿಲ್ಲ ಏಕೆ? ಎಂಬ ಪ್ರಶ್ನೆಗಳನ್ನು ಕರ್ನಾಟಕ ಕೇಳಿದೆ. ಮಾರ್ಚ್ 21 ರಿಂದ ಏಪ್ರಿಲ್ 11ರವರೆಗೆ ಪ್ರತಿದಿನ ವಿಚಾರಣೆ ನಡೆಯಲಿದೆ.[ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]
ಫೆಬ್ರವರಿ 7 ರ ತನಕ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿತ್ತು. ಇದರಿಂದ ಕರ್ನಾಟಕಕ್ಕೆ ನಿರಾಳತೆ ಸಿಕ್ಕಿದ್ದು, ಹೆಚ್ಚಿನ ಪ್ರಮಾಣದ ನೀರು ಹರಿಸುವ ಸಂಕಟದಿಂದ ಸದ್ಯಕ್ಕೆ ಬಚಾವಾಗಿತ್ತು.
ಅಲ್ಲಿ ತನಕ ಮಧ್ಯಂತರ ಆದೇಶ ಜಾರಿಯಲ್ಲಿರಲಿದ್ದು, ಪ್ರತಿನಿತ್ಯ ತಮಿಳುನಾಡಿಗೆ 2,000 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಸೂಚಿಸಲಾಗಿತ್ತು.

ಕಾವೇರಿ ನೀರಿನಲ್ಲಿ ಬಳಸಲು ಲಭ್ಯವಿರುವ 740 ಟಿಎಂಸಿ ನೀರಿನಲ್ಲಿ ಕರ್ನಾಟಕ 270 ಟಿಎಂಸಿ, ತಮಿಳುನಾಡು 419, ಕೇರಳ 30 ಮತ್ತು ಪಾಂಡಿಚೇರಿ 7 ಟಿಎಂಸಿ ನೀರಿಗೆ ಅರ್ಹ ಎಂದು ನ್ಯಾಯಾಧೀಕರಣ ತೀರ್ಪಲ್ಲಿ ಹೇಳಿತ್ತು.
2007ರ ಫೆಬ್ರವರಿ 5ರಂದು ಕಾವೇರಿ ನೀರು ನ್ಯಾಯಾಧೀಕರಣ ನೀಡಿದ್ದ ತೀರ್ಪನ್ನು ಕರ್ನಾಟಕ ಮತ್ತು ತಮಿಳುನಾಡುಗಳೆರಡೂ ಪ್ರಶ್ನಿಸಿದ್ದವು. ಆದರೆ, ಈ ತೀರ್ಪು ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಸಮಾನ ಎಂದು ಕೇಂದ್ರ ಸರಕಾರ ತಗಾದೆ ಎತ್ತಿತ್ತು.
ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿರುವ ಕರ್ನಾಟಕ, ಇಷ್ಟು ನೀರು ತಮಿಳುನಾಡಿಗೆ ಬಿಟ್ಟರೆ ಕಾವೇರಿ ನೀರು ಸರಬರಾಜಾಗುವ ಕರ್ನಾಟಕದ 6 ನಗರಗಳಿಗೆ ಪೂರೈಸಲು ಸಾಧ್ಯವೇ ಇಲ್ಲ ಎಂದಿದೆ. ತಮಿಳುನಾಡು ಕೂಡ, ಕಾವೇರಿ ನೀರಿನ ಅಗತ್ಯವಿರುವ ಜಮೀನನ್ನು 29.7 ಲಕ್ಷ ಎಕರೆಯಿಂದ 24.70 ಲಕ್ಷ ಎಕರೆಗೆ ಇಳಿಸಲಾಗಿದೆ ಎಂದು ಕ್ಯಾತೆ ತೆಗೆದಿತ್ತು.(ಒನ್ಇಂಡಿಯಾ ಸುದ್ದಿ)












Click it and Unblock the Notifications