ನೂತನ ಕಚೇರಿಯಲ್ಲಿ ಬಿಜೆಪಿ 'ಭಾಗ್ಯದ ಬಾಗಿಲು' ಇನ್ನಷ್ಟು ತೆರೆಯುತ್ತಾ?
ನವದೆಹಲಿ, ಫೆ 18: ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿನ ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿ ದೇಶದ ಶ್ರೀಮಂತ ರಾಷ್ಟ್ರೀಯ ಪಕ್ಷ ಬಿಜೆಪಿಯ ನೂತನ ಪ್ರಧಾನ ಕಚೇರಿ ಭಾನುವಾರ (ಫೆ 18) ಉದ್ಘಾಟನೆಗೊಂಡಿದೆ.
ವಾಸ್ತು ಮತ್ತು ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ನೀಡಿ, ಮುಂಬೈ ಮೂಲದ ಆರ್ಕಿಟೆಕ್ಚರ್ ಕಂಪೆನಿ ಈ ಬಹುಮಹಡಿ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಬಿಜೆಪಿಯ ಹಿರಿಯ ಮತ್ತು ಕಿರಿಯ ಮುಖಂಡರು ಕಚೇರಿ ಉದ್ಘಾಟನೆಯ ವೇಳೆ ಹಾಜರಿದ್ದರು.
ಅಶೋಕ ರಸ್ತೆಯಲ್ಲಿದ್ದ ತನ್ನ ಹಳೆಯ ಪ್ರಧಾನ ಕಚೇರಿಯನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದ ಹಿನ್ನಲೆಯಲ್ಲಿ ಬಿಜೆಪಿ ತನ್ನ ಕಚೇರಿಯನ್ನು ನಂಬರ್ 6, ದೀನ್ ದಯಾಳ್ ಉಪಾಧ್ಯಾಯ ಮಾರ್ಗಕ್ಕೆ ಸ್ಥಳಾಂತರಗೊಳಿಸಿದೆ. ಆಗಸ್ಟ್ 2016ರಲ್ಲಿ ನೂತನ ಕಚೇರಿಗೆ ಭೂಮಿಪೂಜೆ ನಡೆದಿತ್ತು.
ಉದ್ಘಾಟನಾ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅನಂತ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.
ನಿಗದಿತ ಸಮಯಕ್ಕೆ ನೂತನ ಕಚೇರಿ ನಿರ್ಮಾಣದ ಕೆಲಸವನ್ನು ಅಮಿತ್ ಶಾ ಮುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನಿಷ್ಠ 20-25ಬಾರಿ ಕಟ್ಟಡ ನಿರ್ಮಾಣವಾಗುತ್ತಿದ್ದ ವೇಳೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪರವಾಗಿ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ. (ಚಿತ್ರ: ANI)
ಅಶೋಕ ರಸ್ತೆಯಲ್ಲಿರುವ ಕಚೇರಿ
ದಶಕಗಳಿಂದ ಅಶೋಕ ರಸ್ತೆಯಲ್ಲಿರುವ ಕಚೇರಿಯಿಂದ ಬಿಜೆಪಿ ಕಾರ್ಯನಿರ್ವಹಿಸಿಸುತ್ತಿತ್ತು. ಆದರೆ, ಸುಪ್ರೀಂಕೋರ್ಟ್ ಕಚೇರಿ ತೆರವುಗೊಳಿಸುವಂತೆ ಆದೇಶ ನೀಡಿದ್ದ ಹಿನ್ನಲೆಯಲ್ಲಿ ಆಗಸ್ಟ್ 18, 2016ರಲ್ಲಿ ನೂತನ ಕಚೇರಿಗೆ ಭೂಮಿ ಪೂಜೆ ನಡೆದಿತ್ತು. ಎರಡು ಎಕರೆಯ ವಿಶಾಲವಾದ ಪ್ರದೇಶದಲ್ಲಿ ಈ ನೂತನ ಕಟ್ಟಡ ತಲೆ ಎತ್ತಿದೆ.
ಪ್ರಧಾನ ಕಟ್ಟಡ ಏಳು ಅಂತಸ್ತಿನದ್ದು, ಉಳಿದ ಎರಡು ಬ್ಲಾಕ್ ಮೂರು ಅಂತಸ್ತು
ಮೂರು ಬ್ಲಾಕ್ ಗಳಲ್ಲಿ ನೂತನ ಕಚೇರಿ ನಿರ್ಮಾಣಗೊಂಡಿದೆ. ಪ್ರಧಾನ ಕಟ್ಟಡ ಏಳು ಅಂತಸ್ತಿನದಾಗಿದ್ದು, ಉಳಿದ ಎರಡು ಬ್ಲಾಕ್ ಮೂರು ಅಂತಸ್ತಿನದ್ದಾಗಿದೆ. ಪಕ್ಷದ ಅಧ್ಯಕ್ಷ, ಉಪಾಧ್ಯಕ್ಷರು, ಹಿರಿಯ ಮುಖಂಡರು, ಪ್ರಧಾನ ಕಾರ್ಯದರ್ಶಿಗಳಿಗೆ ಪ್ರತ್ಯೇಕ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯಿದೆ.
3ಸಾವಿರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಬಹುದಾದ ಕಾನ್ಫರೆನ್ಸ್ ಹಾಲ್
ನೂತನ ಪ್ರಧಾನ ಕಚೇರಿಯಲ್ಲಿ ಒಟ್ಟು ಎಪ್ಪತ್ತು ರೂಮುಗಳಿವೆ, ಜೊತೆಗೆ ಏಕಕಾಲದಲ್ಲಿ ಮೂರು ಸಾವಿರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಬಹುದಾದ ಬೃಹತ್ ಕಾನ್ಫರೆನ್ಸ್ ಹಾಲ್, ಇನ್ನೂರು ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ನೂತನ ಬೃಹತ್ ಕಚೇರಿಗೆ ಪಕ್ಷದ ಪ್ರಧಾನ ಕಾರ್ಯಾಲಯ ಶಿಫ್ಟ್ ಆಗಬೇಕು ಎಂದು ಹಲವಾರು ಬಾರಿ ಕಾರ್ಯಕರ್ತರು ಒತ್ತಡ ಹೇರಿದ್ದರು.
ಕಟ್ಟದ ಇತರ ಸೌಲಭ್ಯಗಳು ಇಂತಿದೆ
ವಾಸ್ತು ಜೊತೆ ಲೇಟೆಸ್ಟ್ ತಂತ್ರಜ್ಞಾನದ ಮೊರೆ ಹೋಗಿರುವ ಬಿಜೆಪಿ, ಸಂಪೂರ್ಣ ಕಟ್ಟಡವನ್ನು ಹಾಲೋ ಬ್ರಿಕ್ಸ್ ನಲ್ಲಿ ನಿರ್ಮಿಸಿ ಪರಿಸರ ಸ್ನೇಹಕ್ಕೆ ಒತ್ತು ನೀಡಿದೆ. ಬಯೋ ಟಾಯ್ಲೆಟ್, ಬಿಸಿ ನೀರು, ಸೋಲಾರ್, ವೈಫೈ ಸೌಲಭ್ಯ, ಹಲವು ಸಮ್ಮೇಳನ ಸಭಾಂಗಣ, ಟಿವಿ ಸ್ಟುಡಿಯೋ, ಪಕ್ಷದ ಕೆಲಸಕ್ಕಾಗಿ ದೆಹಲಿಗೆ ಬರುವ ಕಾರ್ಯಕರ್ತರಿಗೆ ರೂಂನ ವ್ಯವಸ್ಥೆ, ಪತ್ರಿಕಾಗೋಷ್ಠಿಗೆ ವಿಶೇಷ ವ್ಯವಸ್ಥೆ, ಮಾಧ್ಯಮದವರಿಗೆ ಪ್ರತ್ಯೇಕ ಕೊಠಡಿ, ನೂತನ ಕಚೇರಿಯಲ್ಲಿದೆ.
ಎಲ್ಲರಿಗೂ ನನ್ನ ಮನ:ಪೂರ್ವಕ ಅಭಿನಂದನೆಗಳು
ಪ್ರತೀ ಕಾರ್ಯಕರ್ತರು ಈ ಹೊಸ ಕಟ್ಟಡವನ್ನು ತನ್ನ ಮನೆಯೆಂದು ಭಾವಿಸಿ, ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಇಂದು ಈ ಮಟ್ಟಕ್ಕೆ ಬೆಳೆದಿದೆ. ಸರ್ಕಾರಿ ಬಂಗಲೆಗಳಿಂದ ಹೊರಗೆ ಪಕ್ಷದ ಕಚೇರಿಯನ್ನು ಸ್ಥಳಾಂತರಗೊಳಿಸಿದ ಮೊದಲ ರಾಷ್ಟ್ರೀಯ ಪಕ್ಷ ನಮ್ಮದು. ಹೊಸ ಕಟ್ಟಡಕ್ಕೆ ಸಹಕರಿಸಿದ ಎಲ್ಲರಿಗೂ ನನ್ನ ಮನ:ಪೂರ್ವಕ ಅಭಿನಂದನೆಗಳು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.