ಬಬ್ಬರ್ ಖಾಲ್ಸಾ ಅಂತಾರಾಷ್ಟ್ರೀಯ ಭಯೋತ್ಪಾದಕ ಕುಲ್ವಿಂದರ್ಜಿತ್ ಸಿಂಗ್ ಬಂಧನ
ನವದೆಹಲಿ, ನವೆಂಬರ್ 22: ಬಬ್ಬರ್ ಖಲ್ಸಾ ಅಂತಾರಾಷ್ಟ್ರೀಯ ಸಂಘಟನೆ (ಬಿಕೆಐ) ಮತ್ತು ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಬಹು ಬೇಡಿಕೆಯ ಭಯೋತ್ಪಾದಕ ಕುಲ್ವಿಂದರ್ಜಿತ್ ಸಿಂಗ್ ಅಲಿಯಾಸ್ ಖಾನ್ಪುರಿಯಾ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ.
2019 ರಿಂದ ತಲೆಮರೆಸಿಕೊಂಡಿದ್ದ ಖಾನ್ಪೂರಿಯಾನನ್ನು ನವೆಂಬರ್ 18 ರಂದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್ನಿಂದ ಆಗಮಿಸಿದಾಗ ಬಂಧಿಸಲಾಯಿತು ಎಂದು ಎನ್ಐಎ ಸೋಮವಾರ ತಿಳಿಸಿದೆ. ಮೊದಲು ಈತನ ತಲೆಗೆ 5 ಲಕ್ಷ ಬಹುಮಾನವನ್ನು ಎನ್ಐಎ ಘೋಷಿಸಿತ್ತು.
ಬಂಧಿತ ಭಯೋತ್ಪಾದಕ ಪಂಜಾಬ್ನಲ್ಲಿ ಹತ್ಯೆಗಳನ್ನು ನಡೆಸುವ ಸಂಚು ಸೇರಿದಂತೆ ಹಲವು ಭಯೋತ್ಪಾದಕ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಅಲ್ಲದೆ ಹಲವು ಪ್ರಕರಣಗಳಲ್ಲಿ ಆತ ಎನ್ಐಎಗೆ ಬೇಕಾಗಿದ್ದ. ತೊಂಬತ್ತರ ದಶಕದಲ್ಲಿ ನವದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಮತ್ತು ಇತರ ರಾಜ್ಯಗಳಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲೂ ಅವನು ಭಾಗಿಯಾಗಿದ್ದ.
ಡೇರಾ ಸಚ್ಚಾ ಸೌದಾ ಮತ್ತು ಪಂಜಾಬ್ನ ಪೊಲೀಸ್ ಮತ್ತು ಭದ್ರತೆಯಲ್ಲಿರುವ ಕೆಲವು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವ ಸಂಚಿನ ಹಿಂದೆ ಖಾನ್ಪುರಿಯಾ ಮುಖ್ಯ ಸಂಚುಕೋರ ಮತ್ತು ಮಾಸ್ಟರ್ಮೈಂಡ್ ಆಗಿದ್ದ ಎಂದು ತನಿಖೆಯಿಂದ ತಿಳಿದು ಬಂದಿತ್ತು. ಇದಲ್ಲದೆ ಪಂಜಾಬ್ ಮತ್ತು ದೇಶದಾದ್ಯಂತ ಭಯೋತ್ಪಾದನೆಯನ್ನು ಸೃಷ್ಟಿಸುವ ಉದ್ದೇಶದಿಂದ ಖಾನ್ಪುರಿಯ ಚಂಡೀಗಢದ ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿಯ ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದನು ಎಂದು ಎನ್ಐಎ ಹೇಳಿದೆ.
ಈ ಪ್ರಕರಣವನ್ನು ಆರಂಭದಲ್ಲಿ ಮೇ 30 2019 ರಂದು ಅಮೃತಸರದ ಪೊಲೀಸ್ ಠಾಣೆ ಸ್ಟೇಟ್ ಸ್ಪೆಷಲ್ ಆಪರೇಷನ್ ಸೆಲ್ನಲ್ಲಿ ದಾಖಲಿಸಲಾಯಿತು. ಬಳಿಕ ಜೂನ್ 27, 2019 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ ಮರು ನೋಂದಣಿ ಮಾಡಿತ್ತು. ಭಾರತ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಖಾನ್ಪುರಿಯಾ ತನ್ನ ಹ್ಯಾಂಡ್ಲರ್ಗಳು ಮತ್ತು ಸಹಚರರೊಂದಿಗೆ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಜಿಸಿ ಸಂಚು ರೂಪಿಸಿದ್ದ. ನಂತರ ಖಾನ್ಪೂರಿಯಾ ಭಾರತದಿಂದ ಪಲಾಯನ ಮಾಡಿದ್ದ ಎಂದು ಎನ್ಐಎ ಹೇಳಿದೆ.
ಪಂಜಾಬ್ನ ಎನ್ಐಎ ವಿಶೇಷ ನ್ಯಾಯಾಲಯವು ಖಾನ್ಪುರಿಯಾನನ್ನು ಘೋಷಿತ ಅಪರಾಧಿ (ಪಿಒ) ಎಂದು ಘೋಷಿಸಿದೆ. ಅದರ ನಂತರ ಲುಕ್ಔಟ್ ನೋಟಿಸ್ (ಎಲ್ಒಸಿಯು) ಹೊರಡಿಸಲಾಯಿತು. ಅಲ್ಲದೆ ಇಂಟರ್ಪೋಲ್ ಮೂಲಕ ಅವನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು. ಆತನ ಬಂಧನದ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನೂ ಎನ್ಐಎ ಹಿಂದೆ ಘೋಷಿಸಿತ್ತು. ನವೆಂಬರ್ 21 2019 ರಂದು ಅವನನ್ನು ಪರಾರಿಯಾದವ ಎಂದು ಆರೋಪಪಟ್ಟಿಯನ್ನು ಸಲ್ಲಿಸಲಾಯಿತು.