Budget 2024: ಜನರು ಡಿಜಿಟಲ್ ಬಜೆಟ್ ಪ್ರತಿ ಪಡೆಯುವುದು ಹೇಗೆ?
ಬೆಂಗಳೂರು, ಜುಲೈ 20: ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ 2024-25ನೇ ಸಾಲಿನ ಬಜೆಟ್ ಜುಲೈ 23ರ ಮಂಗಳವಾರ ಮಂಡನೆಯಾಗಲಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಿ, ಸರ್ಕಾರ ರಚನೆ ಮಾಡಿದ ಬಳಿಕ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತಿದೆ. ಮೋದಿ ಸರ್ಕಾರದ 2.0 ಮಧ್ಯಂತರ ಬಜೆಟ್ 2024 ಫೆಬ್ರವರಿ 1ರಂದು ಮಂಡಿಸಲಾಗಿತ್ತು.

ಬಜೆಟ್ ಮಂಡನೆಯ ಅಂತಿಮ ಹಂತವಾದ ಹಲ್ವಾ ಸಮಾರಂಭ ಜುಲೈ 16ರಂದು ದೆಹಲಿಯಲ್ಲಿ ನಡೆದಿದೆ. ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಅವರು ಉಪಸ್ಥಿತರಿದ್ದರು.
ನರೇಂದ್ರ ಮೋದಿ ಸರ್ಕಾರ ಬಜೆಟ್ ಮಂಡನೆಯಲ್ಲಿ ಹಲವಾರು ಬದಲಾವಣೆಯನ್ನು ತಂದಿದೆ. ಸಾಮಾನ್ಯ ಬಜೆಟ್, ರೈಲ್ವೆ ಬಜೆಟ್ ಒಟ್ಟಿಗೆ ಮಂಡಿಸಲಾಗುತ್ತದೆ. ಡಿಜಿಟಲ್ ರೂಪದಲ್ಲಿ ಬಜೆಟ್ ಅನ್ನು ತಯಾರು ಮಾಡಿ, ಅದನ್ನು ಲೋಕಸಭೆಯಲ್ಲಿ ಹಣಕಾಸು ಸಚಿವರು ಓದುತ್ತಾರೆ.
ಡಿಜಿಟಲ್ ಬಜೆಟ್ ಪ್ರತಿ ಪಡೆಯುವುದು ಹೇಗೆ?: ಕೇಂದ್ರ ಬಜೆಟ್ ತಯಾರಿಯಲ್ಲಿ ತೊಡಗಿರುವ ಅಧಿಕಾರಿಗಳ ಲಾಕ್-ಇನ್ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು, ಪ್ರತಿವರ್ಷ ಸಾಂಪ್ರದಾಯಿಕ 'ಹಲ್ವಾ ಸಮಾರಂಭ' ನಡೆಸಲಾಗುತ್ತದೆ. ಈಗಾಗಲೇ ಬಜೆಟ್ ಮುದ್ರಣ ಕಾರ್ಯ ಆರಂಭವಾಗಿದ್ದು, 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಜುಲೈ 23ರಂದು ಮಂಡನೆಯಾಗಲಿದೆ.
ಬಜೆಟ್ನ ಆದಾಯ, ಖರ್ಚು, ಅನುದಾನದ ಬೇಡಿಕೆ, ಅನುದಾನ ಹಂಚಿಕೆ ಸೇರಿದಂತೆ ಬಜೆಟ್ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು 'ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್'ನಲ್ಲಿ ಲಭ್ಯವಿರುತ್ತವೆ. ಸಂಸದರು ಮತ್ತು ಸಾರ್ವಜನಿಕರು ಡಿಜಿಟಲ್ ರೂಪದಲ್ಲಿ ಲಭ್ಯವಿರುವ ಈ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.
ಈ ಅಪ್ಲಿಕೇಶನ್ನಲ್ಲಿ ದ್ವಿ-ಭಾಷೆಗಳಲ್ಲಿ(ಇಂಗ್ಲಿಷ್ ಮತ್ತು ಹಿಂದಿ) ಹಾಗೂ ಆಂಡ್ರಾಯ್ಡ್ ಮತ್ತು ಐಒಎಸ್ ವೇದಿಕೆಗಳಲ್ಲಿ ಬಜೆಟ್ನ ಪ್ರತಿ ಲಭ್ಯವಿರುತ್ತದೆ. ಈ ಅಪ್ಲಿಕೇಶನ್ ಅನ್ನು ಜನರು ಕೇಂದ್ರ ಬಜೆಟ್ ವೆಬ್ ಪೋರ್ಟಲ್ (http://www.indiabudget.gov.in) ನಿಂದ ಸಹ ಡೌನ್ಲೋಡ್ ಮಾಡಿಕೊಳ್ಳಬಹುದು.
ಜುಲೈ 23ರ ಮಂಗಳವಾರ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವರು ಬಜೆಟ್ ಭಾಷಣವನ್ನು ಪೂರ್ಣಗೊಳಿಸಿದ ನಂತರ ಬಜೆಟ್ ದಾಖಲೆಗಳು ಮೊಬೈಲ್ ಅಪ್ಲಿಕೇಶನ್ನಲ್ಲಿ ಲಭ್ಯವಿರುತ್ತವೆ. ಜನರು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಅವುಗಳನ್ನು ಓದಬಹುದು.
'ಹಲ್ವಾ ಸಮಾರಂಭ'ದ ಬಳಿಕ ಕೇಂದ್ರ ಹಣಕಾಸು ಸಚಿವರು ಬಜೆಟ್ ಮುದ್ರಣಾಲಯಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಶುಭ ಹಾರೈಸಿದರು. ಬಜೆಟ್ ಮುದ್ರಣ, ಅಪ್ಲಿಕೇಶನ್ಗೆ ಹಾಕುವ ಕಾರ್ಯ ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯಲಿದ್ದು, ಬಜೆಟ್ನಲ್ಲಿ ಏನು ಅಡಗಿದೆ? ಎಂಬುದು ಮಂಗಳವಾರ ತಿಳಿಯಲಿದೆ.
ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ 4 ಪ್ರಮುಖ ವಿಚಾರಗಳ ಕುರಿತು ಗಮನಹರಿಸಿದ್ದಾರೆ. ಬಡವರು, ಮಹಿಳೆರು, ಯುವಕರು ಮತ್ತು ರೈತರ ಅಗತ್ಯತೆಗಳು, ಆಕಾಂಕ್ಷೆಗಳು ಮತ್ತು ಅವರ ಕಲ್ಯಾಣವು ಸರ್ಕಾರದ ಆದ್ಯತೆಯಾಗಿದೆ. ಇವರೆಲ್ಲ ಪ್ರಗತಿ ಹೊಂದಿದಾಗ ದೇಶವು ಪ್ರಗತಿಯಾಗುತ್ತದೆ ಎಂದು ಹೇಳಿದ್ದರು.
ಕಳೆದ 10 ವರ್ಷಗಳಲ್ಲಿ ಎಲ್ಲರಿಗೂ ವಸತಿ, ಹರ್ ಘರ್ ಜಲ್, ಎಲ್ಲರಿಗೂ ವಿದ್ಯುತ್, ಎಲ್ಲರಿಗೂ ಅಡುಗೆ ಅನಿಲ, ಬ್ಯಾಂಕ್ ಖಾತೆಗಳು ಮತ್ತು ಎಲ್ಲರಿಗೂ ಹಣಕಾಸು ಸೇವೆಗಳ ಮೂಲಕ ದಾಖಲೆ ಸಮಯದಲ್ಲಿ ಪ್ರತಿ ಮನೆ ಮತ್ತು ವ್ಯಕ್ತಿಯನ್ನು ತಲುಪಿದ್ದೇವೆ ಎಂದು ಹೇಳಿದ್ದರು.
ಈಗ 2024ರ ಲೋಕಸಭೆ ಚುನಾವಣೆ ಮುಕ್ತಾಯಗೊಂಡಿದೆ. ಬಿಜೆಪಿ ನಿರೀಕ್ಷೆ ಮಾಡಿದಷ್ಟು ಸ್ಥಾನ ಸಿಕ್ಕಿಲ್ಲ. ಆದರೆ ಎನ್ಡಿಎ ಮೈತ್ರಿಕೂಟ 3ನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಬಜೆಟ್ನಲ್ಲಿ ಜನರಿಗೆ ಯಾವ-ಯಾವ ಹೊಸ ಘೋಷಣೆಗಳನ್ನು ಮಾಡಲಾಗುತ್ತದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications