ಮೋದಿಯನ್ನು ತಬ್ಬಿಕೊಳ್ಳಲು ರಾಹುಲ್ ಗಾಂಧಿಗೆ ಸಲಹೆ ನೀಡಿದ್ದು ಜ್ಯೋತಿಷಿ!
Recommended Video

ನವದೆಹಲಿ, ಜುಲೈ 24: ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡಿದ್ದ ರಾಹುಲ್ ಗಾಂಧಿ ದೇಶದಾದ್ಯಂತ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದರು. ಈಗಲೂ ಈ ಘಟನೆಯ ಚರ್ಚೆ ನಿಂತಿಲ್ಲ.
ರಾಜಕೀಯ ಕೋನ, ಮಾನವೀಯತೆ ಕೋನ ಎಲ್ಲವನ್ನೂ ಈ ಘಟನೆಗೆ ಆರೋಪಿಸಿ ಚರ್ಚೆಗಳನ್ನು ಮಾಡಲಾಗಿದೆ. ಮೀಮ್ಗಳಂತೂ ಲಕ್ಷಾಂತರ. ಆದರೆ ಬಿಜೆಪಿ ಸದಸ್ಯರಿಗೆ ರಾಹುಲ್ ಅವರ ಈ ವರ್ತನೆ ಸ್ವಲ್ಪವೂ ಸರಿ ಬಂದಿಲ್ಲ. ಅದರಲ್ಲಿಯೂ ಈ ಘಟನೆ ಬಗ್ಗೆ ದೆಹಲಿಯ ಬಿಜೆಪಿ ಮುಖಂಡರೊಬ್ಬರ ಹೇಳಿಕೆ ವಿಚಿತ್ರವಾಗಿದೆ.
ರಾಹುಲ್ ಗಾಂಧಿಗೆ ಮೋದಿಯನ್ನು ತಬ್ಬಿಕೊಳ್ಳುವಂತೆ ಜ್ಯೋತಿಷಿ ಒಬ್ಬರು ಹೇಳಿದ್ದರಂತೆ. ಹೀಗೆಂದು ಹೇಳಿರುವುದು ದೆಹಲಿಯ ಬಿಜೆಪಿ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾ. ಕಾಂಗ್ರೆಸ್ನ ಸಂಸದರೊಬ್ಬರು ಅವರಿಗೆ ಈ ವಿಷಯ ಹೇಳಿದ್ದಾರಂತೆ.


ಪ್ರಧಾನಿ ಆಗಬೇಕೆಂದರೆ ಕುರ್ಚಿ ಮುಟ್ಟಬೇಕು!
ಪ್ರಧಾನಿ ಆಗಬೇಕೆಂದರೆ ಮೋದಿ ಅವರ ಕುರ್ಚಿ ಮುಟ್ಟುವಂತೆ ರಾಹುಲ್ ಗಾಂಧಿ ಅವರಿಗೆ ಜ್ಯೋತಿಷಿ ಒಬ್ಬರು ಹೇಳಿದ್ದರಂತೆ ಹಾಗಾಗಿ ಅವರು ಮೋದಿಯನ್ನು ತಬ್ಬಿಕೊಳ್ಳುವ ನೆಪದಲ್ಲಿ ಅವರ ಕುರ್ಚಿಯನ್ನು ಮುಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾ ಹೇಳಿದ್ದಾರೆ.

ಮೋದಿ ಕೊಲ್ಲಲು ತಂತ್ರ ಎಂದಿದ್ದ ಸ್ವಾಮಿ
ರಾಹುಲ್ ಗಾಂಧಿ ಅವರ ಅಪ್ಪುಗೆಗೆ ಬಿಜೆಪಿ ಸದಸ್ಯರು ಅಸಮಧಾನ ವ್ಯಕ್ತಪಡಿಸಿದ್ದು, ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಅವರಂತೂ, ಮೋದಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ರಾಹುಲ್ ಅವರು ತಬ್ಬಿಕೊಂಡಿರುವ ಸಾಧ್ಯತೆ ಇದೆ ಎಂದು ಟ್ವೀಟ್ ಮಾಡಿದ್ದರು.

ಮಾಧ್ಯಮಗಳಲ್ಲಿ ಭಾರಿ ಚರ್ಚೆ
ರಾಹುಲ್ ಅವರು ಮೋದಿಯನ್ನು ಅಪ್ಪಿಕೊಂಡ ಸುದ್ದಿ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಪತ್ರಿಕೆಗಳಂತೂ ಬಿಜೆಪಿ ಅವಿಶ್ವಾಸ ನಿರ್ಣಯ ಗೆದ್ದಿದ್ದಕ್ಕಿಂತಲೂ ರಾಹುಲ್ ತಬ್ಬಿಕೊಂಡಿದ್ದನ್ನೇ ಮುಖ್ಯ ಸುದ್ದಿ ಮಾಡಿದ್ದವು.

ಸದನದಲ್ಲಿ ಏನಾಯಿತು?
ಮೋದಿ ಆಡಳಿತದಲ್ಲಿ ದ್ವೇಷ ಹೆಚ್ಚಾಗುತ್ತಿದೆ , ಬಿಜೆಪಿ ಹಾಗೂ ಆರ್ಎಸ್ಎಸ್ ಪ್ರತಿಪಾದಿಸುತ್ತಿರುವ ಹಿಂದುತ್ವ ದ್ವೇಷ ಹರಡಿಸುತ್ತಿದೆ. ನೀವು ನನ್ನನ್ನು ಆಡಿಕೊಳ್ಳಿ, ಬೈಯಿರಿ, ಆದರೆ ನಿಮ್ಮನ್ನು ನಾನು ಪ್ರೀತಿಸುತ್ತೇನೆ ಎಂದು ಸದನದಲ್ಲಿ ಹೇಳಿದ ರಾಹುಲ್ ನೇರವಾಗಿ ಮೋದಿ ಕೂತಿದ್ದ ಕುರ್ಚಿಯ ಬಳಿ ತೆರಳಿ ಅವರನ್ನು ತಬ್ಬಿಕೊಂಡರು.

ಕಣ್ಣು ಹೊಡೆಯಲು ಯಾವ ಜ್ಯೋತಿಷಿ ಹೇಳಿದ್ದ?
ಮೋದಿ ಅವರನ್ನು ತಬ್ಬಿಕೊಂಡ ರಾಹುಲ್ ಗಾಂಧಿ ತಮ್ಮ ಭಾಷಣ ಮುಗಿಸಿ ಕುಳಿತುಕೊಂಡ ಬಳಿಕ ತಮ್ಮ ಪಕ್ಕದಲ್ಲಿ ಕೂತಿದ್ದವರಿಗೆ ಕಣ್ಣು ಮಿಟುಕಿಸಿದರು. ಇದು ಸಹ ಭಾರಿ ಸುದ್ದಿಯಾಯಿತು. ದೆಹಲಿಯ ಬಿಜೆಪಿ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾ ಪ್ರಕಾರ ಕುರ್ಚಿ ಮುಟ್ಟಲು ರಾಹುಲ್, ಮೋದಿಯನ್ನು ತಬ್ಬಿಕೊಂಡಿದ್ದರೆ, ಕಣ್ಣು ಹೊಡೆಯಲು ಏನು ಕಾರಣ ಇರಬಹುದು?











Click it and Unblock the Notifications