ಬಿಜೆಪಿ-ಆರ್ಎಸ್ಎಸ್ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದೆ: ರಾಹುಲ್ ಗಾಂಧಿ
ಬೆಂಗಳೂರು, ಜುಲೈ 27: ಬಿಜೆಪಿ-ಆರ್ಎಸ್ಎಸ್ ಕೇವಲ ಅಧಿಕಾರದ ಮೇಲೆ ಆಸಕ್ತಿ ಹೊಂದಿದ್ದು, ಜನರ ದುಃಖ ಮತ್ತು ನೋವಿನ ಬಗ್ಗೆ ಕಾಳಜಿ ವಹಿಸದೆ ದೇಶವನ್ನು ವಿಭಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಯುವ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, "ಬಿಜೆಪಿ-ಆರ್ಎಸ್ಎಸ್ಗೆ ಅಧಿಕಾರ ಮಾತ್ರ ಬೇಕು ಮತ್ತು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದು. ಅಧಿಕಾರಕ್ಕಾಗಿ ಅವರು ಮಣಿಪುರವನ್ನು ಸುಡುತ್ತಾರೆ, ಅವರು ಇಡೀ ದೇಶವನ್ನು ಸುಡುತ್ತಾರೆ, ಅವರು ದೇಶದ ನೋವು ದುಃಖದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಹೇಳಿದರು.

ಅದು ಹರಿಯಾಣ, ಪಂಜಾಬ್ ಅಥವಾ ಉತ್ತರ ಪ್ರದೇಶವಾಗಿರಲಿ, ಅವರು ಕೇವಲ ಅಧಿಕಾರಕ್ಕಾಗಿ ಇಡೀ ದೇಶವನ್ನು ಮಾರಾಟ ಮಾಡುತ್ತಾರೆ. ಕಾಂಗ್ರೆಸ್ಗೆ ಇದು ಹೋರಾಟವಾಗಿದೆ. ಒಂದು ಕಡೆ ನೀವು ಕುಳಿತಿರುವಿರಿ ಮತ್ತು ನಿಮಗೆ ದೇಶದ ಮೇಲೆ ಪ್ರೀತಿ ಇದೆ. ದೇಶಕ್ಕೆ ನೋವುಂಟಾದಾಗ ಅಥವಾ ಅದರ ಪ್ರಜೆಗಳಿಗೆ ನೋವುಂಟಾದಾಗ, ನೀವು ಕೂಡ ನೋಯುತ್ತೀರಿ ಮತ್ತು ದುಃಖಿತರಾಗುತ್ತೀರಿ. ಆದರೆ ಬಿಜೆಪಿ ಆರ್ಎಸ್ಎಸ್ನವರ ಹೃದಯದಲ್ಲಿ ಅಂತಹ ಯಾವುದೇ ಭಾವನೆಗಳಿರಲ್ಲ. ಆರ್ಎಸ್ಎಸ್-ಬಿಜೆಪಿಯವರಿಗೆ ಯಾವುದೇ ನೋವು ಇಲ್ಲ. ಯಾಕೆಂದರೆ ಅವರು ದೇಶವನ್ನು ಒಡೆಯುವ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಗಾಂಧಿಯವರ ಭಾಷಣದ ಆಯ್ದ ಭಾಗಗಳನ್ನು ಹಂಚಿಕೊಂಡಿದೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಜನಾಂಗೀಯ ಕಲಹ ಪೀಡಿತ ಮಣಿಪುರದ ಪರಿಸ್ಥಿತಿಯ ಬಗ್ಗೆ ಪ್ರಧಾನಿಯಿಂದ ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿವೆ ಮತ್ತು ಅದರ ನಂತರ ಪೂರ್ಣ ಪ್ರಮಾಣದ ಚರ್ಚೆಯನ್ನು ನಡೆಸುತ್ತಿದೆ.
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಪರಿವಾರ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದಾರೆ. ಕೇವಲ 9 ವರ್ಷದಲ್ಲಿ 118 ಲಕ್ಷ ಕೋಟಿ ಸಾಲ ಮಾಡಿ ದೇಶದ ಸಾಲವನ್ನು 170 ಲಕ್ಷ ಕೋಟಿಗೆ ಏರಿಸಿದ್ದಾರೆ ಎಂದು ಆರೋಪಿಸಿದ್ದರು.
ಕಳೆದ 75 ವರ್ಷಗಳಿಂದ ಇದ್ದ ದೇಶದ ಸಾಲ 53 ಲಕ್ಷ ಕೋಟಿ ಮಾತ್ರ. ಈ ಸಾಲವನ್ನು 170 ಲಕ್ಷ ಕೋಟಿಗೆ ಏರಿಸಿದ ಕುಖ್ಯಾತಿ ಪ್ರಧಾನಿ ಮೋದಿ ಮತ್ತು ಬಿಜೆಪಿ-ಆರ್ ಎಸ್ ಎಸ್ ಪರಿವಾರದ್ದು ಎಂದು ನೇರ ಆರೋಪ ಮಾಡಿದ್ದರು. ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ, ಬೆಲೆ ಏರಿಕೆ ಕಾರಣದಿಂದ ಬಡವರು-ಮಧ್ಯಮ ವರ್ಗದವರು ಹೈರಾಣಾಗಿರುವ ಹೊತ್ತಲ್ಲೇ ಬಿಜೆಪಿ ಪಕ್ಷದ ದ್ವೇಷ ರಾಜಕಾರಣ ಇಡಿ ದೇಶವನ್ನು ಆವರಿಸುತ್ತಿದೆ. ದ್ವೇಷ ಅಳಿಸಿ ಪ್ರೀತಿಯ ಭಾರತವನ್ನು ಪುನರ್ ನಿರ್ಮಿಸಲು "ಉತ್ತಮ ಭಾರತದ ಅಡಿಪಾಯ" ಸಮಾವೇಶ ಸಹಕಾರಿಯಾಗಲಿದೆ ಎಂದರು.












Click it and Unblock the Notifications