ಹಿಮಾಲಯ ಪ್ರದೇಶದಲ್ಲಿ ಭೂಕಂಪದ ಸಾಧ್ಯತೆ ಹೆಚ್ಚು: ವಿಜ್ಞಾನಿಗಳ ಎಚ್ಚರಿಕೆ
ಡೆಹ್ರಾಡೂನ್ ನವೆಂಬರ್ 10: ಹಿಮಾಲಯ ಪ್ರದೇಶದಲ್ಲಿ ಭಾರೀ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಬುಧವಾರ ಎಚ್ಚರಿಕೆ ನೀಡಿದ್ದಾರೆ. ಜೀವ ಮತ್ತು ಆಸ್ತಿ ಹಾನಿಯನ್ನು ಕಡಿಮೆ ಮಾಡಲು ಸಿದ್ಧತೆಯ ಅಗತ್ಯವನ್ನು ಒತ್ತಿಹೇಳಿದ್ದಾರೆ. ಪಶ್ಚಿಮ ನೇಪಾಳದ ದೂರದ ಪರ್ವತ ಪ್ರದೇಶದಲ್ಲಿ ಬುಧವಾರ ಮುಂಜಾನೆ 6.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ಉತ್ತರಾಖಂಡದಲ್ಲಿ ಕಂಪನಗಳು ಸಂಭವಿಸಿದ್ದು, ಆರು ಜನರು ಸಾವನ್ನಪ್ಪಿದ್ದಾರೆ.
ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ಹಿರಿಯ ಭೂಭೌತಶಾಸ್ತ್ರಜ್ಞ ಅಜಯ್ ಪಾಲ್ ಅವರು, ಭಾರತೀಯ ಮತ್ತು ಯುರೇಷಿಯನ್ ಪ್ಲೇಟ್ಗಳ ನಡುವಿನ ಘರ್ಷಣೆಯ ಪರಿಣಾಮವಾಗಿ ಹಿಮಾಲಯ ಅಸ್ತಿತ್ವಕ್ಕೆ ಬಂದಿದೆ. ಆದರೆ ಇದರ ನಿರಂತರ ಒತ್ತಡದಿಂದಾಗಿ ಅದರ ಅಡಿಯಲ್ಲಿ ಸಂಗ್ರಹವಾಗುವ ಒತ್ತಡದ ಶಕ್ತಿಯು ಭೂಕಂಪಗಳ ರೂಪದಲ್ಲಿ ಕಾಲಕಾಲಕ್ಕೆ ತನ್ನ ಶಕ್ತಿಯನ್ನು ಬಿಡುಗಡೆ ಮಾಡುತ್ತಿರುತ್ತದೆ. ಹಿಮಾಲಯದ ಅಡಿಯಲ್ಲಿ ಒತ್ತಡದ ಶಕ್ತಿಯ ಶೇಖರಣೆಯಿಂದಾಗಿ ಭೂಕಂಪಗಳು ಸಂಭವಿಸುವುದು ಸಾಮಾನ್ಯ. ಆಗ ಇಡೀ ಹಿಮಾಲಯದ ಪ್ರದೇಶವು ನಡುಕಗಳಿಗೆ ಹೆಚ್ಚು ಗುರಿಯಾಗುತ್ತದೆ. ಭೂಕಂಪದ ಬಲದಿಂದ ಹೆಚ್ಚು ಹಾನಿಯಾಗುವ ಸಾಧ್ಯತೆಗಳು ಇರುತ್ತವೆ ಎಂದು ಪಾಲ್ ಹೇಳಿದ್ದಾರೆ.
ಫಿಜಿ ಮತ್ತು ಟೊಂಗಾದಲ್ಲಿ 6.8 ತೀವ್ರತೆಯಲ್ಲಿ ಭೂಕಂಪ
ಭವಿಷ್ಯದ ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ಇರಬಹುದು. ಇದು ಯಾವಾಗ ಸಂಭವಿಸುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಇದು ಮುಂದಿನ ಕ್ಷಣ, ಮುಂದಿನ ತಿಂಗಳು ಅಥವಾ 100 ವರ್ಷಗಳ ನಂತರವೂ ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ.
ಹಿಮಾಲಯದಲ್ಲಿ ದೊಡ್ಡ ಭೂಕಂಪದ ಸಾಧ್ಯತೆ
1897ರಲ್ಲಿ ಶಿಲ್ಲಾಂಗ್ನಲ್ಲಿ, 1905ರಲ್ಲಿ ಕಾಂಗ್ರಾದಲ್ಲಿ, 1934ರಲ್ಲಿ ಬಿಹಾರ-ನೇಪಾಳದಲ್ಲಿ ಮತ್ತು 1950ರಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಕಂಪನಗಳು ಸೇರಿದಂತೆ ಕಳೆದ 150 ವರ್ಷಗಳಲ್ಲಿ ಹಿಮಾಲಯ ಪ್ರದೇಶದಲ್ಲಿ ನಾಲ್ಕು ಪ್ರಮುಖ ಭೂಕಂಪಗಳು ದಾಖಲಾಗಿವೆ. ಇಷ್ಟೆಲ್ಲಾ ಮಾಹಿತಿಗಳಿದ್ದರೂ ಭೂಕಂಪಗಳ ಬಗ್ಗೆ ನಿಖರವಾಗಿ ಏನನ್ನೂ ಹೇಳಲಾಗುವುದಿಲ್ಲ ಎಂದು ಹಿರಿಯ ಭೂಭೌತಶಾಸ್ತ್ರಜ್ಞ ಅವರು ಹೇಳಿದರು.
ಭೂಕಂಪದ ಬಗ್ಗೆ ಹಿರಿಯ ಭೂಭೌತಶಾಸ್ತ್ರಜ್ಞರ ಸಲಹೆ
1991 ರಲ್ಲಿ ಉತ್ತರಕಾಶಿಯಲ್ಲಿ ಭೂಕಂಪ ಸಂಭವಿಸಿದೆ ಮತ್ತು 1999 ರಲ್ಲಿ ಚಮೋಲಿಯಲ್ಲಿ ಒಂದು ಮತ್ತು 2015 ರಲ್ಲಿ ನೇಪಾಳದಲ್ಲಿ ಒಂದು ಭೂಕಂಪ ಸಂಭವಿಸಿದೆ. ಭೂಕಂಪಗಳ ಅನಿರೀಕ್ಷಿತತೆಯಿಂದಾಗಿ ಭಯಪಡುವ ಬದಲು, ಅವುಗಳನ್ನು ಉತ್ತಮ ರೀತಿಯಲ್ಲಿ ಎದುರಿಸಲು ಮತ್ತು ಅವುಗಳಿಂದ ಜೀವ ಮತ್ತು ಆಸ್ತಿ ಹಾನಿಯನ್ನು ಕಡಿಮೆ ಮಾಡಲು ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವುದು ಮುಖ್ಯ ಎಂದು ಅವರು ಹೇಳಿದರು.
ಭೂಕಂಪನದ ಸಿದ್ಧತೆ ಇರಲಿ- ಪಾಲ್
ಭೂಕಂಪಗಳು ಸಂಭವಿಸುವ ಮೊದಲು, ಅವು ಸಂಭವಿಸುವ ಸಮಯದಲ್ಲಿ ಮತ್ತು ಸಂಭವಿಸಿದ ನಂತರ ಸಿದ್ಧತೆಗಳ ಮೂಲಕ ಏನು ಮಾಡಬಹುದು ಎಂಬುದರ ಕುರಿತು ಜನರಿಗೆ ಅರಿವು ಮೂಡಿಸಬೇಕು. ಪ್ರತಿ ವರ್ಷಕ್ಕೊಮ್ಮೆಯಾದರೂ ಮಾಕ್ ಡ್ರಿಲ್ ನಡೆಸಬೇಕು, ಈ ಕೆಲಸಗಳನ್ನು ಮಾಡಿದರೆ ಭೂಕಂಪದಿಂದ ಆಗುವ ಹಾನಿಯನ್ನು ಶೇ.99.99 ರಷ್ಟು ಕಡಿಮೆ ಮಾಡಬಹುದು ಎಂದು ಅವರು ಹೇಳಿದರು.
ಭೂಕಂಪದ ಪರಿಣಾಮಗಳ ಕಡಿಮೆ ಮಾಡಲು ಪಾಲ್ ಸಲಹೆ
ಜಪಾನ್ನ ಉದಾಹರಣೆಯನ್ನು ಉಲ್ಲೇಖಿಸಿದ ಪಾಲ್, 'ಜಪಾನ್ನಲ್ಲಿ ಹೆಚ್ಚು ಭೂಕಂಪಗಳು ಸಂಭವಿಸುತ್ತವೆ. ಆದರೆ ಅದರ ಉತ್ತಮ ಸನ್ನದ್ಧತೆಯಿಂದಾಗಿ ಮಧ್ಯಮ ತೀವ್ರತೆಯ ಭೂಕಂಪಗಳಿಂದ ನಿರಂತರವಾಗಿ ಹಾನಿಗೊಳಗಾದರೂ ದೇಶವು ಜೀವ ಮತ್ತು ಆಸ್ತಿಗೆ ಹೆಚ್ಚಿನ ಹಾನಿಯನ್ನು ಅನುಭವಿಸುವುದಿಲ್ಲ' ಎಂದು ಹೇಳಿದರು. ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ಕೂಡ ತನ್ನ ತಂಡಗಳನ್ನು ಹಳ್ಳಿಗಳಿಗೆ ಮತ್ತು ಶಾಲೆಗಳಿಗೆ ಕಳುಹಿಸಿ ಭೂಕಂಪದ ಪರಿಣಾಮಗಳನ್ನು ಕಡಿಮೆ ಮಾಡಲು ಏನು ಮಾಡಬಹುದು ಎಂಬುದರ ಕುರಿತು ಅರಿವು ಮೂಡಿಸುತ್ತದೆ ಎಂದು ಅವರು ಹೇಳಿದರು.