ಉಪ್ರದಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿಗೆ ಅಖಿಲೇಶ್ ನೇತೃತ್ವದ ಎಸ್ ಪಿ ಸನಿಹ
ಭೋಪಾಲ್, ಜನವರಿ 16: ಚುನಾವಣೆ ಆಯೋಗವು ಸಮಾಜವಾದಿ ಪಕ್ಷದ ಹೆಸರು ಹಾಗೂ 'ಸೈಕಲ್' ಚಿಹ್ನೆಯನ್ನು ಅಖಿಲೇಶ್ ಯಾದವ್ ಬಣಕ್ಕೆ ಸೇರಿದ್ದು ಎಂದು ಘೋಷಿಸಿದೆ. ಇನ್ನೇನು ಕಾಂಗ್ರೆಸ್ ಜತೆಗಿನ ಮೈತ್ರಿಗೆ ಸನಿಹಕ್ಕೆ ಬಂದು ನಿಂತಂತೆ ಆಗಿದೆ ಅಖಿಲೇಶ್. ಸಮಾಜವಾದಿ ಪಕ್ಷದೊಳಗಿನ ಬಿರುಕಿನ ಕಾರಣಕ್ಕೆ ಕಾಂಗ್ರೆಸ್ ಜತೆಗಿನ ಮೈತ್ರಿ ಎರಡೂ ಪಕ್ಷಗಳಿಗೂ ಬಹಳ ಮುಖ್ಯವಾಗಿದೆ.
ರಾಮ್ ಗೋಪಾಲ್ ಯಾದವ್ ಸೋಮವಾರ ಮಾತನಾಡಿ, ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಚುನಾವಣೆ ಆಯೋಗದಿಂದ ಚಿಹ್ನೆ ಸಿಕ್ಕ ನಂತರ ಕಾಂಗ್ರೆಸ್ ಜತೆಗಿನ ಮೈತ್ರಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಎರಡೂ ಪಕ್ಷಗಳ ಮಧ್ಯೆ ಮೈತ್ರಿ ನಿಕ್ಕಿಯಾದರೆ ಆಯಿತು. ಏಕೆಂದರೆ ಕಾಂಗ್ರೆಸ್ ಹಾಗೂ ಶೀಲಾ ದೀಕ್ಷಿತ್ ಕಡೆಯಿಂದ ಅಖಿಲೇಶ್ ಗೆ ದಾರಿ ಈಗಾಗಲೇ ಸುಗಮವಾಗಿದೆ.[ಮುಲಾಯಂ ಸೈಕಲ್ ಕಸಿದುಕೊಂಡ ಅಖಿಲೇಶ್ ಯಾದವ್]

ಕಾಂಗ್ರೆಸ್-ಸಮಾಜವಾದಿ ಪಕ್ಷ ಜೊತೆಯಾದರೆ ಬಿಜೆಪಿಯೊಂದಿಗೆ ಉತ್ತರಪ್ರದೇಶದಲ್ಲಿ ಬಡಿದಾಡುವುದಕ್ಕೆ ಬಲಿಷ್ಠ ಶಕ್ತಿ ಉದಯವಾದಂತೆ ಆಗುತ್ತದೆ. ಅಂಥ ಸನ್ನಿವೇಶದಲ್ಲಿ ಬಿಎಸ್ ಪಿ ಅಲ್ಪಸಂಖ್ಯಾತರ ಮತವನ್ನು ಸ್ವಲ್ಪ ಭಾಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಮಾಜವಾದಿ ಪಕ್ಷದ ಪಾರಂಪರಿಕ ಮತ ಬ್ಯಾಂಕ್ ಜತೆಗೆ ದಲಿತ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದಾಗಿದೆ.
ಮುಖ್ಯವಾದ ಅಂಶ ಏನೆಂದರೆ ಸಮಾಜವಾದಿ ಪಕ್ಷದೊಳಗಿನ ಬಿರುಕು ಆ ಪಕ್ಷದ ಮತದಾರರ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಆಧಾರದಲ್ಲಿ ನಿಂತಿದೆ. ಪಕ್ಷದ ಎರಡು ಬಣಗಳ ಮಧ್ಯೆ ಮತ ಹಂಚಿ ಹೋಗಬಹುದಾ ಅಥವಾ ದೊಡ್ಡ ಸಂಖ್ಯೆಯ ಮತಗಳನ್ನು ಅಖಿಲೇಶ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕು.












Click it and Unblock the Notifications