ಲೋಕಸಭಾ ಚುನಾವಣೆಗೆ ರಾಜ್ಯ ಉಸ್ತುವಾರಿಗಳ ನೇಮಕ ಮಾಡಿದ ಬಿಜೆಪಿ ಹೈಕಮಾಂಡ್: ಕರ್ನಾಟಕದ ಉಸ್ತುವಾರಿ ಯಾರು?
ನವದೆಹಲಿ, ಜನವರಿ 27: ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಒಟ್ಟು 23 ಮಂದಿಯನ್ನು ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕದ ಉಸ್ತುವಾರಿಯನ್ನಾಗಿ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಮತ್ತು ಕರ್ನಾಟಕದ ಸಹ ಉಸ್ತುವಾರಿಯನ್ನಾಗಿ ಸುಧಾಕರ್ ರೆಡ್ಡಿ ಅವರನ್ನು ನೇಮಕ ಮಾಡಿ ಬಿಜೆಪಿ ಹೈಕಮಾಂಡ್ ಶನಿವಾರ ಆದೇಶ ಹೊರಡಿಸಿದೆ.

23 ರಾಜ್ಯಗಳಿಗೆ ಉಸ್ತುವಾರಿ ನೇಮಕ!
ಅಂಡಮಾನ್ ಮತ್ತು ನಿಕೋಬಾರ್ಗೆ ವೈ ಸತ್ಯ ಕುಮಾರ್, ಅರುಣಾಚಲ ಪ್ರದೇಶಕ್ಕೆ ಅಶೋಕ್ ಸಿಂಘಾಲ್, ಚಂಡೀಗಢಕ್ಕೆ ವಿಜಯಭಾಯಿ ರೂಪಾನಿ, ಗೋವಾಕ್ಕೆ ಆಶಿಶ್ ಸೂದ್, ಜಾರ್ಖಂಡ್ಗೆ ಲಕ್ಷ್ಮೀಕಾಂತ ಬಾಜಪೇಯಿ, ಲಡಾಖ್ಗೆ ತರುಣ್ ಚುಗ್, ಲಕ್ಷ್ಯದ್ವೀಪಕ್ಕೆ ಅರವಿಂದ್ ಮೆನನ್, ಪುದುಚೇರಿಗೆ ನಿರ್ಮಲ್ ಕುಮಾರ್ ಸುರಾನಾ, ಸಿಕ್ಕಿಂಗೆ ದಿಲೀಪ್ ಜೈಸ್ವಾಲ್, ಉತ್ತರಾಖಂಡಕ್ಕೆ ದುಶ್ಯಂತ್ ಕುಮಾರ್ ಗೌತಮ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಬಿಹಾರಕ್ಕೆ ವಿನೋದ್ ತಾವ್ಡೆ, ಹರಿಯಾಣಕ್ಕೆ ಬಿಪ್ಲಬ್ ಕುಮಾರ್ ದೇವ್, ಹಿಮಾಚಲ ಪ್ರದೇಶಕ್ಕೆ ಶ್ರೀಕಾಂತ್ ಶರ್ಮಾ, ಮಧ್ಯಪ್ರದೇಶಕ್ಕೆ ಮಹೇಂದ್ರ ಕುಮಾರ್ ಸಿಂಗ್, ಒಡಿಶಾಕ್ಕೆ ವಿಜಯಪಾಲ್ ಸಿಂಗ್ ತೋಮರ್, ತಮಿಳುನಾಡಿಗೆ ಅರವಿಂದ್ ಮೆನನ್, ಪಶ್ಚಿಮ ಬಂಗಾಳಕ್ಕೆ ಮಂಗಲ್ ಪಾಂಡೆ ಇವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ದಕ್ಷಿಣ ರಾಜ್ಯ ಕೇರಳದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಅಲ್ಲದೇ ವಿಜಯಪಾಲ್ ತೋಮರ್ ಅವರನ್ನು ಒಡಿಶಾ ಹಾಗೂ ಶ್ರೀಕಾಂತ್ ಶರ್ಮಾ ಅವರನ್ನು ಹಿಮಾಚಲದ ಉಸ್ತುವಾರಿಯನ್ನಾಗಿ ಮಾಡಲಾಗಿದೆ.












Click it and Unblock the Notifications