ಶತ್ರು ಸಂಹಾರ: ಕೆಂಪುಕೋಟೆಯಲ್ಲಿ ಬಿಜೆಪಿಯಿಂದ ಮಹಾಯಜ್ಞ
ನವದೆಹಲಿ, ಜ 23: ದೇವೇಗೌಡರ ಅತಿರುದ್ರ ಮಹಾಯಾಗ, ಡಿ ಕೆ ಶಿವಕುಮಾರ್ ಅವರ ಶತಚಂಡಿಕಾ ಯಾಗದ ನಂತರ, ಬಿಜೆಪಿ ಸಂಸದರೊಬ್ಬರು ನವದೆಹಲಿಯ ಕೆಂಪುಕೋಟೆಯ ಬಳಿ ಅದ್ದೂರಿ ಯಜ್ಞವೊಂದನ್ನು ಆಯೋಜಿಸಿದ್ದಾರೆ.
ಸುಮಾರು 1,200 ಪುರೋಹಿತರು ಈ ಮಹಾಯಜ್ಞದಲ್ಲಿ ಪಾಲ್ಗೊಳ್ಳಲಿದ್ದು, ದೆಹಲಿ ಪೂರ್ವ ಕ್ಷೇತ್ರದ ಬಿಜೆಪಿ ಸಂಸದ ಮಹೇಶ್ ಗಿರಿ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಮಾರ್ಚ್ 18ರಿಂದ 25ರ ವರೆಗೆ ಈ ಮಹಾಯಜ್ಞ ನಡೆಯಲಿದೆ.
ಕೆಂಪುಕೋಟೆಯ ಮಗ್ಗುಲಲ್ಲಿ ಮಹಾಯಜ್ಞಕ್ಕೆ ಅವಕಾಶ ಲಭಿಸಿದ್ದು, ದೇಶದೊಳಗಿನ ಮತ್ತು ಹೊರಗಿನ ದುಷ್ಟಶಕ್ತಿಗಳನ್ನು ಮಟ್ಟಹಾಕುವ ಆಶಯದೊಂದಿಗೆ ಈ ಯಜ್ಞ ನಡೆಸಲಾಗುತ್ತಿದೆ ಎಂದು ಮಹೇಶ್ ಗಿರಿ ಹೇಳಿದ್ದಾರೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ಮೋದಿ ಮತ್ತು ಇತರ ಕ್ಯಾಬಿನೆಟ್ ಸಚಿವರಿಗೆ ಆಹ್ವಾನ ನೀಡಲಾಗಿದೆ ಎಂದು ಮಹೇಶ್ ಗಿರಿ ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಆಹ್ವಾನ ಹೋಗಿದೆಯೇ ಎಂದು ತಿಳಿದುಬಂದಿಲ್ಲ.
ವೇದಪಠಣದೊಂದಿಗೆ ನಡೆಯುವ 'ವೇದಿಕ್ ಯಜ್ಞ' ಎಂದು ಕರೆಯಲಾಗುವ ಈ ಮಹಾಯಾಗಕ್ಕೆ ವಾಣಿಜ್ಯೋದ್ಯಮಿಗಳು, ಸಾರ್ವಜನಿಕರು ದೇಣಿಗೆ ನೀಡಲು ಮುಂದೆ ಬರುತ್ತಿರುವುದು ವಿಶೇಷ.
ಶೃಂಗೇರಿಯಲ್ಲಿ 128 ಖುತ್ವಿಜರಿಂದ ಹನ್ನೆರಡು ದಿನಗಳ ಅತಿರುದ್ರ ಮಹಾಯಾಗವನ್ನು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಕುಟುಂಬದವರು ಆಯೋಜಿಸಿದ್ದರು. ಇದಕ್ಕೂ ಮುನ್ನ ಕೊಲ್ಲೂರು ದೇವಾಲಯದಲ್ಲಿ ಮೂವತ್ತಕ್ಕೂ ಹೆಚ್ಚು ಪುರೋಹಿತರ ನೇತೃತ್ವದಲ್ಲಿ ಇಂಧನ ಸಚಿವ ಡಿ ಕೆ ಶಿವಕುಮಾರ್ ಶತಚಂಡಿಕಾ ಯಾಗ ನಡೆಸಿದ್ದರು.
ನಾನು ನಡೆಸಿದ ಯಾಗ ದೇಶ ಕಲ್ಯಾಣಕ್ಕಾಗಿ, ಶತ್ರುಸಂಹಾರಕ್ಕಾಗಿ ನಡೆಸುವುದು ಶತಚಂಡಿಕಾ ಯಾಗ ಎಂದು ದೇವೇಗೌಡರು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications