ಅಂದು ಮೋದಿ ರಾಜೀನಾಮೆ ಕೇಳಿದ್ದ ಸ್ಮೃತಿ ಇರಾನಿ ಇಂದು ಮೋದಿ ಪರಮಾಪ್ತೆ
ಕಾಲಾಯ ತಸ್ಮೇ ನಮಃ ಎನ್ನುವುದಕ್ಕೆ ಇದೊಂದು ಉದಾಹರಣೆ, ಅಂದು ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದ ಸಚಿವೆ ಇಂದು ಮೋದಿ ಪರಮಾಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದು ಮೋದಿ ರಾಜೀನಾಮೆಗೆ ಡಿಮಾಂಡ್ ಮಾಡಿದ್ದ ಸಚಿವೆ ಬೇರೆಯಾರೂ ಅಲ್ಲ, ಕಳೆದೆರಡು ದಿನಗಳಿಂದ ಸಂಸತ್ತಿನಲ್ಲಿನ ತನ್ನ ಬೆಂಕಿಯುಂಡೆಯಂತಹ ಭಾಷಣದಿಂದ ವಿಪಕ್ಷಗಳಿಗೆ ಬಿಸಿಮುಟ್ಟಿಸಿ, ಅಷ್ಟೇ ವಿವಾದ ಹುಟ್ಟು ಹಾಕಿರುವ ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮೃತಿ ಇರಾನಿ. (ಸಂಸತ್ತಿನಲ್ಲಿ ಸ್ಮೃತಿ ವಾಗ್ದಾಳಿ)
ಹೌದು, ಬಿಜೆಪಿ ಕಾರ್ಯಕರ್ತೆಯಾಗಿದ್ದ ಸ್ಮೃತಿ ಇರಾನಿ, ಡಿಸೆಂಬರ್ 2004ರಲ್ಲಿ ಮೋದಿ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆ ಸಮಯದಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಅಂದು ಸ್ಮೃತಿ, ಮೋದಿ ರಾಜೀನಾಮೆಗೆ ಒತ್ತಾಯಿಸಿದ ವಿಡಿಯೋಗೆ ಇಲ್ಲಿ ಕ್ಲಿಕ್ಕಿಸಿ
ಮೋದಿ ಈ ತಕ್ಷಣದಿಂದಲೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು, ಇಲ್ಲವಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. (ವಿದ್ಯಾರ್ಥಿ ಸಾವು, ಸ್ಮೃತಿ ರಾಜೀನಾಮೆಗೆ ಆಗ್ರಹ)
ಅಂದಿನ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಲೋಕಸಭೆಗೆ ಸ್ಪರ್ಧಿಸಿದ್ದ ಸ್ಮೃತಿ ಇರಾನಿ
2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಬಿಜೆಪಿ ಟಿಕೆಟಿನಿಂದ ದೆಹಲಿಯ ಚಾಂದ್ನಿ ಚೌಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಸ್ಮೃತಿ, ಕಾಂಗ್ರೆಸ್ಸಿನ ಕಪಿಲ್ ಸಿಬಲ್ ಎದುರು 79,415 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಸೋಲಿಗೆ ಮೋದಿನೇ ಕಾರಣ
2004ರಲ್ಲಿ ನನ್ನ ಮತ್ತು ಪಕ್ಷದ ಸೋಲಿಗೆ ಮೋದಿಯೇ ಕಾರಣ. ಮೋದಿಯಿಂದ ಬಿಜೆಪಿಯ ಹೆಸರು ಹಾಳಾಗುತ್ತಿದೆ. ಗುಜರಾತ್ ಮುಖ್ಯಮಂತ್ರಿಯಾಗಿರುವ ಮೋದಿ, ಗೋಧ್ರಾ ಘಟನೆಯನ್ನು ನಿಭಾಯಿಸಿದ ರೀತಿಯಿಂದ ಪಕ್ಷ ಸೋಲು ಅನುಭವಿಸುವಂತಾಯಿತು - ಸ್ಮೃತಿ ಇರಾನಿ.
ಮೋದಿ ರಾಜೀನಾಮೆ ನೀಡಬೇಕು
ನರೇಂದ್ರ ಮೋದಿ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಡಿಸೆಂಬರ್ 25ರಿಂದ ನಾನು ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ. ಗುಜರಾತ್ ಎಂದಾಕ್ಷಣ ಜನ, ಗೋಧ್ರಾ ಘಟನೆಯ ಬಗ್ಗೆ ಉಲ್ಲೇಖಿಸುತ್ತಾರೆ, ಪಕ್ಷದ ಇಮೇಜಿಗೆ ಈ ಘಟನೆಯಿಂದ ಹಾನಿಯಾಗಿದೆ - ಸ್ಮೃತಿ ಇರಾನಿ.
ವರಿಷ್ಠರ ಅನುಮತಿ ಯಾಕೆ ಬೇಕು
ನಿಮ್ಮ ಉಪವಾಸದ ಬಗ್ಗೆ ಪಕ್ಷದ ಮುಖಂಡರ ಅನುಮತಿ ಪಡೆದಿದ್ದೀರಾ ಎನ್ನುವ ಮಾಧ್ಯಮವರ ಪ್ರಶ್ನೆಗೆ ಉತ್ತರಿಸಿದ್ದ ಸ್ಮೃತಿ ಇರಾನಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ನಾವು. ನನ್ನ ಹೇಳಿಕೆಗೆ ಪಕ್ಷದ ಮುಖಂಡರ ಪರ್ಮಿಷನ್ ಅಗತ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವಾಜಪೇಯಿ ಅವರ ಬಗ್ಗೆ ಗೌರವವಿರುವವಳು ನಾನು ಎಂದು ಸ್ಮೃತಿ ಇರಾನಿ ಹೇಳಿದ್ದರು.
ಬದಲಾದ ಪರಿಸ್ಥಿತಿ
ಬದಲಾದ ಪರಿಸ್ಥಿತಿ, ಅಭಿವೃದ್ದಿ ವಿಚಾರದಲ್ಲಿ ಗುಜರಾತ್ ರಾಜ್ಯವನ್ನು ದೇಶದ ಮಂಚೂಣಿಗೆ ತಂದು, ಸತತವಾಗಿ ಗುಜರಾತ್ ಅಸೆಂಬ್ಲಿ ಚುನಾವಣೆಯನ್ನು ಗೆದ್ದು, ಪಕ್ಷದ ಜನಪ್ರಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದ ಮೋದಿಯ ಆಪ್ತವಲಯದಲ್ಲಿ ಸ್ಮೃತಿ ಇರಾನಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು.
ರಾಹುಲ್ ವಿರುದ್ದ ಸ್ಪರ್ಧಿಸಿದ್ದ ಇರಾನಿ
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ದ ಕಾಂಗ್ರೆಸ್ಸಿನ ಭದ್ರಕೋಟೆ ಅಮೇಠಿಯಲ್ಲಿ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ತೀವ್ರ ಪೈಪೋಟಿ ನೀಡಿ ಒಂದು ಲಕ್ಷ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. 2009ರ ಚುನಾವಣೆಯಲ್ಲಿ 3.7 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ರಾಹುಲ್ ಗೆಲುವಿನ ಅಂತರ 2014ರಲ್ಲಿ 107,903ಕ್ಕೆ ಇಳಿದಿದ್ದು ಮೋದಿ, ಇರಾನಿ ಪರವಾಗಿ ನಡೆಸಿದ್ದ ಮತಯಾಚನೆಯ ಪ್ರಭಾವವಾಗಿತ್ತು.
ಮೂಲತಃ ಟಿವಿ ನಟಿ
ಮೂಲತಃ ಟಿವಿ ನಟಿಯಾಗಿರುವ ಸ್ಮೃತಿ ಇರಾನಿಗೆ ಬಣ್ಣದಲೋಕದಲ್ಲಿ ಭರ್ಜರಿ ಮೈಲೇಜ್ ಕೊಟ್ಟಿದ್ದು "ಕ್ಯೂಂಕಿ ಸಾಸ್ ಬಿ ಕಭೀ ಬಹೂತೀ" ಎನ್ನುವ ಹಿಂದಿ ಸೀರಿಯಲ್. ಅತ್ಯುತ್ತಮ ಮಾತುಗಾರ್ತಿಯಾಗಿರುವ ಸ್ಮೃತಿ, ನಂತರ ರಾಜಕೀಯ ಪ್ರವೇಶಿಸಿ ಬಿಜೆಪಿಯ ಸಕ್ರಿಯ ಕಾರ್ಯಕರ್ತೆಯಾಗಿ ಕೆಲಸ ಮಾಡಿದರು.
ಕೊನೆಗೊಂದು ಮಾತು
ಭಾವೋದ್ವೇಗಕ್ಕೊಳಗಾಗಿ ಸಂಸತ್ತಿನ ಎರಡೂ ಸದನದಲ್ಲಿ ಚಿಂದಿ ಭಾಷಣ ಉಡಾಯಿಸಿದ್ದ ಸ್ಮೃತಿ ಇರಾನಿ ಭಾಷಣದ ಸತ್ಯಾಸತ್ಯತೆಯ ಬಗ್ಗೆ ವ್ಯತಿರಿಕ್ತ ಹೇಳಿಕೆ ಕೇಳಿಬರುತ್ತಿರುವುದರಿಂದ, ವಿಪಕ್ಷಗಳು HRD ಸಚಿವೆಯ ರಾಜೀನಾಮೆಗೆ ಪಟ್ಟು ಹಿಡಿದು ಕೂತಿವೆ. ಮುಂದಿನ ದಿನಗಳಲ್ಲಿ ಏನಾಗುತ್ತೋ?ಎಲ್ಲರ ಕಾಲ್ ಎಳೆಯುತ್ತೆ ಕಾಲ..