ಅತ್ಯಾಚಾರಿಗಳನ್ನು ಸಂಸ್ಕಾರವಂತರು ಎಂದ ಬಿಜೆಪಿ ಶಾಸಕ ರೌಲ್ಜಿ!
ನವದೆಹಲಿ, ಆಗಸ್ಟ್ 19: "ಗುಜರಾತಿನಲ್ಲಿ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದಲ್ಲಿ 15 ವರ್ಷ ಜೈಲುಶಿಕ್ಷೆ ಅನುಭವಿಸಿ ಬಿಡುಗಡೆಯಾದ ಅಪರಾಧಿಗಳು ಬ್ರಾಹ್ಮಣರು ಹಾಗೂ ಉತ್ತಮ ಸಂಸ್ಕಾರ ಉಳ್ಳವರು," ಎಂದು ಬಿಜೆಪಿ ಶಾಸಕ ಸಿಕೆ ರೌಲ್ಜಿ ಹೇಳಿದ್ದಾರೆ.
ಬಿಲ್ಕಿಸ್ ಬಾನೊ ಅಪರಾಧಿಗಳನ್ನು ಬಿಡುಗಡೆಗೊಳಿಸಿದ್ದಕ್ಕೆ ಗುಜರಾತ್ ಸರ್ಕಾರ ತೀವ್ರ ವಿರೋಧ ಎದುರಿಸುತ್ತಿರುವುದರ ಮಧ್ಯೆ ಶಾಸಕರು ನೀಡಿರುವ ಹೇಳಿಕೆಯು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. 11 ಮಂದಿ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಲು ಸರ್ವಾನುಮತದಿಂದ ನಿರ್ಧರಿಸಿದ ಸರ್ಕಾರಿ ಸಮಿತಿಯಲ್ಲಿದ್ದ ಇಬ್ಬರು ಬಿಜೆಪಿ ನಾಯಕರಲ್ಲಿ ಸಿಕೆ ರೌಲ್ಜಿ ಕೂಡ ಒಬ್ಬರಾಗಿದ್ದರು.
ಸಾಮೂಹಿಕ ಅತ್ಯಾಚಾರಿಗಳಿಗೂ ಕ್ಷಮಾಪಣೆ ನೀಡಬಹುದೇ?
"ಅತ್ಯಾಚಾರಿಗಳು ಯಾವುದೇ ಅಪರಾಧ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನನಗೆ ತಿಳಿದಿಲ್ಲ. ಆದರೆ ಅಪರಾಧ ಮಾಡುವ ಉದ್ದೇಶವನ್ನು ಹೊಂದಿರಬೇಕು," ಎಂದು ರೌಲ್ಜಿ ಇತ್ತೀಚಿಗೆ ನೀಡಿರುವ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಅಪರಾಧಿಗಳು ಉತ್ತಮ ಸಂಸ್ಕಾರ ಹೊಂದಿದ್ದರು ಎಂದ ಶಾಸಕ
"ಅವರು ಬ್ರಾಹ್ಮಣರಾಗಿದ್ದು, ಸಾಮಾನ್ಯವಾಗಿ ಬ್ರಾಹ್ಮಣರು ಉತ್ತಮ ಸಂಸ್ಕಾರವನ್ನು ಹೊಂದಿದ್ದಾರೆ ಎಂದು ಶಾಸಕ ಸಿಕೆ ರೌಲ್ಜಿ ಹೇಳಿದ್ದಾರೆ. ಅವರನ್ನು ಮೂಲೆಗುಂಪು ಮಾಡುವುದು ಅಥವಾ ಶಿಕ್ಷೆಗೆ ಗುರಿಪಡಿಸುವುದು ಬೇರೆ ಯಾರದ್ದೋ ದುರುದ್ದೇಶವೂ ಆಗಿರಬಹುದು. ಅಪರಾಧಿಗಳು ಜೈಲಿನಲ್ಲಿದ್ದಾಗಲೂ ಉತ್ತಮ ನಡತೆ ಹೊಂದಿದ್ದರು," ಎಂದು ಶಾಸಕರು ತಿಳಿಸಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಸಖತ್ ವೈರಲ್ ಆಗುತ್ತಿದ್ದು ತೀವ್ರ ವಿರೋಧಕ್ಕೆ ಗುರಿಯಾಗಿದೆ.
ಮಹಿಳಾ ಸಬಲೀಕರಣದ ಮಾತು, ಅತ್ಯಾಚಾರಿಗಳಿಗೆ ಬಿಡುಗಡೆ ತುತ್ತು!
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಂಪು ಕೋಟೆಯಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಪ್ರತಿಪಾದಿಸಿದ ಕೆಲವೇ ಗಂಟೆಗಳಲ್ಲಿ ಗುಜರಾತ್ ಸರ್ಕಾರವು ಸ್ವಾತಂತ್ರ್ಯ ದಿನದಂದು ತನ್ನ ಉಪಶಮನ ನೀತಿಯ ಅಡಿಯಲ್ಲಿ 11 ಅತ್ಯಾಚಾರಿಗಳನ್ನು ಬಿಡುಗಡೆಗೊಳಿಸಿತು. 15 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವ ಅಪರಾಧಿಗಳಲ್ಲಿ ಒಬ್ಬರು ಬಿಡುಗಡೆಗಾಗಿ ಮನವಿಯೊಂದಿಗೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಗುಜರಾತಿಯಲ್ಲಿ ಅಪರಾಧಿಗಳ ಬಿಡುಗಡೆಗೆ ಸಮಿತಿ ರಚನೆ
ಅತ್ಯಾಚಾರಿಗಳ ಶಿಕ್ಷೆಯಲ್ಲಿ ವಿನಾಯತಿಯನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಸಮಿತಿ ರಚಿಸಿದೆ ಎಂದು ಪಂಚಮಹಲ್ಗಳ ಜಿಲ್ಲಾಧಿಕಾರಿ ಸುಜಲ್ ಮಯಾತ್ರಾ ತಿಳಿಸಿದರು. "ಕೆಲವು ತಿಂಗಳ ಹಿಂದೆ ರಚಿಸಲಾದ ಸಮಿತಿಯು ಎಲ್ಲಾ 11 ಅಪರಾಧಿಗಳ ಕ್ಷಮೆಯ ಪರವಾಗಿ ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಂಡಿತು. ಶಿಫಾರಸನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಅವರ ಬಿಡುಗಡೆಗೆ ಆದೇಶ ಹೊರಬಿತ್ತು ಎಂದು ಮಾಯಾತ್ರಾ ಹೇಳಿದ್ದಾರೆ.
ಏನಿದು ಬಿಲ್ಕಿಸ್ ಬಾನೋ ಪ್ರಕರಣ ಮತ್ತು ಇತಿಹಾಸ
ಮಾರ್ಚ್ 3, 2002 ರಂದು ದಾಹೋದ್ ಜಿಲ್ಲೆಯ ರಂಧಿಕ್ಪುರ ಗ್ರಾಮದಲ್ಲಿ ಬಿಲ್ಕಿಸ್ ಬಾನೋ ಕುಟುಂಬದ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಈ ವೇಳೆ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆಯ ಕುಟುಂಬದ ಏಳು ಸದಸ್ಯರು ಸಾವನ್ನಪ್ಪಿದ್ದು, ಆರು ಮಂದಿ ಓಡಿಹೋಗಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. 2004ರಲ್ಲಿ ಇದೇ ಪ್ರಕರಣದಲ್ಲಿ ಆರೋಪಿಗಳು ಬಂಧಿಸಲಾಗಿತ್ತು.
ಅಹಮದಾಬಾದ್ನಲ್ಲಿ ವಿಚಾರಣೆ ಆರಂಭವಾಯಿತು. ಆದಾಗ್ಯೂ, ಬಿಲ್ಕಿಸ್ ಸಾಕ್ಷಿಗಳಿಗೆ ಹಾನಿಯಾಗಬಹುದು ಮತ್ತು ಸಿಬಿಐ ಸಂಗ್ರಹಿಸಿದ ಸಾಕ್ಷ್ಯವನ್ನು ತಿರುಚಬಹುದು ಎಂಬ ಆತಂಕ ವ್ಯಕ್ತಪಡಿಸಿದ ಹಿನ್ನೆಲೆ ಸುಪ್ರೀಂ ಕೋರ್ಟ್ ಆಗಸ್ಟ್ 2004ರಲ್ಲಿ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಿತು. 11 ಆರೋಪಿಗಳಿಗೆ 2008ರಲ್ಲಿ ಶಿಕ್ಷೆಯ ತೀರ್ಪನ್ನು 2018ರಲ್ಲಿ ಬಾಂಬೆ ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಜನವರಿ 21, 2008 ರಂದು ಬಿಲ್ಕಿಸ್ನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಿದ ಆರೋಪದ ಮೇಲೆ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.