ಬಜೆಟ್; ನರೇಗಾ ಯೋಜನೆಗೆ 1.5 ಲಕ್ಷ ಕೋಟಿ ಅನುದಾನ ನಿರೀಕ್ಷೆ
ನವದೆಹಲಿ, ಜನವರಿ 24; ಕೋವಿಡ್ ಪರಿಸ್ಥಿತಿಯ ಕಾರಣ 2021-22ರಲ್ಲಿಯೂ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನಜೀವನದಲ್ಲಿ ಸಾಕಷ್ಟು ಬದಲಾವಣೆ ಆಯಿತು. ಗ್ರಾಮೀಣ ಪ್ರದೇಶದಲ್ಲಿ ಜನರ ಜೀವನ ಮಟ್ಟ ಸುಧಾಕರಣೆಗೆ ಸಹಾಯಕವಾಗಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2022-23ರ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚಿನ ಅನುದಾನವನ್ನು ನೀಡುವ ನಿರೀಕ್ಷೆ ಇದೆ.
ನರೇಗಾ ಯೋಜನೆಯಡಿ ಪಪ್ಪಾಯ ಬೆಳೆದು ಲಾಭ ಪಡೆದ ರೈತ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶದ ಬಡ ಜನರಿಗೆ 100 ದಿನಗಳ ಕೆಲಸದ ಭದ್ರತೆ ನೀಡುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಈ ಯೋಜನೆಗೆ ಕೋವಿಡ್ ಪರಿಸ್ಥಿತಿಯಲ್ಲಿ ಬಹಳ ಬೇಡಿಕೆ ಬಂದಿತು. ಗ್ರಾಮೀಣ ಪ್ರದೇಶದ ಜನರು ನರೇಗಾ ಮೂಲಕ ಕೆಲಸ ಪಡೆದು ಆರ್ಥಿಕವಾಗಿ ಸಬಲರಾಗಲು ಸಹಾಯಕವಾಯಿತು.
ನರೇಗಾ ಯೋಜನೆಯಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ಪ್ರಥಮ ಸ್ಥಾನ
ಕೋವಿಡ್ ಪರಿಸ್ಥಿತಿಯ ಲಾಕ್ಡೌನ್ನಿಂದ ನಗರದಿಂದ ಹಳ್ಳಿಗಳಿಗೆ ವಾಪಸ್ ಆದ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಾಯಕ್ಕೆ ಬಂದಿತು. ಈ ಬಾರಿಯ ಬಜೆಟ್ನಲ್ಲಿ ಈ ಯೋಜನೆಗಾಗಿಯೇ ಸರ್ಕಾರ 1.5 ಲಕ್ಷ ಕೋಟಿ ರೂ. ಮೀಸಲಿಡಲಿದೆ. ಇದು ಯೋಜನೆಗೆ ಮೀಸಲಿಡುತ್ತಿರುವ ಅತಿ ಹೆಚ್ಚಿನ ಮೊತ್ತವಾಗಿದೆ.
ಕಾರ್ಮಿಕರಿಗೆ ನೆರವಾದ ನರೇಗಾ; ರೈತನ ಮೊಗದಲ್ಲೂ ನಗು
ಆರ್ಥಿಕ ವರ್ಷ 2018, 2019 ಮತ್ತು 2020 ಸೇರಿ ಸುಮಾರು 294.04 ಕೋಟಿ ದಿನಗಳ ಉದ್ಯೋಗವನ್ನು ಯೋಜನೆಯಡಿ ಸೃಷ್ಟಿ ಮಾಡಲಾಗಿದೆ. ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಯೋಜನೆಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಆದ್ದರಿಂದ ಈ ಆರ್ಥಿಕ ವರ್ಷದಲ್ಲಿಯೂ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ಗ್ರಾಮೀಣ ಮಟ್ಟದ ಜನರಿಗೆ ಸಹಕಾರ ನೀಡಲು ಕೇಂದ್ರ ಮುಂದಾಗಿದೆ.
ನರೇಗಾ ಯೋಜನೆ ಪ್ರತಿ ಗ್ರಾಮೀಣ ಕುಟುಂಬಕ್ಕೆ ಕನಿಷ್ಠ 100 ದಿನಗಳ ಖಾತರಿ ನೀಡಲಾಗುತ್ತದೆ. ಇದರಿಂದಾಗಿ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ತಮ್ಮ ಊರಿನಲ್ಲೇ ಕೆಲಸ ಸಿಗುತ್ತದೆ. ವೇತನ ಸಹ ಬ್ಯಾಂಕ್ ಖಾತೆಗೆ ನೇರವಾಗಿ ಜಮಾವಣೆ ಆಗುವುದರಿಂದ ಮಧ್ಯವರ್ತಿಗಳ ಕಾಟ ತಪ್ಪಲಿದೆ.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ನರೇಗಾ ಯೋಜನೆ ಟೀಕಿಸಿದ್ದರು. ಈ ಯೋಜನೆ ಯುಪಿಎ ಆಡಳಿತ ಪ್ರಮುಖ ವೈಫಲ್ಯಗಳಲ್ಲಿ ಒಂದು ಎಂದು ಹೇಳಿದ್ದರು. ಆದರೆ ಯೋಜನೆಯನ್ನು ಸರ್ಕಾರ ಮುಂದುವರೆಸಿಕೊಂಡು ಬಂದಿದೆ ಮತ್ತು ಈಗ ಅದೇ ಯೋಜನೆಗೆ ಸರ್ಕಾರ ಹೆಚ್ಚಿನ ಅನುದಾನವನ್ನು ನೀಡುತ್ತಿದೆ.
2020-21 ನೇ ಸಾಲಿನ ಬಜೆಟ್ನಲ್ಲಿ ಸರ್ಕಾರ ಯೋಜನೆಗೆ 61,500 ಕೋಟಿ ಅನುದಾನ ನೀಡಿತ್ತು. ಬಳಿಕ 50,000 ಕೋಟಿಯನ್ನು ಸೇರಿಸಿತು. ಈ ಬಾರಿಯ ಬಜೆಟ್ನಲ್ಲಿಯೂ ಹೆಚ್ಚಿನ ಅನುದಾನವನ್ನು ಈ ಯೋಜನೆಗೆ ಮೀಸಲಿಡಬೇಕು ಎಂದು ತಜ್ಞರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ನರೇಗಾ ಸಂಘರ್ಷ ಮೋರ್ಚಾದ ಸದಸ್ಯ ದೇಬ್ಮಲ್ಯ ನಂದಿ ಈ ಕುರಿತು ಮಾತನಾಡಿದ್ದು, "ಸರ್ಕಾರವು ತನ್ನ ಹಿಂದಿನ ತಪ್ಪುಗಳಿಂದ ಕಲಿಯಬೇಕು ಮತ್ತು ಉದ್ಯೋಗ ಸೃಷ್ಟಿ ಮತ್ತು ವೇತನ ಪಾವತಿಯಲ್ಲಿನ ಮಧ್ಯಂತರ ಅಡೆತಡೆಗಳು, ವಿಳಂಬವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.
"ಕಳೆದ ಹಲವು ವರ್ಷಗಳಿಂದ ಮೊದಲ 6-7 ತಿಂಗಳಲ್ಲಿ ಶೇ 80-90ರಷ್ಟು ಹಣ ಖಾಲಿಯಾಗುತ್ತದೆ ಮತ್ತು ಹೆಚ್ಚುವರಿ ಹಂಚಿಕೆಯಾಗುವವರೆಗೆ ಕೆಲಸ ನಿಧಾನವಾಗುತ್ತದೆ. ಪೂರಕ ಹಂಚಿಕೆಗಳು ಇದ್ದರೂ ಸಚಿವಾಲಯದಿಂದ ಮಂಜೂರಾತಿ ಪಡೆಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಬಿಡುಗಡೆ ಮತ್ತಷ್ಟು ವಿಳಂಬವಾಗುತ್ತದೆ" ಎಂದು ಹೇಳಿದ್ದಾರೆ.
ಈ ವರ್ಷದ ಬಜೆಟ್ನಲ್ಲಿ 1 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಅನುದಾನವನ್ನು ಯೋಜನೆಗೆ ನೀಡಬೇಕು. ಈ ಯೋಜನೆಯಡಿಯಲ್ಲಿ ಕೆಲಸ ಮಾಡಲು ಗ್ರಾಮೀಣ ಪ್ರದೇಶದ ಜನರು ಆಸಕ್ತರಾಗಿದ್ದಾರೆ. ಹೆಚ್ಚಿನ ಅನುದಾನ ಸಿಕ್ಕರೆ ಸ್ಥಳೀಯ ಆಡಳಿತವು ಕಾಮಗಾರಿಗಳನ್ನು ವೇಗಗೊಳಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ನರೇಗಾ ಯೋಜನೆಯಡಿ 100 ದಿನದ ಉದ್ಯೋಗ ನೀಡುವ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಡಲಾಗಿದೆ. ಇದಕ್ಕೆ ಬಜೆಟ್ನಲ್ಲಿ ಒಪ್ಪಿಗೆ ಸಿಗಲಿದೆಯೇ? ಕಾದು ನೋಡಬೇಕು.