ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಏಕೆ, ಸಿಬ್ಬಂದಿಗಳ ಬೇಡಿಕೆಗಳೇನು?
ವಸೂಲಾಗದ ಸಾಲಗಳ ವಸೂಲಿ ಮತ್ತು ಉದ್ದೇಶಪೂರ್ವಕ ಸುಸ್ತಿದಾರರ ಮೇಲೆ ಕ್ರಿಮಿನಲ್ ಕ್ರಮಕ್ಕೆ ಆಗ್ರಹಿಸಿ ಬ್ಯಾಂಕ್ ನೌಕರರು ಪಟ್ಟು ಹಿಡಿದು ಮಂಗಳವಾರ ಒಂದು ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಬಂದ್ ನಡೆಸುತ್ತಿದ್ದಾರೆ.
ಬೆಂಗಳೂರು, ಫೆಬ್ರವರಿ 28: ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಮಂಗಳವಾರ ಒಂದು ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಬಂದ್ ನಡೆಸುತ್ತಿದೆ. ವಸೂಲಾಗದ ಸಾಲಗಳ ವಸೂಲಿ ಮತ್ತು ಉದ್ದೇಶಪೂರ್ವಕ ಸುಸ್ತಿದಾರರ ಮೇಲೆ ಕ್ರಿಮಿನಲ್ ಕ್ರಮಕ್ಕೆ ಬ್ಯಾಂಕ್ ನೌಕರರು ಪಟ್ಟು ಹಿಡಿದು ಈ ಮುಷ್ಕರ ನಡೆಸುತ್ತಿದ್ದಾರೆ.
ಇದರ ಜತೆಗೆ ಹಲವು ಬೇಡಿಕೆಗಳನ್ನೂ ಬ್ಯಾಂಕ್ ನೌಕರರು ಮುಂದಿಟ್ಟಿದ್ದಾರೆ. ಅಪನಗದೀಕರಣದ ವೇಳೆ ಮಾಡಿದ ಹೆಚ್ಚುವರಿ ಕೆಲಸಕ್ಕೆ ಹೆಚ್ಚಿನ ಸಂಬಳ, ಕಾರ್ಮಿಕ ನೀತಿಗಳ ಪರಾಮರ್ಶೆ, ಸಾಲ ವಸೂಲಿ ಹೀಗೆ ಸಾಲು ಸಾಲು ಬೇಡಿಕೆಗಳನ್ನು ಬ್ಯಾಂಕ್ ನೌಕರರು ಸರಕಾರದ ಮುಂದಿಟ್ಟಿದ್ದಾರೆ. ಈ ಎಲ್ಲಾ ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಬಂದ್ ನಡೆಸಲಾಗುತ್ತಿದೆ.[ಬ್ಯಾಂಕ್ ಮುಷ್ಕರ : ಯಾವ ಬ್ಯಾಂಕ್ ಕಾರ್ಯನಿರ್ವಹಿಸುತ್ತಿವೆ]

ಬ್ಯಾಂಕ್ ನೌಕರರ ಸಂಘ ಹೇಳುವುದೇನು?
"ಬ್ಯಾಂಕ್ ವ್ಯವಸ್ಥೆಯಲ್ಲಿ ಇವತ್ತು ಸಮಸ್ಯೆಯಾಗುತ್ತಿರುವುದು ಮರು ಪಾವತಿಯಾಗದ ಸಾಲ ಮತ್ತು ಉದ್ದೇಶ ಪೂರ್ವಕ ಸುಸ್ತಿದಾರರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ. ವಸೂಲಾಗದೆ ಸಾಲಕ್ಕೆ ಬ್ಯಾಂಕ್ ಅಧಿಕಾರಿಗಳನ್ನು ಹೊಣೆಯಾಗಿಸುವುದು ಮತ್ತು ಉದ್ದೇಶಪೂರ್ವಕ ಸುಸ್ತುದಾರರ ಮೇಲೆ ಕ್ರಮ ಕೈಗೊಳ್ಳುವುದು ಸದ್ಯದ ಅಗತ್ಯವಾಗಿದೆ ಎನ್ನುತ್ತಾರೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್ ವೆಂಕಟಾಚಲಂ.[ಫೆಬ್ರವರಿ 28ರಂದು ದೇಶವ್ಯಾಪ್ತಿ ಬ್ಯಾಂಕ್ ಮುಷ್ಕರ]

10 ಲಕ್ಷ ಜನ ಭಾಗಿ
ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ ಅಡಿಯಲ್ಲಿ ಒಟ್ಟು 9 ಕಾರ್ಮಿಕ ಒಕ್ಕೂಟಗಳು ಬರುತ್ತವೆ. ಹಿರಿಯ ಅಧಿಕಾರಿಗಳಿಂದ ಹಿಡಿದ ಕ್ಲರ್ಕ್ ಗಳ ತನಕ ಒಟ್ಟು 10 ಲಕ್ಷ ಜನ ಈ ಒಕ್ಕೂಟಗಳಲ್ಲಿದ್ದಾರೆ. ಇವರೆಲ್ಲಾ ಒಟ್ಟಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಬ್ಯಾಡ್ ಬ್ಯಾಂಕ್?
2016-17ನೇ ಸಾಲಿನ ಆರ್ಥಿಕ ಸಮೀಕ್ಷೆ 'ಬ್ಯಾಡ್ ಬ್ಯಾಂಕ್' ಸ್ಥಾಪನೆಗೆ ಸಲಹೆ ನೀಡಿದೆ. ವಸೂಲಾಗದ ಸಾಲಗಳ ಬಗ್ಗೆ ಗಮನ ಹರಿಸಲು ಇದರ ಸ್ಥಾಪನೆಗೆ ಮುಂದಾಗಿದೆ. ಇದರ ಪ್ರಕಾರ ಸರಕಾರಿ ಒಡೆತನದ ಅಸೆಟ್ ರಿಹ್ಯಾಬಿಲಿಟೇಶನ್ ಏಜೆನ್ಸಿ ದೊಡ್ಡ ಮೊತ್ತದ ಮತ್ತು ಕ್ಲಿಷ್ಟಕರವಾದ ಸಾಲ ವಸೂಲಾತಿಯನ್ನು ಕೈಗೆತ್ತಿಕೊಳ್ಳಲಿದೆ. ಆದರೆ ಇದನ್ನು ಬ್ಯಾಂಕ್ ಒಕ್ಕೂಟ ವಿರೋಧಿಸುತ್ತಿದ್ದು ಬ್ಯಾಡ್ ಬ್ಯಾಂಕ್ ಬೇಡ ಎಂದು ವಾದಿಸುತ್ತಿದೆ.

ವಸೂಲಾಗದ ಸಾಲಗಳ ಸಮಸ್ಯೆಗಳು
ಕೆಲವು ಕಂಪೆನಿಗಳು ತಮ್ಮ ಆಸ್ತಿ ವೃದ್ದಿಸಲು ದೊಡ್ಡ ಮೊತ್ತದ ಸಾಲವನ್ನು ರಿಯಾಯಿತಿ ಬಡ್ಡಿ ದರದಲ್ಲಿ ಪಡೆದುಕೊಳ್ಳುತ್ತವೆ. ಇವುಗಳ ಶೇಕಡಾ 10ನ್ನು ಪಾವತಿಸುವ ಕಂಪೆನಿಗಳು ಉಳಿದ ಶೇಕಡಾ 90 ಅಸಲು ಪಾವತಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತವೆ. ಕೆಲವು ವರ್ಷಗಳ ಹಿಂದೆ ಐಡಿಬಿಐ ಬ್ಯಾಂಕಿನಲ್ಲಿ ವಸೂಲಾಗದ ಸಾಲ 9,000 ಕೋಟಿಯಾಗಿತ್ತು. ಇದನ್ನು ಸ್ಟ್ರೆಸ್ಡ್ ಅಸೆಟ್ ಸ್ಟ್ಯಾಬಿಲೈಜೇಶನ್ ಫಂಡ್ ಗೆ ಹಸ್ತಾಂತರ ಮಾಡಲಾಯಿತು. ಈಗ ಅದೇ ಐಡಿಬಿಐ ಬ್ಯಾಂಕಿನ ವಸೂಲಾಗದ ಸಾಲ 20,000 ಕೋಟಿ ಗಡಿ ದಾಟಿದೆ ಎಂದು ದೂರುತ್ತಾರೆ ವೆಂಕಟಾಚಲಂ.

ಇತರ ಬೇಡಿಕೆಗಳೇನು?
ಇದರ ಜತೆಗೆ ಬ್ಯಾಂಕುಗಳ ಸುಧಾರಣೆ ಹೆಸರಿನಲ್ಲಿ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಹಾಗೂ ಬ್ಯಾಂಕ್ ಗಳ ಖಾಸಾಗೀಕರಣವನ್ನೂ ನೌಕರರು ವಿರೋಧಿಸುತ್ತಿದ್ದಾರೆ. ಅಲ್ಲದೆ ಅಪನಗದೀಕರಣದ ವೇಲೆ ಹೆಚ್ಚುವರಿ ಕೆಲಸ ಮಾಡಿದ್ದಕ್ಕೆ ಹೆಚ್ಚಿನ ಹಣ ನೀಡಿಲ್ಲ. ಅದನ್ನು ಪಾವತಿ ಮಾಡಬೇಕು ಎಂದು ಬ್ಯಾಂಕ್ ಸಿಬ್ಬಂದಿಗಳು ಪಟ್ಟು ಹಿಡಿದು ಕೂತಿದ್ದಾರೆ.












Click it and Unblock the Notifications