ಪಶ್ಚಿಮ ಬಂಗಾಲದ ಬಿಜೆಪಿ ನಾಯಕನ ಮನೆ ಮೇಲೆ ಬಾಂಬ್ ದಾಳಿ
ಕೋಲ್ಕತ್ತಾ, ಜನವರಿ 4: ಬಿಜೆಪಿ ನಾಯಕನ ಮನೆ ಮೇಲೆ ತೃಣಮೂಲ್ ಕಾಂಗ್ರೆಸ್ ನ ಕಾರ್ಯಕರ್ತರು ಬಾಂಬ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರಪುರದಲ್ಲಿರುವ ಬಿಜೆಪಿ ನಾಯಕ ಕೃಷ್ಣ ಭಟ್ಟಾಚಾರ್ಯ ಅವರ ಮನೆ ಮೇಲೆ ಮಂಗಳವಾರ ರಾತ್ರಿ ತೃಣಮೂಲ್ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಈ ಸಂಬಂಧ ದೂರು ದಾಖಲಾಗಿದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಕೋಲ್ಕತ್ತಾದಲ್ಲಿ ಬಿಜೆಪಿ ಕಚೇರಿ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆದ ಒಂದು ದಿನದ ನಂತರ ಈ ಘಟನೆ ನಡೆದಿದೆ. ರೋಸ್ ವ್ಯಾಲಿ ಹಗರಣದಲ್ಲಿ ಪಕ್ಷದ ಇಬ್ಬರು ಸಂಸದರನ್ನು ಬಂಧಿಸಿರುವುದನ್ನು ಖಂಡಿಸಿ, ಟಿಎಂಸಿ ಪ್ರತಿಭಟನೆ ನಡೆಸುತ್ತಿದೆ. ಈ ಬಂಧನದ ಹಿಂದೆ ಬಿಜೆಪಿಯ ಅಜೆಂಡಾ ಇದೆ ಎಂದು ಆರೋಪಿಸಿದೆ.[ರಾಜ್ಯಸಭಾ ಸ್ಥಾನಕ್ಕೆ ಮಿಥುನ್ ಚಕ್ರವರ್ತಿ ರಾಜೀನಾಮೆ]

ಟಿಎಂಸಿ ಸಂಸದರಾದ ಸುದೀಪ್ ಬಂಡೋಪಾಧ್ಯಾಯ ಹಾಗೂ ತಪಸ್ ಪಾಲ್ ರನ್ನು ಮಂಗಳವಾರ ಬಂಧಿಸಲಾಯಿತು. ಆ ನಂತರ ಕೋಲ್ಕತ್ತಾದಲ್ಲಿರುವ ಬಿಜೆಪಿ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.[ಮಮತಾ ಬ್ಯಾನರ್ಜಿಗೆ ಜೀವಬೆದರಿಕೆ, 50 ಲಕ್ಷ ರುಪಾಯಿಗೆ ಬೇಡಿಕೆ]
ಮೊದಲಿಗೆ ನೋಟು ನಿಷೇಧ ಮಾಡಿದ ಮೋದಿ, ಈಗ ತೃಣಮೂಲ ನಿಷೇಧಕ್ಕೆ ಮುಂದಾಗಿದ್ದಾರೆ ಎಂದಿದ್ದಾರೆ ಮಮತಾ. ಕೋಲ್ಕತ್ತಾದಲ್ಲಿರುವ ಪಕ್ಷದ ಕಚೇರಿ ಮೇಲೆ ದಾಳಿ ನಡೆಯುತ್ತಿರುವಾಗ ಪೊಲೀಸರು ಎಲ್ಲೋ ನೋಡುತ್ತಾ ನಿಂತಿದ್ದರು ಎಂದು ಬಿಜೆಪಿ ಆರೋಪಿಸಿದೆ. ಇದು ಸರಕಾರಿ ಪ್ರಾಯೋಜಿತ ದಾಳಿ ಎಂದು ಬಿಜೆಪಿ ಹೇಳಿದೆ. ಈ ಘಟನೆ ನಂತರ ಬಿಜೆಪಿ ಕಚೇರಿಯ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ.












Click it and Unblock the Notifications