'ಬ್ಯಾಲೆಟ್ ಪೇಪರ್' ಬಳಸಿದರೆ 2019ರಲ್ಲಿ ಬಿಜೆಪಿಗೆ ಸೋಲು: ಮಾಯಾವತಿ
ಲಕ್ನೋ, ಡಿಸೆಂಬರ್ 2: ಬ್ಯಾಲೆಟ್ ಪೇಪರ್ ಗಳನ್ನು ಬಳಸಿದರೆ 2019ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
'ನಾನಿದನ್ನು ದೃಢ ವಿಶ್ವಾಸದಿಂದ ಹೇಳುತ್ತಿದ್ದೇನೆ' ಎಂದು ಅವರು ಹೇಳಿದ್ದಾರೆ. ಶುಕ್ರವಾರ ಹೊರ ಬಿದ್ದ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯ ನಂತರದ ಎರಡನೇ ಸ್ಥಾನವನ್ನು ಬಿಎಸ್ಪಿ ಪಡೆದುಕೊಂಡಿತ್ತು. ಇದಾದ ಬಳಿಕ ಮಾಯಾವತಿ ಈ ಹೇಳಿಕೆ ನೀಡಿದ್ದಾರೆ.
ಒಟ್ಟು 16 ಮೇಯರ್ ಸ್ಥಾನಗಳಲ್ಲಿ ಬಿಜೆಪಿ 14ರಲ್ಲಿ ಗೆದ್ದಿದ್ದರೆ ಬಿಎಸ್ಪಿ 2ರಲ್ಲಿ ಗೆಲುವು ಸಾಧಿಸಿ ಮರಳಿ ತನ್ನ ಶಕ್ತಿ ಪ್ರದರ್ಶನ ನಡೆಸಿತ್ತು.
"ಇಡೀ ದೇಶವೇ ತಮ್ಮ ಪರವಾಗಿದೆ. ಜನಾಭಿಪ್ರಾಯವನ್ನು ಸಂತೋಷದಿಂದ ಸ್ವೀಕರಿಸುತ್ತೇವೆ ಎಂದು ಹೇಳುವ ಬಿಜೆಪಿಗರು 'ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್'ಗಳನ್ನು ಪಕ್ಕಕ್ಕಿರಿಸಿ ಬ್ಯಾಲೆಟ್ ಪೇಪರ್ ಗಳಿಂದ ಚುನಾವಣೆ ನಡೆಸಬೇಕು. ನಾನು ದೃಢ ವಿಶ್ವಾಸದಿಂದ ಹೇಳುತ್ತೇನೆ ಒಂದೊಮ್ಮೆ 2019ರ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಗಳಲ್ಲಿ ನಡೆಸಿದರೆ ಬಿಜೆಪಿ ನಿಜವಾಗಿಯೂ ಅಧಿಕಾರಕ್ಕೆ ಬರುವುದಿಲ್ಲ," ಎಂದು ಮಾಯಾವತಿ ಪ್ರತಿಪಾದಿಸಿದ್ದಾರೆ.
ದಲಿತರ ಜತೆ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ನಮಗೆ ಮತ ಹಾಕಿದ್ದಾರೆ ಎಂದು ಮಾಯಾವತಿ ಹೇಳಿದ್ದಾರೆ. ಜತೆಗೆ ಚುನಾವಣೆಯಲ್ಲಿ ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಇಲ್ಲದಿದ್ದಲ್ಲಿ ನಮ್ಮ ಹೆಚ್ಚಿನ ಅಭ್ಯರ್ಥಿಗಳು ಮೇಯರ್ ಗಳಾಗುತ್ತಿದ್ದರು ಎಂದಿದ್ದಾರೆ.