ಆಯುಷ್ಮಾನ್ ಭಾರತ-ಬಡ ರೋಗಿಗಳ ಆಶಾಕಿರಣ: ಉಪಯೋಗಗಳೇನು?
ನವದೆಹಲಿ, ಸೆಪ್ಟೆಂಬರ್ 24: ಬಹು ನಿರೀಕ್ಷಿತ 'ಆಯುಷ್ಮಾನ್ ಭಾರತ್' ಆರೋಗ್ಯ ವಿಮಾ ಯೋಜನೆಯನ್ನು ಸೆ.23 ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಂಚಿಯಲ್ಲಿ ಬಿಡುಗಡೆ ಮಾಡಿದರು.
ಮೋದಿ ಅವರ ಕನಸಿನ ಯೋಜನೆ ಇದಾಗಿದ್ದು, 10 ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ವರೆಗೆ ಆರೋಗ್ಯ ವಿಮೆ ಒದಗಿಸಲಿದೆ.
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂದೂ ಕರೆಯಲ್ಪಡುವ ಈ ಯೋಜನೆ ಮೋದಿ ಕೇರ್ ಎಂದೇ ಜನಪ್ರಿಯವಾಗಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಈ ಯೋಜನೆಗಾಗಿಯೇ ವೆಬ್ ಸೈಟ್ ವೊಂದನ್ನು ರೂಪಿಸಿದ್ದು, ಈ ವೆಬ್ ಸೈಟ್ ಮೂಲಕ ಫಲಾನುಭವಿಗಳು ಮಾಹಿತಿ ಪಡೆಯಬಹುದು.

ಅಷ್ಟಕ್ಕೂ ಈ ಆಯುಷ್ಮಾನ್ ಭಾರತ ಯೋಜನೆಯ ಉಪಯೋಗಗಳೇನು?
* ಈ ಯೋಜನೆಯು 10 ಕೋಟಿಗೂ ಅಧಿಕ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ವರೆಗೆ ಆರೋಗ್ಯ ವಿಮೆ ಒದಗಿಸುತ್ತಿದೆ.
* ಈ ಯೋಜನೆಗೆ ಕುಟುಂಬದ ಸದಸ್ಯರ ಮಿತಿಯಿಲ್ಲ.
* ಎಸ್ ಇಸಿಸಿ (Socio Economic and Caste Census) ಅಡಿಯಲ್ಲಿ ಬರುವ ಎಲ್ಲರೂ ಈ ಯೋಜನೆಗೆ ಸಹಜವಾಗಿಯೇ ಫಲಾನುಭವಿಗಳಾಗಿರುತ್ತಾರೆ.
* ಕುಟುಂಬದ ಯಾವುದೇ ವ್ಯಕ್ತಿ ಆಸ್ಪತ್ರೆಗೆ ದಾಖಲಾದರೆ ರೋಗಿಯ ಕುಟುಂಬ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಇದು ನಗದು ರಹಿತ (ಕ್ಯಾಶ್ ಲೆಸ್) ಯೋಜನೆಯಾಗಿದ್ದು, ಸರ್ಕಾರವೇ ನೇರವಾಗಿ ಆಸ್ಪತ್ರೆಗೆ ಹಣ ಪಾವತಿಸಲಿದೆ.
* ಆಸ್ಪತ್ರೆಗೆ ದಾಖಲಾಗುವ ಮೊದಲ(ಸ್ಕ್ಯಾನಿಂಗ್, ಎಕ್ಸ್ ರೇ ಇತ್ಯಾದಿ ತಪಾಸಣೆ) ಮತ್ತು ದಾಖಲಾದ ನಂತರದ ಖರ್ಚು ವೆಚ್ಚಗಳೂ ಇದರಲ್ಲಿ ಸೇರಿವೆ.
* ಸರ್ಕಾರದಿಂದ ನೀಡಲಾದ ಯಾವುದೇ ಗುರುತಿನ ಚೀಟಿಯಿಂದ ಈ ಸೌಲಭ್ಯ ಪಡೆಯುವುದಕ್ಕೆ ಸಾಧ್ಯವಿರುವುದರಿಂದ, ಫಲಾನುಭವಿಗಳು ಪರಿತಪಿಸುವ ಅಗತ್ಯವಿರುವುದಿಲ್ಲ.
* ಸರ್ಕಾರಿ ಮತ್ತು ಆಯುಷ್ಮಾನ್ ಯೋಜನೆಯಡಿಯಲ್ಲಿ ನಿಗದಿಯಾದ ಎಲ್ಲಾ ಆಸ್ಪತ್ರೆಗಳಲ್ಲೂ ಈ ಸೌಲಭ್ಯ ಸಿಗಲಿದೆ.
* ಈ ಯೋಜನೆ ಸಿಗುವ ಎಲ್ಲಾ ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಮಿತ್ರ ಎಂಬ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.












Click it and Unblock the Notifications