ಕಾಲಾನುಕ್ರಮದಲ್ಲಿ ಬಾಬ್ರಿ ಮಸೀದಿ ಧ್ವಂಸ
ಬೆಂಗಳೂರು, ಡಿ.6: ಬಾಬ್ರಿ ಮಸೀದಿ ಧ್ವಂಸ ನಡೆದು ಇಂದಿಗೆ 21 ವರ್ಷ ಕಳೆದಿದೆ. ಉತ್ತರ ಪ್ರದೇಶದ ಅಯೋಧ್ಯಾ ನಗರದಲ್ಲಿ ಹಿಂದೂ ಪರ ಸಂಘಟನೆಗಳು ಅಂದು ನಡೆಸಿದ ಕೃತ್ಯ ಕರಸೇವಕರ ಪಾಲಿಗೆ ಶೌರ್ಯ ದಿವಸವಾಗಿದ್ದರೆ, ಮುಸ್ಲಿಂ ಸಂಘಟನೆಗಳಿಗೆ ಕಪ್ಪು ದಿನವಾಗಿದೆ.
ವಿಶ್ವ ಹಿಂದೂಪರಿಷತ್ ಡಿ.6ರಂದು ವಿಜಯದ ದಿನ, ಶೌರ್ಯ ದಿನವಾಗಿ ಆಚರಿಸುತ್ತದೆ. ಆಯೋಧ್ಯೆಯಲ್ಲಿ ಈ ಘಟನೆ ನಡೆಯುವಾಗ ಅಂದಿನ ಪ್ರಧಾನಿ ಏನು ಮಾಡುತ್ತ್ತಿದ್ದರು ಎಂಬುದಕ್ಕೆ ಕುಲದೀಪ್ ನಯ್ಯರ್ ಅವರ ಪುಸ್ತಕದಲ್ಲಿ ವಿವರಣೆ ಸಿಕ್ಕಿತ್ತು. ಕೋಮು ದಳ್ಳುರಿಯಿಂದ ದೇಶ ಹತ್ತಿ ಉರಿಯುತ್ತಿದ್ದಾಗ ಪ್ರಧಾನಿ ಪೂಜೆ ಮಾಡುತ್ತಿದ್ದರು ಎಂಬ ಸುದ್ದಿ ಅನೇಕರನ್ನು ದಿಗ್ಭ್ರಮೆಗೊಳಿಸಿತ್ತು. ರೋಮ್ ನಗರ ಹತ್ತಿ ಉರಿಯುವಾಗ ನೀರೋ ದೊರೆ ಪೀಟಿಲು ಬಾರಿಸುತ್ತಿದ್ದ ಎಂಬಂತೆ ಪಿವಿ ನರಸಿಂಹರಾವ್ ಪ್ರಕರಣ ಬಿಂಬಿಸಲಾಗಿದೆ ಎಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಮಾಯಣ ಕಾಲದ ಅಯೋಧ್ಯದಲ್ಲಿದ್ದ ಬಾಬ್ರಿ ಮಸೀದಿಯ ಹುಟ್ಟು ಹಾಗೂ ಅವನತಿಯ ತನಕ ಕಾಲಾನುಕ್ರಮ ಪಟ್ಟಿ ಇಂತಿದೆ ನೋಡಿ:
1528: ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರ ಹುಟ್ಟಿದ ಸ್ಥಳದಲ್ಲಿ ಮಸೀದಿ ನಿರ್ಮಾಣ.
1853: ಅಯೋಧ್ಯೆದಲ್ಲಿ ಮೊಟ್ಟ ಮೊದಲ ಬಾರಿಗೆ ಕೋಮು ಗಲಭೆ ಘಟನೆ ದಾಖಲಾಗಿದೆ.
1859: ವಿವಾದಿತ ಪ್ರದೇಶಕ್ಕೆ ಬೇಲಿ ಹಾಕಿದ ಬ್ರಿಟಿಷ್ ಆಡಳಿತ. ಒಳಾಂಗಣ ಭಾಗ ಮುಸ್ಲಿಮರಿಗೆ ಹಾಗೂ ಹೊರಾಂಗಣ ಭಾಗ ಹಿಂದೂಗಳಿಗೆ ಎಂದು ಹಂಚಿಕೆ.
1949: ಮಸೀದಿಯೊಳಗೆ ಶ್ರೀರಾಮನ ಪ್ರತಿಮೆ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿತ್ತು. ಹಿಂದೂಗಳು ತಂದಿಟ್ಟಿದ್ದಾರೆ ಎಂದು ಮುಸ್ಲಿಮರಿಂದ ದೂರು. ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಗೇಟ್ ಬೀಗ ಹಾಕಿ ಜಡೆಯಿತು.
1984: ಶ್ರೀರಾಮ ಜನ್ಮಭೂಮಿ ವಿಮೋಚನೆಗಾಗಿ ಹಿಂದೂ ಸಮಿತಿ ಅಸ್ತಿತ್ವಕ್ಕೆ, ಮಂದಿರ ನಿರ್ಮಾಣದ ಗುರಿ. ವಿಶ್ವ ಹಿಂದೂ ಪರಿಷತ್ ಹಾಗೂ ಎಲ್ ಕೆ ಅಡ್ವಾಣಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದಿಂದ ಅಭಿಯಾನ.
1986: ಮಸೀದಿ ಬಾಗಿಲು ತೆರೆವುಗೊಳಿಸಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ನ್ಯಾಯಾಲಯದ ತೀರ್ಪು. ಪ್ರತಿಭಟನೆಗಾಗಿ ಮುಸ್ಲಿಮರಿಂದ ಬಾಬ್ರಿ ಮಸೀದಿ ಕಾರ್ಯಕಾರಿ ಸಮಿತಿ ಸ್ಥಾಪನೆ.
1989: ವಿಎಚ್ ಪಿ ಅಭಿಯಾನ ಶುರು, ವಿವಾದಿತ ಮಸೀದಿ ಜಾಗದ ಪಕ್ಕ ರಾಮ ಮಂದಿರಕ್ಕಾಗಿ ಶಂಕುಸ್ಥಾಪನೆ
1990: ವಿಎಚ್ ಪಿ ಕಾರ್ಯಕರ್ತರಿಂದ ಮಸೀದಿಯ ಪಾರ್ಶ್ವ ಭಾಗ ಧ್ವಂಸ. ಸಮಸ್ಯೆ ಬಗೆಹರಿಸಲು ಪ್ರಧಾನಿ ಚಂದ್ರಶೇಖರ್ ರಿಂದ ವಿಫಲ ಯತ್ನ.
1991: ಆಯೋಧ್ಯೆ ಇರುವ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ.
1992: ವಿಎಚ್ ಪಿ, ಶಿವ ಸೇನೆ, ಬಿಜೆಪಿ ಕರಸೇವಕರಿಂದ ಮಸೀದಿ ಧ್ವಂಸ. ರಾಷ್ಟ್ರವ್ಯಾಪಿ ಹಿಂದೂ -ಮುಸ್ಲಿಂ ಕೋಮು ಗಲಭೆಗೆ ನಾಂದಿ. 2,000ಕ್ಕೂ ಅಧಿಕ ಮಂದಿ ಮರಣ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲೂ ಹಿಂಸಾಚಾರ ಹಬ್ಬಿತು. ಪಕ್ಕದ ದೇಶಗಳಲ್ಲಿ ಹಿಂದೂ ದೇಗುಲಗಳು ಧ್ವಂಸ. ಅಲ್ಲಿಂದ ಮುಂದಕ್ಕೆ ಆ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಭಯದಿಂದ, ಅನಾದಾರ ಧೋರಣೆಗೆ ಒಳಪಡಬೇಕಾಯಿತು.
1998: ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು.
2001: ವಿಎಚ್ ಪಿ ಯಿಂದ ಮತ್ತೆ ರಾಮಜನ್ಮಭೂಮಿಯಲ್ಲಿ ಮಂದಿರ ಸ್ಥಾಪನೆ ಸಂಕಲ್ಪ. ಮಸೀದಿ ಧ್ವಂಸ ವಾರ್ಷಿಕ ದಿನ ಹಲವೆಡೆ ಗಲಭೆ, ಹಿಂಸಾಚಾರ.
ಜನವರಿ 2002 : ಹಿಂದೂ -ಮುಸ್ಲಿಂ ನಾಯಕರ ಜತೆ ಮಾತುಕತೆ ನಡೆಸಲು ವಾಜಪೇಯಿ ಅವರಿಂದ ತಮ್ಮ ಕಚೇರಿಯಲ್ಲಿ ಪ್ರತ್ಯೇಕ ಕೇಂದ್ರ ಸ್ಥಾಪನೆ.
ಫೆಬ್ರವರಿ 2002 : ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣ ಸೇರ್ಪಡೆ.ನಿರ್ಮಾಣಕ್ಕೆ ಮಾ.15 ಗಡುವು. ಅಯೋಧ್ಯೆಯಿಂದ ರೈಲಿನ ಮೂಲಕ ಹಿಂತಿರುಗುತ್ತಿದ್ದ ಹಿಂದೂ ಕಾರ್ಯಕರ್ತರ ಪೈಕಿ ಸುಮಾರು 58 ಜನರ ಹತ್ಯೆ. ಗೋಧ್ರದಲ್ಲಿನ ಘಟನೆಯಿಂದ ಹಿಂಸಾಚಾರಕ್ಕೆ ನಾಂದಿ.
ಮಾರ್ಚ್ 2002 : 1000 ರಿಂದ 2000 ಜನ ಬಹುತೇಕ ಮುಸ್ಲಿಮರು ಗೋಧ್ರೋತ್ತರ ಹಿಂಸಾಚಾರದಲ್ಲಿ ರೈಲು ದಾಳಿಯಲ್ಲಿ ಹತ್ಯೆ.
ಏಪ್ರಿಲ್ 2002: ಮೂವರು ಹೈಕೋರ್ಟ್ ಜಡ್ಜ್ ಗಳಿದ್ದ ಪೀಠದಿಂದ ವಿವಾದಿತ ಧಾರ್ಮಿಕ ತಾಣ ವಿಚಾರಣೆ.
ಜನವರಿ 2003: ವಿವಾದಿತ ತಾಣ ಶ್ರೀರಾಮನ ಜನ್ಮಸ್ಥಳವೇ ಎಂಬುದನ್ನು ಪರಿಶೀಲಿಸಲು ಭೂ ಗರ್ಭ ಶಾಸ್ತ್ರಜ್ಞರಿಂದ ಸಮೀಕ್ಷೆ ಶುರು.
ಆಗಸ್ಟ್ 2003: ಶ್ರೀರಾಮನ ಜನ್ಮಸ್ಥಳ ಇದೇ ಎನ್ನುವುದಕ್ಕೆ ಮಸೀದಿ ಕೆಳಗೆ ಕುರುಹುಗಳಿವೆ ಎಂದು ಸಮೀಕ್ಷೆ ಹೇಳಿಕೆ. ಇದನ್ನು ಅಲ್ಲಗೆಳೆದ ಮುಸ್ಲಿಮರು. ಹಿಂದೂ ಕಾರ್ಯಕರ್ತ ರಾಮಚಂದ್ರ ದಾಸ್ ಪರಮಹಂಸ ಕೊನೆ ಆಸೆಯಂತೆ ಮಂದಿರ ನಿರ್ಮಾಣ ಎಂದು ವಾಜಪೇಯಿ ಹೇಳಿಕೆ. ಆದರೆ, ನ್ಯಾಯಾಲಯದ ತೀರ್ಪಿನಿಂದ ಸಮಸ್ಯೆ ಪರಿಹಾರದ ನಿರೀಕ್ಷೆ.
ಸೆಪ್ಟೆಂಬರ್ 2003: ಏಳು ಹಿಂದೂ ನಾಯಕರ ವಿರುದ್ಧ ವಿಚಾರಣೆಗೆ ಕೋರ್ಟ್ ಆದೇಶ. ಆದರೆ, 1992ರಲ್ಲಿ ಘಟನಾ ಸ್ಥಳದಲ್ಲಿದ್ದ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ವಿರುದ್ಧ ಆರೋಪ ಕೇಳಿ ಬರಲಿಲ್ಲ.
ಅಕ್ಟೋಬರ್ 2004: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧ ಎಂದು ಅಡ್ವಾಣಿ ಹೇಳಿಕೆ.
ನವೆಂಬರ್ 2004 : ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಕೈವಾಡ ಇಲ್ಲ ಎಂಬ ಈ ಹಿಂದಿನ ತೀರ್ಪು ಮರು ಪರಿಶೀಲನೆ ಅರ್ಜಿಯನ್ನು ಸ್ವೀಕರಿಸಿದ ಉತ್ತರ ಪ್ರದೇಶದ ಕೋರ್ಟ್.
ಜುಲೈ 2005: ಶಂಕಿತ ಮುಸ್ಲಿಂ ಉಗ್ರರಿಂದ ವಿವಾದಿತ ತಾಣದ ಮೇಲೆ ದಾಳಿ. ಜೀಪ್ ಬಳಸಿದ್ದ ಉಗ್ರರು ಗೋಡೆಯಲ್ಲಿ ರಂಧ್ರ ಕೊರೆದಿದ್ದರು. ಭದ್ರತಾ ಪಡೆಯಿಂದ ಐವರ ಹತ್ಯೆ. ಆರನೇ ವ್ಯಕ್ತಿ ಗುರುತು ಪತ್ತೆಯಾಗಲಿಲ್ಲ.
ಜೂನ್ 2009: ಸುಮಾರು 17 ವರ್ಷಗಳ ನಂತರ ಲೆಬ್ರಹಾನ್ ಸಮಿತಿಯಿಂದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತನಿಖಾ ವರದಿ ಸಲ್ಲಿಕೆ.
ನವೆಂಬರ್ 2009: ಮಸೀದಿ ಧ್ವಂಸ ಪ್ರಕರಣದಲ್ಲಿ ಹಿಂದೂ ಧರ್ಮ ಪಾಲಕ ಬಿಜೆಪಿ ನಾಯಕರ ಕೈವಾಡವಿದೆ ಎಂದ ಲೆಬ್ರಹಾನ್ ಸಮಿತಿ ವರದಿ ಬಗ್ಗೆ ಸಂಸತ್ತಿನಲ್ಲಿ ಭಾರಿ ಗದ್ದಲ.
ಸೆಪ್ಟೆಂಬರ್ 2010 : ವಿವಾದಿತ ತಾಣ ಹಂಚಿಕೆ ಮಾಡಿಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ ತೀರ್ಪು. ತಲಾ ಮೂರನೇ ಒಂದು ಭಾಗ ಮುಸ್ಲಿಂ ಸಮುದಾಯ, ಹಿಂದೂಗಳಿಗೆ ಹಂಚಿಕೆ. ನಿರ್ಮೋಹಿ ಅಖಾರಕ್ಕೆ ಮುಖ್ಯ ವಿವಾದಿತ ಭಾಗ ಎಂದು ತೀರ್ಪು.
ಮೇ 2011: 2010ರ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಹಿಂದೂ ಹಾಗೂ ಮುಸ್ಲಿಂ ಸಮುದಾಯ. ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂಕೋರ್ಟ್.













Click it and Unblock the Notifications