ಸಲಿಂಗ ಕಾಮ ಅಸಹಜ, ಬಿಜೆಪಿ ಬೆಂಬಲಿಸಲ್ಲ
ನವದೆಹಲಿ, ಡಿ.15: ಸಲಿಂಗಕಾಮ ಎಂಬುದು ಅಸ್ವಾಭಾವಿಕ ವರ್ತನೆ, ಅಸಹಜ. ಬಿಜೆಪಿ ಎಂದಿಗೂ ಅದನ್ನು ಬೆಂಬಲಿಸಲಾಗದು. ಆದ್ದರಿಂದ ಸಂವಿಧಾನದ 377ನೆ ಸೆಕ್ಷನ್ಅನ್ನು ನಾವು ಪ್ರಬಲವಾಗಿ ಬೆಂಬಲಿಸುತ್ತೇವೆ ಎಂದು ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಈ ಮೂಲಕ ಸೆಕ್ಷನ್ 377ರ ವಿಚಾರದಲ್ಲಿ ಬಿಜೆಪಿ ಕೊನೆಗೂ ಸ್ಪಷ್ಟ ನಿಲುವು ತಾಳಿದೆ. ಈ ಸೆಕ್ಷನ್ಅನ್ನು ಬೆಂಬಲಿಸುವುದಾಗಿ ತಿಳಿಸಿದೆ. ಶನಿವಾರ ಟೆಲಿಗ್ರಾಪ್ ಪತ್ರಿಕೆಯ ಜೊತೆಗೆ ಮಾತನಾಡುತ್ತ ರಾಜ್ನಾಥ್ ಸಿಂಗ್ ಅವರು, ಪಕ್ಷದ ನಿಲುವನ್ನು ತಿಳಿಸಿದ್ದಾರೆ. ಸಲಿಂಗಗಾಮಿಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಬದಲಾವಣೆ ತರುವುದನ್ನು ಪ್ರಬಲವಾಗಿ ವಿರೋಧಿಸುವುದಾಗಿ ಗೋರಖ್ಪುರದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಈ ಮೊದಲು ಹೇಳಿದ್ದರು.
ಸಲಿಂಗರತಿ ಪರ -ವಿರೋಧ ಹೋರಾಟ ಇನ್ನೂ ಜಾರಿಯಲ್ಲಿದೆ. 2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗರತಿ ಶಿಕ್ಷಾರ್ಹವಲ್ಲ ಎಂದು ತೀರ್ಪು ನೀಡಿದ್ದರ ವಿರುದ್ಧ ದೇಶಾದ್ಯಂತ ವಾದ-ವಿವಾದಗಳು ತೀವ್ರಗೊಂಡಿತ್ತು. ಧಾರ್ಮಿಕ ಮುಖಂಡರು ದೆಹಲಿ ಹೈಕೋರ್ಟ್ ನೀಡಿದ ತೀರ್ಪಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸುಪ್ರಿಂಕೋರ್ಟ್ ಮೊರೆ ಹೋಗಿದ್ದರು. ಸುಪ್ರಿಂಕೋರ್ಟ್ ಮೊರೆ ಹೋಗಿರುವವರಲ್ಲಿ ಯೋಗಗುರು ಬಾಬಾ ರಾಮದೇವ್ ಕೂಡಾ ಸೇರಿದ್ದರು. ಈಗ ಸುಪ್ರೀಂಕೋರ್ಟ್ ಸಂವಿಧಾನದ 377ನೆ ಸೆಕ್ಷನ್ ತಿದ್ದುಪಡಿ ಬಗ್ಗೆ ತೀರ್ಪು ನೀಡಿದ್ದು, ಸಲಿಂಗಕಾಮದ ಅಪರಾಧ ಎಂದಿದೆ.

ಸುಪ್ರೀಕೋರ್ಟ್ ತೀರ್ಪು ರಸ್ತೆಯಲ್ಲಿ ಸಿಗುವ ಒಂದು ಉಬ್ಬು ಮಾತ್ರ. ಸಲಿಂಗಕಾಮದ ಪರ ನಮ್ಮ ಹೋರಾಟ ಮುಂದುವರಿಯುತ್ತದೆ. ಈ ದೇಶದ ಜನರು ಮುಂದುವರಿದವರು, ನಮಗೆ ಪಾಲಕರಿಂದಲೂ ಸಾಕಷ್ಟು ಬೆಂಬಲವಿದೆ. ಆದರೆ, ಆ ತೀರ್ಪು ತೀವ್ರ ನೋವು ತಂದಿದೆ ಎಂದು ಸಲಿಂಗಕಾಮವನ್ನು ಬೆಂಬಲಿಸುತ್ತಿರುವ ಹೋರಾಟಗಾರರು ಹೇಳಿದ್ದಾರೆ.[ಸಲಿಂಗಕಾಮ ಅನೈತಿಕ, ಅಪರಾಧ : ಸುಪ್ರೀಂಕೋರ್ಟ್]
ಸಲಿಂಗ ಕಾಮದ ಮೇಲೆ ಮತ್ತೆ ನಿಷೇಧವನ್ನು ಹೇರುವ ಸುಪ್ರೀಂ ಕೋರ್ಟಿನ ತೀರ್ಪು ಹೊರಬಿದ್ದಿರುವುದರಿಂದ 'ಭಾರತದ ಒಂದು ಹೆಜ್ಜೆ ಹಿಂದಿಟ್ಟಿದೆ'' ಹಾಗೂ ಅದು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಘಟನೆಯ ಮುಖ್ಯಸ್ಥೆ ನವಿ ಪಿಳ್ಳೆ ಗುರುವಾರ ಹೇಳಿದ್ದರು.












Click it and Unblock the Notifications