ಬಿಹಾರದಲ್ಲಿ ಜೆಡಿಯು-ಬಿಜೆಪಿ ಬ್ರೇಕ್ ಅಪ್ ಸೂಚನೆ?!
ಪಾಟ್ನಾ, ಜೂನ್ 25: ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರದಲ್ಲಿ ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ)ಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ಪಡೆದಿದೆ. ಅಲ್ಲೀಗ ರಾಜ್ಯಪಾಲರ ಆಳ್ವಿಕೆ ಅಸ್ತಿತ್ವಕ್ಕೆ ಬಂದಿದೆ.
ಇತ್ತ ಬಿಹಾರದಲ್ಲೂ ಇಂಥದೇ ಪರಿಸ್ಥಿತಿ ಆರಂಭವಾಗುವುದರಲ್ಲಿದೆಯೇ? ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಎದ್ದಿರುವ ವೈಮನಸ್ಯ ಈಗ ಗುಟ್ಟಾಗಿ ಉಳಿದಿಲ್ಲ.
ಪಿಡಿಪಿಯಿಂದ ಬಿಜೆಪಿ ಬೆಂಬಲ ವಾಪಸ್: ಅಸಲಿ ಕಾರಣವೇನು?
ಈ ಹಿನ್ನೆಲೆಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಸಂಜಯ್ ಸಿಂಗ್ ನೀಡಿದ ಹೇಳಿಕೆ ಇದೀಗ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
"ಬಿಜೆಪಿಗೆ ತನ್ನ ಮೈತ್ರಿಪಕ್ಷದ ಬೆಂಬಲ ಅಗತ್ಯವಿಲ್ಲವೆಂದರೆ, ಅದು ಸ್ವತಂತ್ರವಾಗಿಯೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿ. ಅವರನ್ನು ಯಾರೂ ತಡೆಯುವುದಿಲ್ಲ" ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಸ್ವತಂತ್ರವಾಗಿ ಸ್ಪರ್ಧಿಸಲಿ
"2014 ಮತ್ತು 2019ಕ್ಕೆ ಬಹಳ ವ್ಯತ್ಯಾಸವಿದೆ. ಭಾರತದಲ್ಲಿ ಈಗ ವಿಷಯಾಧಾರಿತ ರಾಜಕೀಯ ಜಾರಿಯಲ್ಲಿದೆ. 2014 ರಲ್ಲಿ ಚುನಾವಣೆಗೂ ಮುನ್ನ ಎತ್ತಿದ ವಿಷಯಗಳಿಗೂ ಈಗಿನದಕ್ಕೂ ವ್ಯತ್ಯಾಸವಿದೆ. ನಿತೀಶ್ ಕುಮಾರ್ ಇಲ್ಲದೆ ಬಿಹಾರದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬರುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಬಿಜೆಪಿಗೂ ಗೊತ್ತು" ಎಂದು ಸಿಂಗ್ ಹೇಳಿದ್ದಾರೆ.
ಕಾಶ್ಮೀರದಲ್ಲಿ ಪಿಡಿಪಿ ಜೊತೆ ಬಿಜೆಪಿ ಡೈವೋರ್ಸ್: ಅಸಲಿ ಸಿನಿಮಾ ಶುರುವಾಗೋದೇ ಇನ್ಮುಂದೆ?
40 ಸ್ಥಾನವನ್ನೂ ಬಿಜೆಪಿಯೇ ಇಟ್ಟುಕೊಳ್ಳಲಿ!
ಬಿಹಾರ ಲೋಕಸಭೆಯ 40 ಸ್ಥಾನವನ್ನೂ ಬಿಜೆಪಿಯೇ ಇಟ್ಟುಕೊಳ್ಳಲಿ. ಆದರೆ ನಮಗೆ ಆತ್ಮವಿಶ್ವಾಸವಿದೆ. ಬಿಹಾರದ ಜಿಲ್ಲೆ ಜಿಲ್ಲೆಯ ಜನರಲ್ಲೂ ನಾವು ವಿಶ್ವಾಸ ಗಳಿಸಿದ್ದೇವೆ. ನಮ್ಮ ಬೆಂಬಲವಿಲ್ಲದೆ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ ಆದರೆ ನಮ್ಮ ಶಕ್ತಿಯೇನು ಎಂಬುದು ಅದಕ್ಕೆ ಅರ್ಥವಾಗಲಿದೆ. ನಿತೀಶ್ ಕುಮಾರ್ ಬೆಂಬಲ, ಹೆಸರು ಇಲ್ಲದೆ ಬಿಜೆಪಿ ಬಿಹಾರದಲ್ಲಿ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂದು ಸಿಂಗ್ ಹೇಳಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಬಿರುಕು?!
2015 ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 243 ಕ್ಷೇತ್ರಗಳಲ್ಲಿ ಆರ್ ಜೆಡಿ 80, ಜೆಡಿಯು 71 ಮತ್ತು ಬಿಜೆಪಿ 53, ಇತರರು 39 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣೆಗೂ ಮುನ್ನವೇ ಆರ್ ಜೆಡಿ-ಜೆಡಿಯು ಮೈತ್ರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಕಳೆದ ಜುಲೈನಲ್ಲಿ ಈ ಮೈತ್ರಿ ಸರ್ಕಾರದಲ್ಲಿ ಬಿರುಕುಂಟಾಗಿ, ಬಿಜೆಪಿ ಬೆಂಬಲದೊಂದಿಗೆ ಜೆಡಿಯು ಮತ್ತೆ ಸರ್ಕಾರ ರಚಿಸಿತ್ತು. ಇದೀಗ ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಷಯದಲ್ಲಿಈ ಮೈತ್ರಿ ಸರ್ಕಾರದಲ್ಲಿ ಬಿರುಕು ಉಂಟಾಗಬಹುದಾದ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಬಿಹಾರದಲ್ಲಿ ಬಿಜೆಪಿ ಏಕಾಂಗಿಯಾಗಿ ಹೋರಾಡುವುದು ಸುಲಭವಿಲ್ಲ. ಜೆಡಿಯು ಜೊತೆ ನಿಷ್ಠುರ ಕಟ್ಟಿಕೊಂಡರೆ ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂಬುದು ರಾಜಕೀಯ ತಜ್ಞರ ಅಂಬೋಣ.
ಕಾಶ್ಮೀರದಲ್ಲೂ ಬ್ರೇಕ್ ಅಪ್
ಜಮ್ಮು-ಕಾಶ್ಮಿರದಲ್ಲಿ ಅಸ್ತಿತ್ವದಲ್ಲಿದ್ದ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರದಿಂದ ಬಿಜೆಪಿ ಬೆಂಬಲ ವಾಪಸ್ ಪಡೆದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ಬಿದ್ದಿದೆ. ಮುಖ್ಯಮಂತ್ರಿಯಾಗಿದ್ದ ಪಿಡಿಪಿಯ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದಾರೆ. ಕಣಿವೆಯಲ್ಲಿ ಹೆಚ್ಚುತ್ತಿರುವ ಹಿಂಸೆಗೆ ತಾನು ಜವಾಬ್ದಾರನಲ್ಲ ಎಂಬುದನ್ನು ತೋರಿಸಿಕೊಳ್ಳಲು ಬಿಜೆಪಿ ಈ ರೀತಿ ಮಾಡಿದೆಯೇ? ಕಾಶ್ಮೀರದ ಹಿಂಸಾಚಾರ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರೀತು ಎಂಬ ಭಯ ಬಿಜೆಪಿಯನ್ನು ಕಾಡಿತ್ತೆ ಎಂಬ ಅನುಮಾನ ಎದ್ದಿತ್ತು!