ಮಿಜೋರಾಂ: ಬೂತ್ ಸಮಿತಿಗಳಿಗೆ ಬಲ ತುಂಬಲು ಮುಂದಾದ ಬಿಜೆಪಿ
ನವದೆಹಲಿ, ಜೂನ್ 8: ಭಾರತೀಯ ಜನಾತಾ ಪಕ್ಷ ತನ್ ಗಮನವನ್ನು ಈಶಾನ್ಯ ರಾಜ್ಯವಾದ ಮಿಜೋರಾಂ ಮೇಲೆ ಕೇಂದ್ರೀಕರಿಸಿದೆ. 2023ರಲ್ಲಿ ಮಿಜೋರಾಂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆ ರಾಜ್ಯದಲ್ಲಿ ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸುವ ಕಾರ್ಯವನ್ನು ಕೇಸರಿ ಪಕ್ಷವು ಪ್ರಾರಂಭಿಸಿದೆ.
ಕಳೆದ ತಿಂಗಳು ರಾಜ್ಯದ ಮೂರು ನಗರಸಭೆಗಳಲ್ಲಿ ಒಂದಾದ ಮಾರಾ ಅಟಾನಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್(ಎಂಎಡಿಸಿ)ನಲ್ಲಿ 25 ನಗರಸಭೆ ಸ್ಥಾನಗಳ ಪೈಕಿ 12 ಸ್ಥಾನಗಳಲ್ಲಿ ಜಯಗಳಿಸಲು ಬಿಜೆಪಿ ಯಶಸ್ವಿಯಾಗಿದೆ. ಆದರೆ ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷವು ಕಾಂಗ್ರೆಸ್ನೊಂದಿಗೆ ಕೈಜೋಡಿಸದ ಪರಿಣಾಮ ಎಂಎಡಿಸಿ ಅಧಿಕಾರ ಮೈತ್ರಿಗೆ ಹೋಯಿತು. ಆದಾಗ್ಯೂ ಪಕ್ಷವನ್ನು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯದ ಬಿಜೆಪಿ ನಾಯಕರು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಕಳೆದ ವಾರ ರಾಜಧಾನಿ ಐಜ್ವಾಲ್ ನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ, ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ಇಡಿಎ)ದಲ್ಲಿ ಎಂಎನ್ಎಫ್ ಸೇರ್ಪಡೆ ಕುರಿತು ಮರುಚಿಂತನೆ ನಡೆಸುವಂತೆ ಪಕ್ಷದ ಹೈಕಮಾಂಡ್ಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ರಾಜಕೀಯ ನಿರ್ಣಯವನ್ನು ಅಂಗೀಕರಿಸಿದ್ದಾರೆ.

ಕೇಂದ್ರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು
"ಬೂತ್ ಮಟ್ಟದಲ್ಲಿ ಸಮಿತಿಗಳನ್ನು ಬಲಪಡಿಸುವುದು ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ,'' ಎಂದು ಮಿಜೋರಾಂ ಬಿಜೆಪಿ ರಾಜ್ಯಾಧ್ಯಕ್ಷ ವನಲಾಲ್ಮುವಾಕ ತಿಳಿಸಿದರು.
"ನಾವು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಹೊರಟಿದ್ದೇವೆ. ಅಲ್ಲದೇ ಬಿಜೆಪಿ ಸರಕಾರದ ಯೋಜನೆಗಳು ಹಾಗೂ ಅದರಿಂದ ಜನರು ಹೇಗೆ ಪ್ರಯೋಜನ ಪಡೆಯಬಹುದು ಎಂಬುದರ ಬಗ್ಗೆ ಮನೆ ಮನೆಗೆ ತೆರಳಿ ಅರಿವು ಮೂಡಿಸಲಿದ್ದೇವೆ. ಜತೆಗೆ ಈ ಯೋಜನೆಗಳು ಬಿಜೆಪಿ ಸರಕಾರದ್ದೇ ಹೊರತು ರಾಜ್ಯ ಸರಕಾರದ್ದಲ್ಲ ಎಂದು ಅವರಿಗೆ ಮನವರಿಕೆ ಮಾಡಿಸುತ್ತೇವೆ,'' ಎಂದು ವನಲಾಲ್ಮುವಾಕ ಹೇಳಿದರು.

600 ಕ್ಕೂ ಹೆಚ್ಚು ಬೂತ್ ಸಮಿತಿಗಳಿವೆ
"ಇದೀಗ ಬೂತ್ ಮತ್ತು ಮಂಡಲ ಸಮಿತಿಗಳನ್ನು ಬಲಪಡಿಸಲು ಆದ್ಯತೆ ನೀಡಲಾಗಿದೆ. ರಾಜ್ಯದ 40 ವಿಧಾನಸಭೆ ಕ್ಷೇತ್ರಗಳ ಪೈಕಿ 32 ಕ್ಷೇತ್ರಗಳಲ್ಲಿ ಬಿಜೆಪಿ ಅಸ್ತಿತ್ವ ಹೊಂದಿದೆ. ಅದೇ ರೀತಿ ರಾಜ್ಯದ 1221 ಬೂತ್ ಗಳ ಪೈಕಿ 600 ಕ್ಕೂ ಹೆಚ್ಚು ಬೂತ್ ಗಳಲ್ಲಿ ನಾವು ಸಮಿತಿಗಳನ್ನು ಹೊಂದಿದ್ದೇವೆ,'' ಎಂದು ತಿಳಿಸಿದರು.
"ಇನ್ನೊಂದೆಡೆ ಎಂಎಡಿಸಿ ಚುನಾವಣೆಗೂ ಮೊದಲು ಲಾಯ್ ಅಟಾನಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್(ಎಲ್ಎಡಿಸಿ)ಗೆ ನಡೆದ ಚುನಾವಣೆಯು ಬಿಜೆಪಿಯ ಬೆಳವಣಿಗೆ ಸಾರುತ್ತದೆ. ಈ ಹಿಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಕೇವಲ 500 ಮತಗಳು ಬಂದಿತ್ತು. ಆದರೆ 2020ರಲ್ಲಿ ನಡೆದ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ 11,000 ಮತಗಳು ಬಂದಿವೆ,'' ಎಂದು ವನಲಾಲ್ಮುವಾಕ ಹೇಳಿದರು.

ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನ
"ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿ ಪಕ್ಷಕ್ಕೆ ಸೇರಲು ಆರಂಭಿಸಿದ್ದಾರೆ. ಈ ವಾರದಲ್ಲಿ ಎಂಟು ಮಂದಿ ಮಾಜಿ ಯೋಧರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ,'' ಎಂದು ಮಿಜೋರಾಂ ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದರು.
ಕ್ರಿಶ್ಚಿಯನ್ ಬಹುಸಂಖ್ಯಾತ ರಾಜ್ಯವಾದ ಮಿಜೋರಾಂ ನಲ್ಲಿ ಇದುವರೆಗೂ ಬಿಜೆಪಿ ಸರಕಾರ ಅಥವಾ ಬಿಜೆಪಿ ನೇತೃತ್ವದ ಮೈತ್ರಿ ಸರಕಾರ ಅಸ್ವಿತ್ವಕ್ಕೆ ಬಂದಿಲ್ಲ. ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ರಾಜ್ಯದಲ್ಲಿ ದೊಡ್ಡ ಪ್ರತಿಭಟನೆಗಳು ನಡೆದಿವೆ.
"ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಹಲವು ತಪ್ಪು ಕಲ್ಪನೆಗಳು ಜನರಲ್ಲಿವೆ. ಈ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ನಮ್ಮ ಕರ್ತವ್ಯವಾಗಿದೆ,'' ಎಂದು ವನಲಾಲ್ಮುವಾಕ ಹೇಳಿದರು.












Click it and Unblock the Notifications