ಗೋವಾ ಕಾಂಗ್ರೆಸ್ಸಿನಿಂದ ಭಾರತ್ ಬಂದ್ ಗೆ ಬಹಿಷ್ಕಾರ
ಪಣಜಿ, ಸೆಪ್ಟೆಂಬರ್ 09: ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್, ತೈಲ ಬೆಲೆ ಏರಿಕೆ ವಿರುದ್ಧ ಭಾರತ ಬಂದ್ ಆಚರಣೆಗಾಗಿ ಕರೆ ನೀಡಿದೆ. ಸೆಪ್ಟೆಂಬರ್ 10ರಂದು ದೇಶದೆಲ್ಲೆಡೆ ಬಂದ್ ಆಚರಣೆಗಾಗಿ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಗೋವಾದಲ್ಲಿ ಮಾತ್ರ ಬಂದ್ ಆಚರಿಸದಿರಲು ನಿರ್ಧರಿಸಿದೆ.
ಸೋಮವಾರ(ಸೆಪ್ಟೆಂಬರ್ 10) ರ ರಾಷ್ಟ್ರವ್ಯಾಪಿ ಬಂದ್ ನಲ್ಲಿ ಗೋವಾ ಕಾಂಗ್ರೆಸ್ ಪಾಲ್ಗೊಳ್ಳುತ್ತಿಲ್ಲ. ಗಣೇಶ ಚತುರ್ಥಿ ಹಬ್ಬ ಮುಂದಿಟ್ಟುಕೊಂಡು ಬಂದ್ ಮಾಡಿ, ಸ್ಥಳೀಯರಿಗೆ ತೊಂದರೆ ಕೊಡುವುದಿಲ್ಲ ಎಂದು ಗೋವಾ ಕಾಂಗ್ರೆಸ್ ಹೇಳಿದೆ.
ಒಂದು ' ಭಾರತ್ ಬಂದ್' ನಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಹಾಗಿದ್ದರೆ!?
ಈ ಬಗ್ಗೆ ಮಾತನಾಡಿರುವ ರಾಜ್ಯ ಕಾಂಗ್ರೆಸ್ ವಕ್ತಾರ ವಿಜಯ್ ಭಿಕೆ, ಸೋಮವಾರದಂದು ಗೋವಾದಲ್ಲಿ ಬಂದ್ ಇರುವುದಿಲ್ಲ. ಸೆಪ್ಟೆಂಬರ್ 13ರಂದು ಗಣೇಶ ಹಬ್ಬ ಇದೆ. ಹಬ್ಬಕ್ಕಾಗಿ ಶಾಪಿಂಗ್ ಮಾಡುವುದರಲ್ಲಿ ಜನರು ತಲ್ಲೀನರಾಗಿರುತ್ತಾರೆ. ಜನರಿಗೆ ತೊಂದರೆ ಕೊಡುವುದು ಇಷ್ಟವಿಲ್ಲ.
ಆದರೆ, ಕಾಂಗ್ರೆಸ್ ಹೈಕಮಾಂಡ್ ನೀಡಿರುವ ಬಂದ್ ಕರೆಗೆ ಓಗೊಟ್ಟು, ಶಾಂತಿಯುತವಾಗಿ ಜಾಗೃತಿ ಕಾರ್ಯಕ್ರಮವನ್ನು ಪೆಟ್ರೋಲ್ ಬಂಕ್ ಗಳಲ್ಲಿ ಹಮ್ಮಿಕೊಳ್ಳುವುದಾಗಿ ಹೇಳಿದರು.
ಭಾರತ್ ಬಂದ್ ಬಿಸಿ ಜನಸಾಮಾನ್ಯರಿಗೆ ಮಾತ್ರ ತಟ್ಟುತ್ತದೆ- ಟ್ವೀಟ್ಸ್
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು, ಜನರ ಆಶೋತ್ತರಕ್ಕೆ ಅನುಗುಣವಾಗಿ ವ್ಯಾಟ್ ತಗ್ಗಿಸಿ, ಪೆಟ್ರೋಲ್ ಬೆಲೆ ಇಳಿಸಬಹುದು. 2012ರಲ್ಲಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇದೇ ಭರವಸೆ ನೀಡಿದ್ದರು ಎಂದು ವಿಜಯ್ ತಿಳಿಸಿದರು.