ಸಹೋದರ ಹತ್ಯೆ ಹಿಂದೆ ಬಿಜೆಪಿ ಸಂಸದ: ಕಫೀಲ್ ಖಾನ್
ಲಕ್ನೋ, ಜೂನ್ 17: ಸಹೋದರ ಹತ್ಯೆ ಯತ್ನದ ಹಿಂದೆ ಬಿಜೆಪಿ ಸಂಸದರಿದ್ದಾರೆ ಎಂದು ಗೋರಖಪುರದ ಬಿಜೆಪಿ ಆಸ್ಪತ್ರೆಯ ನಿರ್ದೇಶಕರಾಗಿದ್ದ ಡಾ. ಕಫೀಲ್ ಖಾನ್ ಹೇಳಿದ್ದಾರೆ.
ತಮ್ಮನ ಮೇಲೆ ಗುಂಡು ಹಾರಿಸಲು, "ಬಿಜೆಪಿ ಸಂಸದರಾದ ಕಮಲೇಶ್ ಪಾಸ್ವಾನ್ ಮತ್ತು ಬಲ್ದೇವ್ ಪ್ಲಾಜಾದ ಮಾಲಿಕ ಸತೀಶ್ ನಂಗಾಲಿಯಾ ಶೂಟರ್ ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಪಾಸ್ವಾನ್ ಅವರಿಗೆ ನನ್ನ ತಮ್ಮನ ಜೊತೆ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ. ನನ್ನ ಸಂಬಂಧಿಯೊಬ್ಬರಿಗೆ ಜಾಗವೊಂದಿತ್ತು. ಅದನ್ನು ಫೆಬ್ರವರಿಯಲ್ಲಿ ಕಮಲೇಶ್ ಮತ್ತು ಸತೀಶ್ ಒತ್ತುವರಿ ಮಾಡಿದ್ದರು. ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಬಂಧನ ನಡೆಸದಂತೆ ಅವರು ಹೈಕೋರ್ಟ್ ನಿಂದ ತಡೆ ಆದೇಶವನ್ನು ತಂದಿದ್ದಾರೆ," ಎಂದು ಕಫೀಲ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶ: ಡಾ. ಕಫೀಲ್ ಖಾನ್ ಸಹೋದರನ ಮೇಲೆ ಗುಂಡಿನ ದಾಳಿ
"ಈ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಬೇಕು ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ನಾವು ಬಯಸುತ್ತೇವೆ. ಉತ್ತರ ಪ್ರದೇಶ ಪೊಲೀಸರು ಇದನ್ನು ತನಿಖೆ ನಡೆಸಬೇಕು ಎಂದು ನಾನು ಬಯಸುತ್ತಿಲ್ಲ," ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
"ಉತ್ತರ ಪ್ರದೇಶ ಪೊಲೀಸರು ಯಾರದ್ದೋ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಅವರ ಉದ್ದೇಶ ಸ್ಪಷ್ಟವಾಗಿದೆ," ಎಂದು ಖಾನ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮನ ಮೇಲೆ ಗುಂಡಿನ ದಾಳಿ ನಡೆದಾಗ ಆರೋಪಿಗಳನ್ನು 48 ಗಂಟೆಗಳಲ್ಲಿ ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಈಗ ಒಂದು ವಾರವಾಗಿದೆ. ಆದರೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇಲ್ಲಿಯವರೆಗೆ ಯಾವ ಬಂಧನವನ್ನೂ ನಡೆಸಿಲ್ಲ," ಎಂದು ಅವರು ಕಿಡಿಕಾರಿದ್ದಾರೆ.
ಜೂನ್ 10 ರಂದು ಕಫೀಲ್ ಖಾನ್ ಸಹೋದರನ ಮೇಲೆ ಲಕ್ನೋದಲ್ಲಿರುವ ಆದಿತ್ಯನಾಥ್ ನಿವಾಸದಿಂದ ಕೇವಲ 500 ಮೀಟರ್ ದೂರದಲ್ಲಿ ಗುಂಡಿನ ದಾಳಿ ನಡೆದಿತ್ತು.