ಬಿಜೆಪಿ ಬಲವಂತದ ಮತಾಂತರಕ್ಕೆ ವಿರುದ್ಧ : ಶಾ
ಕೊಚ್ಚಿ: ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ನಡೆದ ಮರುಮತಾಂತರ ಪ್ರಕರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಬೇಕೆಂದು ಪ್ರತಿಪಕ್ಷಗಳು ಲೋಕಸಭೆಯಲ್ಲಿ ಪಟ್ಟು ಹಿಡಿದು ಕುಳಿತಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ಬಲವಂತದ ಮತಾಂತರವನ್ನು ಒಪ್ಪುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಕೇರಳದ ಪಾಲಕ್ಕಾಡ್ನಲ್ಲಿ ಬಿಜೆಪಿ ಸದಸ್ಯರ ಸೇರ್ಪಡೆ ಅಭಿಯಾನದಲ್ಲಿ ಭಾಗವಹಿಸಿದ ಅಮಿತ್ ಶಾ ಈ ಪ್ರತಿಕ್ರಿಯೆ ನೀಡಿದ್ದಾರೆ. [ಕ್ರೈಸ್ತ ಮಿಶನರಿಗಳಿಗೆ rss ಸೆಡ್ಡು]
ಬಲವಂತದ ಮತಾಂತರವನ್ನು ಬಿಜೆಪಿ ಸ್ಪಷ್ಟವಾಗಿ ವಿರೋಧಿಸುತ್ತದೆ. ಹೀಗಾಗಿ ಹೊಸ ಕಾನೂನು ತರುವ ಯೋಚನೆ ಕೇಂದ್ರ ಸರ್ಕಾರಕ್ಕಿದೆ. ಇದನ್ನು ಸ್ವಯಂ ಘೋಷಿತ ಜಾತ್ಯತೀತರು ಬೆಂಬಲಿಸಬೇಕೆಂದು ಅಮಿತ್ ಶಾ ಆಗ್ರಹಿಸಿದರು. [ಮಹಾಮತಾಂತರ ಕಾರ್ಯಕ್ರಮ ರದ್ದು]
ಬಿಜೆಪಿಯು ತರಲು ಉದ್ದೇಶಿಸಿರುವ ಕಾನೂನು ಕುರಿತು ರಾಜಕೀಯ ಪಕ್ಷಗಳ ಜೊತೆ ಚರ್ಚಿಸಲಾಗುವುದು ಎಂದು ಶಾ ತಿಳಿಸಿದ್ದಾರೆ. [ಮತಾಂತರ ಕುರಿತು ಕಾನೂನು ಹೇಳುವುದೇನು]
ಘರ್ ವಾಪಸಿ ಕುರಿತು ಮಾತಾಡಲ್ಲ : ಉತ್ತರ ಪ್ರದೇಶದಲ್ಲಿ ನಡೆಸಿದ 'ಘರ್ ವಾಪಸಿ' ಮತಾಂತರ ಪ್ರಕರಣ ಪ್ರಸ್ತುತ ನ್ಯಾಯಾಲಯದ ಮುಂದಿದೆ. ಆದ್ದರಿಂದ ಈ ಕುರಿತು ನಾನೇನೂ ಹೇಳಲ್ಲ ಎಂದು ತಿಳಿಸಿದರು.
ಅಲ್ಲದೆ, ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರಲು ಬಿಜೆಪಿ ಬದ್ಧವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅಮಿತ್ ಶಾ ಉತ್ತರಿಸಿದರು.