ಚುನಾವಣಾ ವರ್ಷದಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡರಿಗೆ ಕಾಡಲಿದೆಯೇ ಸ್ತ್ರೀಕಂಟಕ?
ಅಧಿಕಾರ ಕೈಯಲ್ಲಿದ್ದರೆ ಏನು ಬೇಕಾದರೂ ಬುಗುರಿಯಾಡಿಸಬಹುದು ಎನ್ನುವುದಕ್ಕೆ ಕೊಡಬಹುದಾದ ತಾಜಾ ಉದಾಹರಣೆಯ ರಾಜಕೀಯ ಮೇಲಾಟವೊಂದರಲ್ಲಿ, ಕರ್ನಾಟಕ ಕಾಂಗ್ರೆಸ್ ಮತ್ತು ಎಐಸಿಸಿಗೆ ಭಾರೀ ಮುಜುಗರ ತರುವಂತಹ ವಿದ್ಯಮಾನಗಳು ತಿರುವನಂತಪುರಂನಲ್ಲಿ ನಡೆಯುತ್ತಿದೆ.
ಅಸಲಿಗೆ ಇದು ಕೇರಳದ ಮಾಜಿ ಸಿಎಂ (ಕಾಂಗ್ರೆಸ್ ) ಉಮ್ಮನ್ ಚಾಂಡಿ ಮತ್ತು ಹಾಲೀ ಮುಖ್ಯಮಂತ್ರಿ (ಕಮ್ಯೂನಿಸ್ಟ್) ಪಿಣರಾಯಿ ವಿಜಯನ್ ನಡುವಿನ ರಾಜಕೀಯ ಜಿದ್ದಾಜಿದ್ದಿ ಅಂದೆನಿಸಿದರೂ, ಹಗರಣದ ಪ್ರಮುಖ ಬೇರು ಕರ್ನಾಟಕದ ಉಸ್ತುವಾರಿ ಬುಡವನ್ನು ಅಲ್ಲಾಡಿಸಲಾರಂಭಿಸಿದೆ.
ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಆಸುಪಾಸು ಎಂಟು ತಿಂಗಳು ಇರುವ ಈ ಹೊತ್ತಿನಲ್ಲಿ ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೇರಳ ಮೂಲದ ಕೆ ಸಿ ವೇಣುಗೋಪಾಲ್. ಸ್ತ್ರೀಕಂಟಕದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಭ್ರಷ್ಟಾಚಾರ ಮತ್ತು ಲೈಂಗಿಕ ದೌರ್ಜನ್ಯದ ಕೇಸ್ ವೇಣುಗೋಪಾಲ್ ಅವರ ಮೇಲೆ ದಾಖಲಾಗುವ ಸಾಧ್ಯತೆಯಿದ್ದು, ಬಹುಕೋಟಿ ಸೋಲಾರ್ ಹಗರಣದ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್ ಬರೆದಿರುವ ಪತ್ರ, ವೇಣುಗೋಪಾಲ್ ಅವರನ್ನು ಸಂಕಷ್ಟಕ್ಕೆ ದೂಡಲಿದೆ ಎನ್ನಲಾಗುತ್ತಿದೆ.
2013ರಲ್ಲಿ ಜೈಲಿನಿಂದಲೇ ಬರೆದ ಪತ್ರವನ್ನು ಆಧರಿಸಿ ಮತ್ತು ಸಮಿತಿ ನೀಡಿದ ವರದಿಯನ್ನು ಆಧರಿಸಿ ಪಿಣರಾಯಿ ಸರಕಾರ, FIR ದಾಖಲಿಸಲು ಸೂಚಿಸಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಸರಿತಾ ಬರೆದಿರುವ ಪತ್ರದಲ್ಲಿ ಕೆ ಸಿ ವೇಣುಗೋಪಾಲ್ ಅವರ ಹೆಸರೂ ಉಲ್ಲೇಖವಾಗಿರುವುದು ಕಾಂಗ್ರೆಸ್ಸಿಗೆ ಹಿನ್ನಡೆ ತರುವ ಸಾಧ್ಯತೆಯಿಲ್ಲದಿಲ್ಲ. ಮುಂದೆ ಓದಿ..

ವೇಣುಗೋಪಾಲ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ
ಸರಿತಾ ನಾಯರ್ ಬರೆದಿರುವ ಪತ್ರದಲ್ಲಿ ಉಲ್ಲೇಖವಾಗಿರುವ ವೇಣುಗೋಪಾಲ್ ಸೇರಿದಂತೆ, ಎಲ್ಲಾ ಕಾಂಗ್ರೆಸ್ ಮುಖಂಡರ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ರೀಓಪನ್ ಮಾಡಲು ಪಿಣರಾಯಿ ವಿಜಯನ್ ಸರಕಾರ ನಿರ್ಧರಿಸಿದ್ದು, ಪ್ರಮುಖವಾಗಿ ಕರ್ನಾಟಕ ಕಾಂಗ್ರೆಸ್ಸಿಗೆ ಇದು ಭಾರೀ ಮುಜುಗರ ತರುವ ಸಾಧ್ಯತೆಯಿದೆ. ಸೋಲಾರ್ ಹಗರಣ ಸಂಬಂಧ 2005ರಲ್ಲಿ ಬಂಧನಕ್ಕೊಳಗಾಗಿದ್ದ ಸರಿತಾ ನಂತರ ಜೈಲಿನಿಂದ ಬಿಡುಗಡೆ ಹೊಂದಿದ್ದರು.

ಸರಿತಾ ಬರೆದ ಪತ್ರದಲ್ಲಿ ಹಲವು ಕಾಂಗ್ರೆಸ್ ಮುಖಂಡರ ಹೆಸರು
ಜೈಲಿನಿಂದ ಹೊರಬಂದ ನಂತರ ಸರಿತಾ ನಾಯರ್, ಬಿಜು ಗೋಪಾಲಕೃಷ್ಣನ್ ಎನ್ನುವವರ ಜೊತೆ ಲೀವಿಂಗ್-ಇನ್ ಸಂಬಂಧಲ್ಲಿದ್ದಾರೆ. ಸರಿತಾಗಾಗಿ ತನ್ನ ಹೆಂಡತಿಯನ್ನು ಕೊಲೆಗೈದಿರುವ ಆರೋಪ ಬಿಜು ಮೇಲಿದೆ. ಜುಲೈ 19, 2013ರಲ್ಲಿ ಸರಿತಾ ಬರೆದ ಪತ್ರದಲ್ಲಿ, ಕೆ ಸಿ ವೇಣುಗೋಪಾಲ್, ಹಿಬಿ ಈಡನ್, ಎಪಿ ಅಬ್ದುಲ್ ಕುಟ್ಟಿ, ಎಪಿ ಅನಿಲ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ದೂರಿದ್ದರು. ಅಂದಿನ ಸಿಎಂ ಉಮ್ಮನ್ ಚಾಂಡಿ ಮೇಲೆ ಇದೇ ಕೇಸಿನಲ್ಲಿ ಭ್ರಷ್ಟಾಚಾರದ ಆರೋಪವಿದೆ.

ಮತ್ತೆ ಕೇಸ್ ರಿಓಪನ್ ಮಾಡಿದ ಪಿಣರಾಯಿ ವಿಜಯನ್
ಬುಧವಾರ (ಅ 11) ನಡೆದ ಪಿಣರಾಯಿ ವಿಜಯನ್ ಸರಕಾರದ ಕ್ಯಾಬಿನೆಟ್ ಮೀಟಿಂಗ್ ನಂತರ ಸೋಲಾರ್ ಹಗರಣದ ಮರು ತನಿಖೆ (criminal and vigilance probe) ನಡೆಸಲು ಕೇರಳ ಸರಕಾರ ನಿರ್ಧರಿಸಿದೆ. ಕೆಲವೇ ದಿನಗಳ ಕೆಳಗೆ ಬೆಂಗಳೂರು ಸಿವಿಲ್ ಕೋರ್ಟ್ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಕ್ಲೀನ್ ಚಿಟ್ ನೀಡಿತ್ತು.

ಕೆ ಸಿ ವೇಣುಗೋಪಾಲ್ ಗೆ ಹಿನ್ನಡೆ
ಕರ್ನಾಟಕದ ಉಸ್ತುವಾರಿ ವಹಿಸಿಕೊಂಡ ನಂತರ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿರುವ ಕೆ ಸಿ ವೇಣುಗೋಪಾಲಿಗೆ ಪಿಣರಾಯಿ ಸರಕಾರದ ನಿರ್ಧಾರದಿಂದ ಹಿನ್ನಡೆ ಒಂದೆಡೆಯಾದರೆ, ಕರ್ನಾಟಕದ ಚುನಾವಣಾ ವರ್ಷದಲ್ಲಿ ಪಕ್ಷಕ್ಕೆ ಇದು ಮುಜುಗರ ತರುವ ವಿಷಯವಾಗಿದೆ.

ವಿರೋಧ ಪಕ್ಷಗಳು ರಾಜಕೀಯ ತಂತ್ರಗಾರಿಕೆ ರೂಪಿಸುವ ಸಾಧ್ಯತೆ
ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುನ್ನಡೆ ಸಾಧಿಸುತ್ತಿದ್ದರೂ, ಕೆ ಸಿ ವೇಣುಗೋಪಾಲ್ ಅವರ ಲೈಂಗಿಕ ದೌರ್ಜನ್ಯದ ವಿಚಾರವನ್ನಿಟ್ಟುಕೊಂಡು ವಿರೋಧ ಪಕ್ಷಗಳು ರಾಜಕೀಯ ತಂತ್ರಗಾರಿಕೆ ರೂಪಿಸುವ ಸಾಧ್ಯತೆಯಿಲ್ಲದಿಲ್ಲ. ಹಾಗಾಗಿ, ವೇಣುಗೋಪಾಲ್ ಜೊತೆಗೆ ರಾಜ್ಯ ಕಾಂಗ್ರೆಸ್ಸಿಗೂ ಸರಿತಾ ನಾಯರ್ ಮೂಲಕ 'ಸ್ತ್ರೀ ಕಂಟಕ' ಕಾಡಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.












Click it and Unblock the Notifications