ಗೋಹತ್ಯೆ ನಿಷೇಧದ ವಿರುದ್ಧ ಗೋಮಾಂಸ ಭಕ್ಷಣೆ ಉತ್ಸವ
ತಿರುವನಂತಪುರಂ, ಮೇ 27 : ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ ಅತೀಹೆಚ್ಚು ಗೋಮಾಂಸ ಭಕ್ಷಣೆ ಮಾಡುವ ರಾಜ್ಯ ಕೇರಳ. ಗೋವುಗಳ ಮಾರಾಟವನ್ನು ಕೇಂದ್ರ ಸರಕಾರ ನಿಷೇಧಿಸಿರುವುದನ್ನು ವಿರೋಧಿಸಿ ಶನಿವಾರ ಭಾರೀ ಪ್ರತಿಭಟನೆ ನಡೆಸಲಾಗುತ್ತಿದೆ.
ಕೇರಳದಲ್ಲಿ ಶೇಕಡಾ 25ಕ್ಕೂ ಹೆಚ್ಚು ಜನರು ಗೋಮಾಂಸ ಭಕ್ಷಿಸುತ್ತಾರೆ. ಇನ್ನು ಗೋವುಗಳ ಮಾರಾಟವನ್ನು ನಿಷೇಧಿಸಿದರೆ ಸುಮ್ಮನಿರುತ್ತಾರಾ? ಕೇಂದ್ರದ ನೀತಿಯನ್ನು ವಿರೋಧಿಸಿ ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ ಗೋಮಾಂಸ ಭಕ್ಷಣೆಯ ಉತ್ಸವವನ್ನೇ ಶನಿವಾರ ಇಡೀ ರಾಜ್ಯಾದ್ಯಂತ ಹಮ್ಮಿಕೊಂಡಿದ್ದಾರೆ.[ದಾನವಾಗಿ ಪಡೆದಿದ್ದ ಹಸುವನ್ನು ಹಿಂದಿರುಗಿಸಿದ ಅಜಂಖಾನ್]

ದಾದ್ರಿಯಲ್ಲಿ ಗೋರಕ್ಷಕರು ವ್ಯಕ್ತಿಯೊಬ್ಬನನ್ನು ಹತ್ಯೆಗೈದ ನಂತರ ಹಲವಾರು ಗೋಭಕ್ಷಣೆ ಉತ್ಸವಗಳು ನಡೆದಿದ್ದರೂ, ಪ್ರಸ್ತುವ ನಡೆಸುತ್ತಿರುವ ಉತ್ಸವ ಎಲ್ಲಕ್ಕಿಂತ ದೊಡ್ಡದಾಗಿದೆ. ರಾಜ್ಯದಲ್ಲಿ 210 ಕೇಂದ್ರಗಳಲ್ಲಿ ಗೋಭಕ್ಷಣೆ ಉತ್ಸವವನ್ನು ನಡೆಸಲಾಗುತ್ತಿದೆ.
ನಾವು ಏನನ್ನು ತಿನ್ನಬೇಕೆಂದು ನಿರ್ಧರಿಸುವವರು ಅವರು (ಕೇಂದ್ರ) ಯಾರು? ಜನರಿಗೆ ತಿನ್ನಲು ಸಾಕಷ್ಟು ಇದೆಯಾ, ಅವರಿಗೆ ಪೌಷ್ಟಿಕಾಂಶ ಯುಕ್ತ ಆಹಾರ ದೊರೆಯುತ್ತಿದೆಯಾ ಎಂದು ಮಾತ್ರ ನೋಡಬೇಕು. ದೇಶದಲ್ಲಿನ ಬಡತನ ನಿವಾರಿಸಲು ಅವರು ನಿಯಮ ತರುತ್ತಾರಾ? ಎಂದು ಸಂಘಟಕರೊಬ್ಬರು ಕೇಂದ್ರವನ್ನು ಪ್ರಶ್ನಿಸಿದ್ದಾರೆ.[ಗೋಹತ್ಯೆ ನಿಷೇಧಕ್ಕೆ ಕಾನೂನು ರೂಪಿಸಿ: ಮೋಹನ್ ಭಾಗವತ್]
ಈ ವೃತ್ತಿಯನ್ನೇ ನಂಬಿರುವ ಹಲವರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಗೋವುಗಳನ್ನು ಉಳಿಸಬೇಕಿದ್ದರೆ ಕೃಷಿ ಚುಟುವಟಿಕೆಯನ್ನು ಇನ್ನಷ್ಟು ಸುಭದ್ರಗೊಳಿಸಬೇಕು. ಅದು ಬಿಟ್ಟು ಗೋವು ಮಾರಾಟ ನಿಲ್ಲಿಸಿದರೆ ಹೇಗೆ? ಇದು ಸಾಧ್ಯವಿಲ್ಲ, ನಾವು ಗೋಮಾಂಸ ತಿಂದೇ ತಿನ್ನುತ್ತೇವೆ, ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ವಿಜಿನ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋವುಗಳ ಮಾರಾಟ ನಿಷೇಧಿಸಿದ್ದಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ಕೂಡ, ಸಂಘ ಪರಿವಾರದ ರೀತಿನೀತಿಗಳನ್ನು ದೇಶದ ಮೇಲೆ ಬಿಜೆಪಿ ಹೇರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರದ ನಿಯಮದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.












Click it and Unblock the Notifications