Budget 2024: 4 ವರ್ಗಕ್ಕೆ ಮೋದಿ 3.0 ಸರ್ಕಾರದ ಆದ್ಯತೆ
ನವದೆಹಲಿ, ಜುಲೈ 23: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು. ನರೇಂದ್ರ ಮೋದಿ 3.0 ಸರ್ಕಾರದ ಗಮನ ನಾಲ್ಕು ವರ್ಗದ ಜನರ ಕಲ್ಯಾಣದ ಮೇಲಿದೆ ಎಂದು ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದರು.
2024ರ ಲೋಕಸಭೆ ಚುನಾವಣೆ ಮುಗಿದ ಬಳಿಕ ನರೇಂದ್ರ ಮೋದಿ ಸರ್ಕಾರ ಮಂಡನೆ ಮಾಡುತ್ತಿರುವ ಮೊದಲ ಬಜೆಟ್ ಇದಾಗಿದೆ. ಬಜೆಟ್ ಭಾಷಣದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಮಂತ್ರಿ ನರೇಂದ್ರ ಮೋದಿ 4 ಪ್ರಮುಖ ವರ್ಗದ ಕಲ್ಯಾಣಕ್ಕೆ ಆದ್ಯತೆ ನೀಡಲಿದ್ದಾರೆ ಎಂದರು.

ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಅಗತ್ಯತೆಗಳು, ಅವರ ಆಕಾಂಕ್ಷೆಗಳು ಮತ್ತು ಅವರ ಕಲ್ಯಾಣವು ಸರ್ಕಾರದ ಆದ್ಯತೆಯಾಗಿದೆ, ಅವರು ಪ್ರಗತಿ ಹೊಂದಿದಾಗ ದೇಶವು ಪ್ರಗತಿಯಾಗುತ್ತದೆ ಎಂದು ಹೇಳಿದರು.
ಅನ್ನದಾತ (ರೈತ)ರಿಗೆ ನಾವು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಎಲ್ಲಾ ಪ್ರಮುಖ ಬೆಳೆಗಳಿಗೆ ಕಳೆದ ತಿಂಗಳು ಘೋಷಣೆ ಮಾಡಿದ್ದೇವೆ. ನಾವು ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಘೋಷಣೆ ಮಾಡಿದರು.
ಬಜೆಟ್ ಭಾಷದಲ್ಲಿ ಸಚಿವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 5 ವರ್ಷಗಳಿಗೆ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ 80 ಕೋಟಿಗೂ ಅಧಿಕ ಜನರು ಫಲಾನುಭವಿಯಾಗಲಿದ್ದಾರೆ ಎಂದರು. ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ನ ಘೋಷಣೆಗಳನ್ನು ಅನುಷ್ಠಾನಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಬಜೆಟ್ ಭಾಷಣದಲ್ಲಿ ಸರ್ಕಾರ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಉತ್ತೇಜಿಸಲು ಹೊಸ ಘೋಷಣೆಗಳನ್ನು ಮಾಡಿದೆ. ಇದರ ಭಾಗವಾಗಿ ಸರ್ಕಾರ ಮಹಿಳಾ ವಸತಿ ನಿಲಯಗಳನ್ನು ಸ್ಥಾಪನೆ ಮಾಡಲಿದೆ.
ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ಯೋಜನೆಗಳಿಗೆ ಸರ್ಕಾರ 3 ಲಕ್ಷ ಕೋಟಿಗೂ ಅಧಿಕ ಅನುದಾನ ಮೀಸಲಿಡಲಿದೆ ಎಂದು ಹೇಳಿದರು.
ಉದ್ಯೋಗ ಕ್ಷೇತ್ರದಲ್ಲಿ ಮಹಿಳಾ ಭಾಗವಹಿಸುವಿಕೆ ಉತ್ತೇಜನ ಮಾಡಲು ಕೈಗಾರಿಕಾ ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ವಸತಿ ನಿಲಯಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ. ಕೌಶಲ್ಯ ಕಾರ್ಯಕ್ರಮಗಳ ಮೂಲಕ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತದೆ ಎಂದರು.
ಬಜೆಟ್ ಭಾಷಣದಲ್ಲಿ ಸಚಿವರು, ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಎಲ್ಲರಿಗೂ ತಲುಪುವಂತೆ ಮಾಡಲಾಗಿದೆ. ಎಲ್ಲರಿಗೂ ವಸತಿ, ಎಲ್ಲಾ ಮನೆಗೂ ನೀರು, ಎಲ್ಲರಿಗೂ ವಿದ್ಯುತ್, ಎಲ್ಲರಿಗೂ ಅಡುಗೆ ಅನಿಲ, ಎಲ್ಲರಿಗೂ ಬ್ಯಾಂಕ್ ಖಾತೆಗಳು ಮತ್ತು ಎಲ್ಲರಿಗೂ ಹಣಕಾಸು ಸೇವೆಗಳ ಮೂಲಕ ದಾಖಲೆ ಸಮಯದಲ್ಲಿ ಪ್ರತಿ ಮನೆ ಮತ್ತು ವ್ಯಕ್ತಿಯನ್ನು ನಾವು ತಲುಪಿದ್ದೇವೆ ಎಂದು ಹೇಳಿದರು.
ಸರ್ಕಾರ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಹಾದಿಯಲ್ಲಿ ಕೆಲಸ ಮಾಡುತ್ತಿದೆ. ನಾವು 2047ರ ವೇಳೆಗೆ ಭಾರತವನ್ನು ವಿಕಸಿತ ಭಾರತ ಮಾಡಲು ಕೆಲಸ ಮಾಡುತ್ತಿದ್ದೇವೆ. ಆ ಗುರಿಯನ್ನು ಸಾಧಿಸಲು, ನಾವು ಜನರ ಸಾಮರ್ಥ್ಯವನ್ನು ಸುಧಾರಿಸಬೇಕು ಮತ್ತು ಅವರನ್ನು ಸಬಲಗೊಳಿಸಬೇಕು ಎಂದು ಭಾಷಣದಲ್ಲಿ ತಿಳಿಸಿದರು.












Click it and Unblock the Notifications