Breaking: ಉತ್ತರಾಖಂಡ್ ನೂತನ ಸಿಎಂ ಆಗಿ ತೀರಥ್ ಸಿಂಗ್ ರಾವತ್ ಆಯ್ಕೆ
ಡೆಹ್ರಾಡೂನ್, ಮಾರ್ಚ್ 10: ಉತ್ತರಾಖಂಡ್ ನೂತನ ಮುಖ್ಯಮಂತ್ರಿಯಾಗಿ ಸಂಸದ ತೀರಥ್ ಸಿಂಗ್ ರಾವತ್ ಆಯ್ಕೆಯಾಗಿದ್ದಾರೆ.
ಇಂದು ಸಂಜೆ 4 ಗಂಟೆಗೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಬಳಿಕ ಇಂದು ಬೆಳಗ್ಗೆ ನಡೆದ ಶಾಂಸಕಾಂಗ ಸಭೆಯಲ್ಲಿ ತೀರಥ್ ಸಿಂಗ್ ರಾವತ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.
ಉತ್ತರಾಖಂಡ್ ಸಂಸದರೂ ಆಗಿರುವ ರಾವತ್ ಈ ಹಿಂದೆ ಶಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ, ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಹೆಸರು ಕೊನೆಯ ಕ್ಷಣದವರೆಗೂ ಕೇಳಿಬಂದಿತ್ತು, ಅಂತಿಮವಾಗಿ ತೀರಥ್ ಸಿಂಗ್ ರಾವತ್ ಹೆಸರನ್ನು ಅಂತಿಮಗೊಳಿಸಲಾಗಿದೆ.

ನೂತನ ಮುಖ್ಯಮಂತ್ರಿ ಹೆಸರನ್ನು ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರೇ ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮಾರ್ಚ್ 09 ರಂದು ರಾಜೀನಾಮೆ ಸಲ್ಲಿಸಿದ್ದರು, ಪಕ್ಷದದಲ್ಲಿನ ಆಂತರಿಕ ಬೆಳವಣಿಗೆ ಬಳಿಕ ರಾವತ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಮುಂದಿನ ಫೆಬ್ರವರಿಯಲ್ಲಿ ಉತ್ತರಾಖಂಡ್ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ರಾವತ್ ಅವರು ಬಿಜೆಪಿ ಸ್ಥಳೀಯ ಶಾಸಕರು ಹಾಗೂ ಜನರ ಮೆಚ್ಚುಗೆ ಗಳಿಸಲು ವಿಫಲರಾಗಿದ್ದಾರೆ ಎಂದು ಹೇಳಲಾಗಿತ್ತು.
ಹೀಗಾಗಿ ತನ್ನಿಂದ ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಬಾರದು ಎನ್ನುವ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾವತ್ ಅವರ ಕಾರ್ಯ ವೈಖರಿ ವಿರೋಧಿಸಿ ಹೈಕಮಾಂಡ್ಗೂ ಕೆಲವರು ದೂರು ಸಲ್ಲಿಸಿದ್ದಾರೆ. ಹೀಗಾಗಿ ರಮಣ್ ಸಿಂಗ್ ಹಾಗೂ ದುಷ್ಯಂತ್ ಸಿಂಗ್ ಸಮಿತಿಯು ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ವರದಿ ಸಲ್ಲಿಸಿತ್ತು.












Click it and Unblock the Notifications