ಪ್ರತಿ ಕೋವಿಡ್ 19 ಸಾವು ನಿರ್ಲಕ್ಷ್ಯದಿಂದ ಸಂಭವಿಸಿದೆ ಎಂದು ಭಾವಿಸುವುದು ಸೂಕ್ತವಲ್ಲ; ಸುಪ್ರೀಂ ಕೋರ್ಟ್
ನವದೆಹಲಿ, ಸೆಪ್ಟೆಂಬರ್ 8: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಸಂದರ್ಭ ಕೊರೊನಾ ಸೋಂಕಿನಿಂದಾಗಿ ಸಂಭವಿಸಿದ ಎಲ್ಲಾ ಸಾವುಗಳು ವೈದ್ಯಕೀಯ ನಿರ್ಲಕ್ಷ್ಯದಿಂದ ಆದವು ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ವೈದ್ಯಕೀಯ ನಿರ್ಲಕ್ಷ್ಯ ಎಂದು ಉಲ್ಲೇಖಿಸಿ, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬದವರಿಗೆ ಪರಿಹಾರ ಕೋರಿ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ವಿಕ್ರಂನಾಥ್ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಅರ್ಜಿದಾರ ದೀಪಕ್ ರಾಜ್ ಸಿಂಗ್ ಅವರನ್ನು ಸೂಕ್ತ ಸಲಹೆಗಳೊಂದಿಗೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದೆ.

'ಕೊರೊನಾ ಎರಡನೇ ಅಲೆ ದೇಶಾದ್ಯಂತ ಎಷ್ಟು ಪ್ರಭಾವ ಬೀರಿದೆ ಎಂಬುದು ಎಲ್ಲರಿಗೂ ತಿಳಿದಿದೆ' ಎಂದಿರುವ ನ್ಯಾಯಾಲಯ, 'ಕೊರೊನಾ ಸೋಂಕಿನ ಕಾರಣದಿಂದ ಸಂಭವಿಸಿದ ಪ್ರತಿಯೊಂದು ಸಾವು ವೈದ್ಯಕೀಯ ನಿರ್ಲಕ್ಷ್ಯದಿಂದ ಆದದ್ದು ಎಂದು ಭಾವಿಸುವುದು ತುಂಬಾ ಅತಿ ಎನಿಸುತ್ತದೆ. ಅರ್ಜಿಯಲ್ಲಿ ಉಲ್ಲೇಖಿಸಿದಂತೆ, ಎಲ್ಲಾ ಸಾವುಗಳು ನಿರ್ಲಕ್ಷ್ಯದಿಂದ ಸಂಭವಿಸಿವೆ ಎಂದು ಊಹಿಸಲು ಸಾಧ್ಯವಿಲ್ಲ' ಎಂದು ಪೀಠ ತಿಳಿಸಿದೆ.
ಜೂನ್ 30ರ ಆದೇಶವನ್ನು ಪೀಠ ಉಲ್ಲೇಖಿಸಿದೆ. ಕೊರೊನಾ ಸೋಂಕಿನ ಕಾರಣವಾಗಿ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಪರಿಹಾರ ಸಂಬಂಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಆರು ವಾರಗಳಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ನೀಡುವಂತೆ ಆ ಆದೇಶದಲ್ಲಿ ಶಿಫಾರಸು ಮಾಡಲಾಗಿತ್ತು.
ಆ ಆದೇಶದಲ್ಲಿ, ನ್ಯಾಯಾಲಯ ಮಾನವೀಯತೆ ದೃಷ್ಟಿಯಿಂದ ಪ್ರಕರಣಗಳನ್ನು ನೋಡಿದೆಯೇ ಹೊರತು ವೈದ್ಯಕೀಯ ನಿರ್ಲಕ್ಷ್ಯ ಎಂಬ ದೃಷ್ಟಿಕೋನದಿಂದಲ್ಲ. ಸರ್ಕಾರ ಈ ಸಂಬಂಧ ಇನ್ನೂ ನೀತಿಯೊಂದನ್ನು ಹೊರತರಬೇಕಿದೆ. ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ಸಲಹೆಯನ್ನು ನೀವು ಹೊಂದಿದ್ದರೆ, ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

'ಈ ಅರ್ಜಿಯು ಭಿನ್ನವಾಗಿದೆ ಹಾಗೂ ಇದು ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವುಗಳಿಗೆ ಪರಿಹಾರದ ಅಂಶವನ್ನು ಗಣನೆಗೆ ತೆಗೆದುಕೊಂಡಿದೆ' ಎಂದು ಅರ್ಜಿದಾರ ಪರ ಹಾಜರಾದ ವಕೀಲ ಶ್ರೀರಾಮ್ ವಾದಿಸಿದ್ದರು.
ಮೇ ತಿಂಗಳಿನಲ್ಲಿ ಈ ಅರ್ಜಿ ಸಲ್ಲಿಸಲಾಗಿದ್ದು, ಈವರೆಗೂ ಸಾಕಷ್ಟು ಬೆಳವಣಿಗೆಗಳು ಸಂಭವಿಸಿವೆ ಎಂಬುದನ್ನು ನ್ಯಾಯಾಲಯ ಹೇಳಿದೆ.
'ನಾವು ಕೊರೊನಾ ಸೋಂಕಿನ ನಿರ್ವಹಣೆ ಸಂಬಂಧ ಸನ್ನದ್ಧವಾಗಿದ್ದೇವೆ ಹಾಗೂ ಈ ಸಂಬಂಧ ನ್ಯಾಯಾಲಯ ರಾಷ್ಟ್ರೀಯ ಕಾರ್ಯಪಡೆ ರಚಿಸಿ ಹಲವು ಅಂಶಗಳನ್ನು ಪರಿಶೀಲಿಸುತ್ತಿದೆ' ಎಂದು ಪೀಠ ತಿಳಿಸಿದೆ.
ನ್ಯಾಯಾಲಯ ಈ ಅರ್ಜಿ ವಿಲೇವಾರಿ ಮಾಡಿದ್ದು, ಅರ್ಜಿದಾರರು ತಮ್ಮ ಮನವಿಯನ್ನು ಹಿಂತೆಗೆದುಕೊಳ್ಳುವಂತೆ ಅಥವಾ ತಿದ್ದುಪಡಿ ಮಾಡುವಂತೆ ತಿಳಿಸಿದೆ. ಯಾವುದೇ ಸಲಹೆಗಳಿದ್ದರೆ ಅರ್ಜಿದಾರರು ಪ್ರಾಧಿಕಾರ ಸಂಪರ್ಕಿಸಬಹುದು ಎಂದು ತಿಳಿಸಿದೆ.
ಕೋವಿಡ್ ಮರಣ ಪ್ರಮಾಣ ಪತ್ರ; ಸೆಪ್ಟೆಂಬರ್ 11ರ ಗಡುವು ನೀಡಿರುವ ನ್ಯಾಯಾಲಯ
ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ಹಾಗೂ ಮರಣ ಪ್ರಮಾಣ ಪತ್ರ ನೀಡುವ ಸಂಬಂಧ ಮಾರ್ಗಸೂಚಿಗಳನ್ನು ಸೆಪ್ಟೆಂಬರ್ 11ರೊಳಗೆ ರೂಪಿಸಲು ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ಕೇಂದ್ರಕ್ಕೆ ಸೂಚನೆ ನೀಡಿತ್ತು.
ಸೆಪ್ಟೆಂಬರ್ 11ರ ಹೊತ್ತಿಗೆ ಜೂನ್ 30ರಂದು ನೀಡಿದ ನ್ಯಾಯಾಂಗ ನಿರ್ದೇಶನಕ್ಕೆ ಅನುಸಾರ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಹಾಗೂ ಅನಿರುದ್ಧ್ ಬೋಸ್ ಅವರನ್ನೊಳಗೊಂಡ ಪೀಠ ನಿರ್ದೇಶನ ನೀಡಿತ್ತು.
ಜೂನ್ 30ರಂದು ನೀಡಿದ ನಿರ್ದೇಶನದಲ್ಲಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದವರಿಗೆ ಅಥವಾ ಅವಲಂಬಿತರಿಗೆ ಪರಿಹಾರ ನೀಡಲು ಆರು ವಾರಗಳೊಳಗೆ ಮಾರ್ಗಸೂಚಿ ರೂಪಿಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.












Click it and Unblock the Notifications