ದಲಿತ ಹೋರಾಟಗಾರ ಆನಂದ್ ತೇಲ್ತುಂಬ್ಡೆಗೆ ಬಾಂಬೆ ಹೈಕೋರ್ಟ್ ಜಾಮೀನು
ನವದೆಹಲಿ, ನ.18: 2018 ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿದ್ದ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ಆದರೆ, ಎನ್ಐಎ ಪ್ರತಿನಿಧಿಸುವ ವಕೀಲ ಸಂದೇಶ್ ಪಾಟೀಲ್ ಅವರ ಕೋರಿಕೆಯ ಮೇರೆಗೆ ಹೈಕೋರ್ಟ್ ತನ್ನದೇ ಆದ ಆದೇಶವನ್ನು ಒಂದು ವಾರ ತಡೆಹಿಡಿದಿದೆ.
ತನಿಖಾ ಸಂಸ್ಥೆಯು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಅನುವು ಮಾಡಿಕೊಡಲು ಈ ಸಮಯವನ್ನು ಕೋರಿದೆ. ಹೀಗಾಗಿ ಹೈಕೋರ್ಟ್ ತನ್ನದೇ ಆದೇಶಕ್ಕೆ ಒಂದು ವಾರ ತಡೆ ನೀಡಿತ್ತು.
Breaking: ಕವಿ, ಹೋರಾಟಗಾರ ಡಾ. ಪಿ ವರವರ ರಾವ್ಗೆ ಜಾಮೀನು
ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ 73 ವರ್ಷದ ತೇಲ್ತುಂಬ್ಡೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಎಸ್ ಗಡ್ಕರಿ ಮತ್ತು ಎಂಎನ್ ಜಾಧವ್ ಅವರ ಪೀಠವು ಅಂಗೀಕರಿಸಿತು.
ಆನಂದ್ ತೇಲ್ತುಂಬ್ಡೆ ಅವರು ಪ್ರಕರಣದಲ್ಲಿ ವರವರ ರಾವ್ ಮತ್ತು ಸುಧಾ ಭಾರದ್ವಾಜ್ ಅವರ ನಂತರ ಬಾಂಬೆ ಹೈಕೋರ್ಟ್ನಿಂದ ಜಾಮೀನು ಪಡೆದ ಮೂರನೇ ಆರೋಪಿಯಾಗಿದ್ದಾರೆ.
ಒಂದು ವಾರ ಜಾಮೀನು ತಡೆ ಹಿಡಿದ ಹೈಕೋರ್ಟ್
ನ್ಯಾಯಮೂರ್ತಿಗಳಾದ ಅಜೇಯ್ ಎಸ್ ಗಡ್ಕರಿ ಮತ್ತು ಮಿಲಿಂದ್ ಎನ್ ಜಾಧವ್ ಅವರ ಪೀಠವು ನವೆಂಬರ್ 11 ರಂದು ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಾಲಯದ ನಿರ್ದೇಶನದ ಪ್ರಕಾರ, 1 ಲಕ್ಷ ರೂಪಾಯಿಗಳ ಶ್ಯೂರಿಟಿಯನ್ನು ಒದಗಿಸಿದ ನಂತರ ಆನಂದ್ ತೇಲ್ತುಂಬ್ಡೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಆದೇಶಿಸಿತ್ತು.
ಆದರೆ, ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಪ್ರತಿನಿಧಿಸುವ ವಕೀಲ ಸಂದೇಶ್ ಪಾಟೀಲ್ ಮನವಿ ಮೇರೆಗೆ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಅನುವು ಮಾಡಿಕೊಡಲು ಸಮಯ ನೀಡಿದೆ. ಹೀಗಾಗಿ ಹೈಕೋರ್ಟ್ ತನ್ನದೇ ಆದೇಶಕ್ಕೆ ಒಂದು ವಾರ ತಡೆ ನೀಡಿದೆ.
ಎಲ್ಗರ್ ಪರಿಷತ್ ಸಭೆಯ ಪ್ರಮುಖ ಸಂಚಾಲಕ: ಆರೋಪ
ಆನಂದ್ ತೇಲ್ತುಂಬ್ಡೆ ಎಲ್ಗರ್ ಪರಿಷತ್ ಸಭೆಯ ಪ್ರಮುಖ ಸಂಚಾಲಕರಲ್ಲಿ ಒಬ್ಬರಾಗಿದ್ದರು. ಅವರು ಸಿಪಿಐ (ಮಾವೋವಾದಿ) ಸಂಘಟನೆಯ ಹಲವಾರು ಸಂಘಟನೆಗಳ ಸಕ್ರಿಯ ಸದಸ್ಯರಾಗಿದ್ದರು ಎಂದು ಎನ್ಐಎ ಆರೋಪಿಸಿದೆ.
ಆದರೆ, ಆನಂದ್ ತೇಲ್ತುಂಬ್ಡೆ ಅವರು ಡಿಸೆಂಬರ್ 31, 2017ರ ಎಲ್ಗರ್ ಪರಿಷತ್ತಿನ ಕಾರ್ಯಕ್ರಮದಲ್ಲಿ ಎಂದಿಗೂ ಹಾಜರಾಗಿಲ್ಲ, ಯಾವುದೇ ಪ್ರಚೋದನಕಾರಿ ಭಾಷಣಗಳನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ತೇಲ್ತುಂಬ್ಡೆ ಕಾರ್ಯಕ್ರಮಕ್ಕೆ ಮಾತ್ರ ಆಹ್ವಾನಿತರಾಗಿದ್ದರು, ಆದರೆ ಪುಣೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರಲಿಲ್ಲ, ಯಾವುದೇ ಭಾಷಣಗಳನ್ನು ಅವರು ನೀಡಲಿಲ್ಲ ಎಂದು ಹೋರಾಟಗಾರನ ಪರ ವಕೀಲರು ವಾದಿಸಿದ್ದಾರೆ.
ಆನಂದ್ ತೇಲ್ತುಂಬ್ಡೆ ಭಾಷಣಗಳು ಪ್ರಚೋದನಕಾರಿ: ದೂರುದಾರ
ಪುಣೆಯ ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ದೂರುದಾರರಾದ ತುಷಾರ್ ದಾಮುಗಡೆ ಅವರು 2018 ರಲ್ಲಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಲಾಗಿದೆ.
ತುಷಾರ್ ದಾಮುಗಡೆ ಅವರ ಪ್ರಕಾರ, ಎಲ್ಗರ್ ಪರಿಷತ್ ಎಂಬ ಹೆಸರಿನ ಕಾರ್ಯಕ್ರಮವನ್ನು 31 ಡಿಸೆಂಬರ್ 2017 ರಂದು ಪುಣೆಯ ಶನಿವಾರ ವಾಡಾದಲ್ಲಿ ನಡೆಸಲಾಗಿತ್ತು. ವೇದಿಕೆಯಲ್ಲಿ ಆನಂದ್ ತೇಲ್ತುಂಬ್ಡೆ ಮಾಡಿದ ಭಾಷಣಗಳು ಸಹ ಪ್ರಚೋದನಕಾರಿ ಎಂದು ಅವರು ಹೇಳಿದ್ದಾರೆ.
ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಪುಸ್ತಕಗಳನ್ನು ಸ್ಥಳದಲ್ಲಿ ಮಾರಾಟಕ್ಕೆ ಇರಿಸಲಾಗಿತ್ತು, ಇದರಲ್ಲಿ ನಿಷೇಧಿತ ಸಂಘಟನೆಯಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕುರಿತ ಪುಸ್ತಕವು ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಮೂಲಕ ಹಿಂಸಾಚಾರವನ್ನು ಪ್ರಚೋದಿಸುತ್ತದೆ. ಇದರ ಪರಿಣಾಮವಾಗಿ, ಜನವರಿ 1, 2018 ರಂದು ಭೀಮಾ ಕೋರೆಗಾಂವ್ನಲ್ಲಿ ಹಿಂಸಾಚಾರ ಭುಗಿಲೆದ್ದಿತು ಎಂದಿದ್ದಾರೆ.
ತನ್ನನ್ನು ತಪ್ಪಾಗಿ ಬಂಧಿಸಲಾಗಿದೆ ಎಂದು ಆನಂದ್ ತೇಲ್ತುಂಬ್ಡೆ ವಾದ
ಎನ್ಐಎ ವಿಶೇಷ ನ್ಯಾಯಾಲಯವು ಕಳೆದ ವರ್ಷ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ತಿರಸ್ಕಾರವನ್ನು ಪ್ರಶ್ನಿಸಿ ತೇಲ್ತುಂಬ್ಡೆ ಅವರು ಹೈಕೋರ್ಟ್ನ ಮೊರೆ ಹೋಗಿದ್ದರು. ಅವರು 31 ಡಿಸೆಂಬರ್ 2017 ರಂದು ಎಲ್ಗರ್ ಪರಿಷತ್ತಿನ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಅಥವಾ ಯಾವುದೇ ಪ್ರಚೋದನಕಾರಿ ಭಾಷಣಗಳನ್ನು ಮಾಡಿಲ್ಲ ಎಂದು ಹೇಳಿದ್ದರು.
ತನ್ನ ವಿರುದ್ಧ ನೇರ ಹಿಂಸಾಚಾರದ ಯಾವುದೇ ಆರೋಪಗಳಿಲ್ಲದಿದ್ದರೂ ಸಹ ಎನ್ಐಎ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಸೆಕ್ಷನ್ಗಳ ಅಡಿಯಲ್ಲಿ ತನ್ನನ್ನು ಭಯೋತ್ಪಾದಕ ಎಂದು ತಪ್ಪಾಗಿ ಬಿಂಬಿಸಿದೆ ಎಂದು ತೇಲ್ತುಂಬ್ಡೆ ವಾದಿಸಿದ್ದರು.
ಆನಂದ್ ತೇಲ್ತುಂಬ್ಡೆ ವಿರುದ್ಧದ ಮಾವೋವಾದಿ ಸಂಪರ್ಕವನ್ನು ಹೊಂದಿರುವ ಆರೋಪಗಳಿವೆ. ವರ್ಷಗಳ ಹಿಂದೆ ಮನೆ ತೊರೆದಿದ್ದ ಅವರ ಸ್ವಂತ ಸಹೋದರ ಮಿಲಿಂದ್ ತೇಲ್ತುಂಬ್ಡೆ ಮಾವೋವಾದಿ ನಾಯಕರಾಗಿದ್ದರು. ಕಳೆದ ನವೆಂಬರ್ನಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿ ಪ್ರದೇಶದಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಹತರಾಗಿದ್ದಾರೆ. ಕಳೆದ 25 ವರ್ಷಗಳಿಂದ ಆನಂದ್ ತೇಲ್ತುಂಬ್ಡೆ ತನ್ನ ಸಹೋದರನನ್ನು ಭೇಟಿ ಮಾಡಿಲ್ಲ ಎಂದು ವಕೀಲರು ಹೇಳಿದ್ದಾರೆ.
ಎಲ್ಗಾರ್ ಪರಿಷತ್ ಪ್ರಕರಣದ 16 ಆರೋಪಿಗಳ ಪೈಕಿ ಫಾದರ್ ಸ್ಟಾನ್ ಸ್ವಾಮಿ ಸಾವನ್ನಪ್ಪಿದ್ದಾರೆ. ವರವರ ರಾವ್ ಮತ್ತು ಸುಧಾ ಭಾರದ್ವಾಜ್ ಇಬ್ಬರು ಜಾಮೀನು ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಗೌತಮ್ ನವ್ಲಾಖಾ ಅವರಿಗೆ ಸುಪ್ರೀಂ ಕೋರ್ಟ್ ಗೃಹಬಂಧನ ನೀಡಿದೆ. ಆದರೆ, ಅದನ್ನು ಸುಪ್ರೀಂಕೋರ್ಟ್ನಲ್ಲಿ ಎನ್ಐಎ ಪ್ರಶ್ನಿಸಿದೆ.