ಎಚ್ಚರಿಕೆ: ಕೆನಡಾದಲ್ಲಿ ಕೆಲಸ ಮುಗಿದ ಮೇಲೆ ಭಾರತೀಯರ ಕಥೆ ಇಷ್ಟೇ!
ನವದೆಹಲಿ, ನವೆಂಬರ್ 02: ಕೆನಡಾ ಸರ್ಕಾರವು ವಿದೇಶಿ ವಿದ್ಯಾರ್ಥಿಗಳನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ದೀರ್ಘ ಅವಧಿವರೆಗೂ ಅವರ ಅಗತ್ಯವಿಲ್ಲ ಎಂದು ಗೊತ್ತಾದಾಗ ಅಂಥವರನ್ನು ತೆಗೆದು ಹಾಕಲಾಗುತ್ತಿದೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಕಳೆದ ವರ್ಷ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಸರ್ಕಾರವು ಸುಮಾರು 50,000 ವಿದೇಶಿ ವಿದ್ಯಾರ್ಥಿಗಳು ಪದವಿಯನ್ನು ಪಡೆದ ನಂತರದಲ್ಲಿ 18 ತಿಂಗಳುಗಳ ಕಾಲ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಕೋವಿಡ್ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ಪುನಾರಂಭಗೊಂಡಿರುವ ಕಂಪನಿಗಳು ಈ ಹಂತದಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾಗಿದೆ ಎಂದು ಹೇಳಿತು.
ಚೀನಾ ಕ್ಸಿನ್ಜಿಯಾಂಗ್ ಬಿಕ್ಕಟ್ಟಿನ ಬಗ್ಗೆ ಮೊದಲ ಬಾರಿ ಮಾತನಾಡಿದ ಭಾರತ
ದೇಶದ ಪ್ರಮುಖ ವಲಯಗಳಲ್ಲಿ ಹೆಚ್ಚು ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ಶಾಶ್ವತ ಪರವಾನಗಿಯನ್ನು ಪಡೆಯುವುದಕ್ಕೆ ಅಗತ್ಯವಾಗಿರುವ ಅನುಭವವನ್ನು ಪಡೆದುಕೊಳ್ಳಲು ಸರ್ಕಾರವು ಅವಕಾಶ ನೀಡುತ್ತಿಲ್ಲ. ಅದಾಗ್ಯೂ, ಒಂದೂವರೆ ವರ್ಷದ ನಂತರ ಖಾಯಂ-ನಿವಾಸಿಗಳಲ್ಲಿ ಕೆಲವರು ಉಳಿಯುವುದಕ್ಕೆ ಸ್ಥಾನಮಾನವಿಲ್ಲದೇ ವಾಸವಾಗಿದ್ದಾರೆ. ಈ ಕುರಿತು ಕೆನಡಾದ ವಿದ್ಯಾರ್ಥಿಗಳು ಹೇಳುವುದೇನು ಎಂಬುದನ್ನು ವರದಿಯಲ್ಲಿ ತಿಳಿಯಿರಿ.
ವಿದೇಶಿ ಕಾರ್ಮಿಕರನ್ನು ಕೆಟ್ಟದಾಗಿ ನೆಡೆಸಿಕೊಳ್ಳುವ ಕೆನಡಾ
"ಯಾವುದೇ ಉದ್ಯೋಗವಿಲ್ಲದೇ ನಾನು ಈಗ ಮನೆಯಲ್ಲೇ ಕುಳಿತು ಈ ಮೊದಲು ಮಾಡಿಕೊಂಡಿದ್ದ ಉಳಿತಾಯದಿಂದಲೇ ಬದುಕುತ್ತಿದ್ದೇನೆ, ಇದೇ ರೀತಿ ಎಷ್ಟು ದಿನ ಬದುಕಬೇಕು ಎಂಬುದೇ ತಿಳಿಯುತ್ತಿಲ್ಲ," ಎಂದು ಟೊರೊಂಟೊ ಬಳಿಯ ಸೆನೆಕಾ ಕಾಲೇಜಿನ ಅಕೌಂಟೆಂಟ್ ಮತ್ತು ಮಾಜಿ ವಿದ್ಯಾರ್ಥಿ ಡೇನಿಯಲ್ ಡಿಸೋಜಾ ಹೇಳಿದ್ದಾರೆ. "ನಾನು ವಲಸೆ ಹೋಗಲು, ಅಧ್ಯಯನ ಮಾಡಲು ಮತ್ತು ವಾಸಿಸಲು ಕೆನಡಾವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಾನು ವಿಷಾದಿಸುತ್ತೇನೆ. ಏಕೆಂದರೆ ಕೆನಡಾ ವಿದೇಶಿ ವಿದ್ಯಾರ್ಥಿಗಳನ್ನು ಹೆಚ್ಚು ಪ್ರಶಂಸಿಸುವುದರ ಬದಲಿಗೆ ಅಗ್ಗದ ಕಾರ್ಮಿಕರ ರೂಪವಾಗಿ ಬಳಸಿಕೊಳ್ಳಲಾಗುತ್ತಿದೆ," ಎಂದರು.
ಇಲಾಖೆಯು ದೇಶದಲ್ಲಿ ಶಾಶ್ವತವಾಗಿ ನೆಲೆಸಲು ಬಯಸುವವರಿಗೆ ಉತ್ತಮ ಬೆಂಬಲ ನೀಡುವ ಮಾರ್ಗಗಳನ್ನು ಪರಿಗಣಿಸುತ್ತಿದೆ ಎಂದು ಕೆನಡಾದ ವಲಸೆ ಸಚಿವ ಸೀನ್ ಫ್ರೇಸರ್ ಹೇಳಿದರು. ಈ ವಿದೇಶಿ ವಿದ್ಯಾರ್ಥಿಗಳಿಗಾಗಿ "ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಯೋಜನಗಳನ್ನು ಸರ್ಕಾರ ಗುರುತಿಸುತ್ತದೆ" ಎಂದು ವಕ್ತಾರ ಜೆಫ್ರಿ ಮ್ಯಾಕ್ಡೊನಾಲ್ಡ್ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ಡೋಲಾಯಮಾನ
ಕಳೆದ 2021ರ ಕಾರ್ಯಕ್ರಮದ ಭಾಗವಾಗಿದ್ದ ಅನೇಕ ಪದವೀಧರರಂತೆ, ಡಿಸೋಜಾ ಅವರ ವೃತ್ತಿಜೀವನಕ್ಕೆ ವಿರಾಮ ಸಿಕ್ಕಿದ್ದು, ಭವಿಷ್ಯದ ಬಗ್ಗೆ ಅನಿಶ್ಚಿತತೆ ಕಾಡುತ್ತಿದೆ. ಈ ವಿದ್ಯಾರ್ಥಿಗಳಲ್ಲಿ ಭಾರತ ಮತ್ತು ಫಿಲಿಪೈನ್ಸ್ನವರೇ ಅನೇಕರಿದ್ದಾರೆ. ಉದ್ಯೋಗದ ಪರವಾನಗಿಯು ಅವಧಿ ಮುಗಿಯುತ್ತಿದ್ದಂತೆ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ. ಕೆಲಸದ ಪರವಾನಗಿಗಳು ಅವಧಿ ಮುಗಿದಾಗ ಅವರು ಶಾಶ್ವತ ನಿವಾಸಕ್ಕೆ ಅನುಮತಿ ಸಿಗುತ್ತದೆಯೋ ಇಲ್ಲವೋ ಎಂಬುದೇ ಖಾತ್ರಿಯಿಲ್ಲ. ಇಂಥ ಡೋಲಾಯಮಾನ ಸ್ಥಿತಿಯಲ್ಲೇ ವಿದ್ಯಾರ್ಥಿಗಳು ತಮ್ಮ ಉದ್ಯೋಗವನ್ನೂ ತೊರೆಯಬೇಕಾಗುತ್ತದೆ. ಅವರ ಅರ್ಜಿಗಳು ಅಂತಿಮವಾಗಿ ಯಶಸ್ವಿಯಾಗಿದ್ದರೂ ಸಹ ಯಾವುದೇ ಉದ್ಯೋಗ, ಆದಾಯ ಅಥವಾ ಆರೋಗ್ಯ ಮತ್ತು ಸಾಮಾಜಿಕ ಪ್ರಯೋಜನಗಳಿಲ್ಲದೆ ಸಮಸ್ಯೆಯನ್ನು ಎದುರಿಸುತ್ತಾರೆ.
ಕೆನಡಾದಲ್ಲಿ ಅವಕಾಶವಾದಿ ನಿಲುವಿನ ಬಗ್ಗೆ ಬೇಸರ
"ಅವರಿಗೆ ನಮ್ಮ ಅವಶ್ಯಕತೆಯಿದ್ದಾಗ, ನಮ್ಮನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಅದೇ ನಮಗೆ ಅವರ ಸಹಾಯ ಅಥವಾ ಬೆಂಬಲ ಬೇಕಾದಾಗ ಯಾರೂ ಕಾಣಿಸಿಕೊಳ್ಳುವುದಿಲ್ಲ," ಎಂದು ಟೊರೊಂಟೊದ ಅರ್ನ್ಸ್ಟ್ ಮತ್ತು ಯಂಗ್ನ ಮಾಜಿ ಸಲಹೆಗಾರ ಅಂಶದೀಪ್ ಬಿಂದ್ರಾ ದೂಷಿಸಿದರು. "ನಾವು ಕೆನಡಾದಲ್ಲಿ ಶುಲ್ಕ ಮತ್ತು ತೆರಿಗೆಗಳನ್ನು ಪಾವತಿಸುತ್ತೇವೆ. ಆದರೆ ಅದಕ್ಕೆ ಪ್ರತಿಯಾಗಿ ಏನನ್ನೂ ಪಡೆಯುತ್ತಿಲ್ಲ. ಕಾರ್ಮಿಕರ ಕೊರತೆಯನ್ನು ಪರಿಹರಿಸಲು ನಿಮಗೆ ಸಹಾಯ ಮಾಡಿದ ಜನರು ನಾವು ಎಂದು ನೀವು ಗುರುತಿಸುವುದಿಲ್ಲ," ಎಂದು ಅಂಶದೀಪ್ ಬಿಂದ್ರಾ ಆರೋಪಿಸಿದ್ದಾರೆ.
ದಾಖಲೆ ಮಟ್ಟದಲ್ಲಿ ವಲಸಿಗರನ್ನು ಸ್ವಾಗತಿಸಲು ನಿರ್ಧಾರ
ಕೆನಡಾದಲ್ಲಿ ವಯಸ್ಸಾದ ಉದ್ಯೋಗಿಗಳಿಗೆ ಸರಿದೂಗಿಸುವ ಪ್ರಯತ್ನದಲ್ಲಿ ಮುಂದಿನ ಮೂರು ವರ್ಷಗಳ ಕಾಲ ಹೊಸ ವಲಸಿಗರನ್ನು ಸ್ವಾಗತಿಸಲು ಕ್ರಮ ತಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಹೊಸ ಕಾನೂನು ರೂಪಿಸುವ ಬಗ್ಗೆ ಪ್ರಧಾನಿ ಟ್ರುಡೋ ಸರ್ಕಾರವು ಯೋಜನೆ ಹಾಕುತ್ತಿದೆ. "ಈ ಸಾರ್ವಜನಿಕ ನೀತಿಗಳಿಂದ ಪ್ರಯೋಜನ ಪಡೆಯುವವರಿಗೆ ಅಥವಾ ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಪದವೀಧರರು ಹೊಂದಿದ್ದಂತೆ ನುರಿತ ಕೆಲಸದ ಅನುಭವವನ್ನು ಪಡೆಯಲು ಹೆಚ್ಚಿನ ಅವಕಾಶವನ್ನು ನೀಡಲಾಗುತ್ತದೆ" ಎಂದು ಮ್ಯಾಕ್ಡೊನಾಲ್ಡ್ ಹೇಳಿದರು.
ಕೆನಡಾದಲ್ಲಿ ವಿದೇಶಿ ಪದವೀಧರರು ಪರವಾನಗಿ ವಿಸ್ತರಣೆಯು ಕೆಲಸದ ಅನುಭವವನ್ನು ಪಡೆಯಲು ಹೆಚ್ಚಿನ ಸಮಯವನ್ನು ನೀಡುತ್ತದೆ. ನುರಿತ ಕೆಲಸಗಾರರಿಗೆ ದೇಶದ ವಲಸೆ ಶ್ರೇಯಾಂಕ ವ್ಯವಸ್ಥೆಯ ಅಡಿಯಲ್ಲಿ ತಮ್ಮ ಅಂಕಗಳನ್ನು ಹೆಚ್ಚಿಸಲು ಆಶಿಸುತ್ತಿದ್ದರು. ಆದರೆ ಈ ಪದವೀಧರರು ಅರ್ಜಿಗಳ ಬ್ಯಾಕ್ಲಾಗ್ನಲ್ಲಿ ಸಿಕ್ಕಿಹಾಕಿಕೊಂಡರು. ಇದರಿಂದ ಸರ್ಕಾರವು ಅವುಗಳನ್ನು ಪ್ರಕ್ರಿಯೆಗೊಳಿಸಲು ಅನುಮತಿಸಲು 10 ತಿಂಗಳ ಕಾಲ ವ್ಯವಸ್ಥೆಯನ್ನು ಸ್ಥಗಿತಗೊಳಿಸಿತು.
ಈ ವ್ಯವಸ್ಥೆಯನ್ನು ಪುನಾರಂಭಿಸಿದ ವೇಳೆಯಲ್ಲಿ ವಿದ್ಯಾರ್ಥಿಗಳು ಸಾಮಾನ್ಯಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ವಲಸಿಗರ ವಲಯದಲ್ಲಿ ಪೈಪೋಟಿ ಸೃಷ್ಟಿಯಾಯಿತು. ಹೀಗಾಗಿ ಅನೇಕರು ಶಾಶ್ವತ ನಿವಾಸದ ಅನುಮತಿ ಪಡೆಯುವ ಪ್ರಮಾಣವನ್ನು ತಗ್ಗಿಸಲಾಯಿತು ಎಂದು ಉಲ್ಲೇಖಿಸಲಾಗಿದೆ.
ಶಾಶ್ವತ ವಾಸದ ಪರವಾನಗಿ ಪಡೆಯಲು ಪೈಪೋಟಿ
ಕೆನಡಾದಲ್ಲಿ ಶಾಶ್ವತ ಪರವಾನಗಿ ಅನುಮತಿ ವ್ಯವಸ್ಥೆಗೆ ತಾತ್ಕಾಲಿಕ ವಿರಾಮ ನೀಡಿರುವುದರ ಹಿಂದೆ ಹಲವು ಉದ್ದೇಶಗಳಿವೆ. ಇದರಿಂದ ಬೆಳೆಯುತ್ತಿರುವ ಅರ್ಜಿಗಳ ನಿರ್ವಹಣೆ, ಹೊಸ ಅರ್ಜಿಗಳ ಸಲ್ಲಿಕೆ ಮೇಲೆ ನಿಯಂತ್ರಣ ಅಥವಾ ತಡೆಯುವುದರ ಜೊತೆಗೆ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸುವ ಗುರಿಯನ್ನು ಹೊಂದಿದೆ," ಎಂದು ವಲಸೆ ಇಲಾಖೆ ಹೇಳಿದೆ.
ಕಳೆದ 2021ರಲ್ಲಿ ಸ್ವಾಗತಿಸಲಾದ ಎಲ್ಲಾ ಖಾಯಂ ನಿವಾಸಿಗಳಲ್ಲಿ, ಸುಮಾರು ಶೇ.40ರಷ್ಟು ಮಂದಿ ಮಾಜಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳುೇ ಆಗಿದ್ದಾರೆ ಎಂದು ಇಲಾಖೆಯು ಮಾಹಿತಿ ನೀಡಿದೆ. ಈ ವರ್ಷದ ಜುಲೈನಿಂದ ಶಾಶ್ವತ ನಿವಾಸಕ್ಕಾಗಿ ಅರ್ಜಿ ಸಲ್ಲಿಸಲು 26,250 ಅರ್ಜಿಗಳಿಗೆ ಆಹ್ವಾನ ನೀಡಲಾಗಿದ್ದು, ಅದರಲ್ಲಿ 10,212 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅಥವಾ ಪದವೀಧರರಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರದ ಪ್ರಕಾರ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವಾರ್ಷಿಕವಾಗಿ ಆರ್ಥಿಕತೆಗೆ 15.3 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಕೊಡುಗೆಯನ್ನು ನೀಡುತ್ತಾರೆ. ಆದರೆ ಪ್ರತಿ ವರ್ಷ ಹತ್ತಾರು ಸಾವಿರ ಪದವೀಧರರು ಶಾಶ್ವತವಾಗಿ ವಲಸೆ ಹೋಗಲು ಆಯ್ಕೆ ಮಾಡಿಕೊಂಡರೂ ಮೂಲ ಕಾರ್ಮಿಕರೇ ಆಗಿರುತ್ತಾರೆ. ಪ್ರಸ್ತುತ ಕಾರ್ಮಿಕ ಬಿಕ್ಕಟ್ಟು ಮತ್ತು ಭವಿಷ್ಯದ ಉದ್ಯೋಗ-ಮಾರುಕಟ್ಟೆ ಅಗತ್ಯಗಳನ್ನು ಪರಿಹರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಬಹುದು ಎಂದು ರಾಯಲ್ ಬ್ಯಾಂಕ್ ಆಫ್ ಕೆನಡಾದ ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ.