ಅಯೋಧ್ಯೆ ಸುಪ್ರೀಂ ತೀರ್ಪು: ರಹಸ್ಯವಾಗಿಯೇ ಉಳಿದ 'ತೀರ್ಪು ಬರೆದವರಾರು'
ನವದೆಹಲಿ, ನ 10: ರಾಮ ಜನ್ಮಭೂಮಿ - ಬಾಬರಿ ಮಸೀದಿ ಪ್ರಕರಣದ ಶತಮಾನದ ವಿವಾದಕ್ಕೆ ಸರ್ವೋಚ್ಚ ನ್ಯಾಯಾಲಯ ತೆರೆ ಎಳಿದಿದೆ.
ಸಿಜೆಐ ರಂಜನ್ ಗೊಗೊಯ್ ಸೇರಿದಂತೆ ಐದು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ, ಸರ್ವಾನುಮತದಿಂದ, ವಿವಾದಿತ 2.77 ಎಕರೆ ಜಮೀನನ್ನು ರಾಮಲಲ್ಲಾ ವಿರಾಜಮಾನ್ ಗೆ ಹಂಚಿಕೆ ಮಾಡಿ, ಕೇಂದ್ರ ಸರಕಾರದ ನಿಯಂತ್ರಣಕ್ಕೆ ಕೊಟ್ಟಿದೆ.
929 ಪುಟಗಳ ತೀರ್ಪಿಗೆ, ಇತರ ಹೆಚ್ಚುವರಿ ದಾಖಲೆ, ಸಾಕ್ಷಿ ಸೇರಿ 116 ಪುಟಗಳನ್ನು ಸೇರಿಸಲಾಗಿದೆ. ಒಟ್ಟು, 1045 ಪುಟಗಳ ತೀರ್ಪು ಇದಾಗಿದೆ.
ಸಿಜಿಐ ರಂಜನ್ ಗೊಗೊಯ್, ಮುಂದಿನ ಸಿಜೆಐ ಎಸ್.ಎ.ಬೊಬ್ಡೆ, ಜಸ್ಟೀಸ್ ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಅಬ್ದುಲ್ ನಜೀರ್ ಅವರ ನ್ಯಾಯಪೀಠ, ಅಯೋಧ್ಯೆ ತೀರ್ಪನ್ನು ನೀಡಿತ್ತು. ಆದರೆ, ಇಂತಹ ಹೈಪ್ರೊಫೈಲ್ ಕೇಸಿನ, ಪ್ರಮುಖ ಎರಡು ವಿಷಯಗಳನ್ನು ಸಿಜೆಐ ಬಹಿರಂಗಪಡಿಸಲಿಲ್ಲ.

ಐವರು ಜಡ್ಜ್ ಗಳಲ್ಲಿ ಒಬ್ಬರು
1045 ಪುಟಗಳ ತೀರ್ಪಿನ ಪೈಕಿ, 116 ಪುಟಗಳನ್ನು ಐವರು ಜಡ್ಜ್ ಗಳಲ್ಲಿ ಒಬ್ಬರು ಬರೆದಿದ್ದರು ಎಂದು ಹೇಳಲಾಗಿದೆ. ಇವರು ಬರೆದ ಈ ತೀರ್ಪಿಗೆ ಇತರ ನಾಲ್ವರು ವಿರೋಧ ವ್ಯಕ್ತಪಡಿಸಲಿಲ್ಲ ಎಂದೂ ಹೇಳಲಾಗಿದೆ. ಹಾಗಾಗಿ, ಇದು ಸರ್ವಾನುಮತದ ತೀರ್ಪು ಎಂದು ಸಿಜಿಐ ಹೇಳಿದ್ದರು. ಆದರೆ, 116 ಪುಟ ತೀರ್ಪು ಬರೆದವರಾರು ಎಂದು ಬಹಿರಂಗಗೊಂಡಿಲ್ಲ ಎನ್ನುವುದು ಒಂದು..

ಅಯೋಧ್ಯೆ ಕೇಸಿನ 929 ಪುಟಗಳ ತೀರ್ಪು
ಸಾಮಾನ್ಯವಾಗಿ ಸರ್ವಾನುಮತದ ತೀರ್ಪು ಎಂದಾಗ, ಸರ್ವೋಚ್ಚ ನ್ಯಾಯಪೀಠ, ತೀರ್ಪು ಬರೆದವರಾರು ಎನ್ನುವುದನ್ನು ಬಹಿರಂಗ ಪಡಿಸುತ್ತದೆ. ಆದರೆ, ಅಯೋಧ್ಯೆ ಕೇಸಿನ 929 ಪುಟಗಳ ತೀರ್ಪು ಬರೆದವರಾರು ಎನ್ನುವುದು ರಹಸ್ಯವಾಗಿಯೇ ಉಳಿಯಿತು. (ಚಿತ್ರ:ಪಿಟಿಐ)

ನಲವತ್ತು ನಿಮಿಷ ಸಿಜಿಐ ಗೊಗೊಯ್
ನ್ಯಾಯಪೀಠ ತೀರ್ಪು ಪ್ರಕಟಿಸುವಾಗ, ಬೆಂಚ್ ಪರವಾಗಿ 'ತೀರ್ಪನ್ನು ಬರೆದವರ' ಹೆಸರನ್ನು ದಾಖಲು ಮಾಡಲಾಗುತ್ತದೆ. ಆದರೆ, ಸುಮಾರು ನಲವತ್ತು ನಿಮಿಷ ಸಿಜಿಐ ಗೊಗೊಯ್, ತೀರ್ಪನ್ನು ಕೋರ್ಟ್ ಹಾಲ್ ನಲ್ಲಿ ಓದಿದರೂ, ಬರೆದವರ ಹೆಸರನ್ನು ಬಹಿರಂಗಪಡಿಸಲಿಲ್ಲ.

ಐವರಲ್ಲಿ ಒಬ್ಬರು ಈ ತೀರ್ಪನ್ನು ಬರೆದಿದ್ದಾರೆ
ಇದಲ್ಲದೇ, ರಾಮನ ಜನ್ಮಸ್ಥಳದ ಬಗ್ಗೆ ತೀರ್ಪು ಬರೆದ ನ್ಯಾಯಮೂರ್ತಿಗಳ ಹೆಸರನ್ನೂ ಬೆಂಚ್ ಬಹಿರಂಗ ಪಡಿಸಲಿಲ್ಲ. "ನಮ್ಮ ಐವರಲ್ಲಿ ಒಬ್ಬರು ಈ ತೀರ್ಪನ್ನು ಬರೆದಿದ್ದಾರೆ. ಹಿಂದೂಗಳ ನಂಬಿಕೆಯಂತೆ ರಾಮನ ಜನ್ಮಸ್ಥಾನದ ಬಗ್ಗೆ ಅವರ ಬರೆದ ತೀರ್ಪಿಗೆ ಎಲ್ಲರ ಸಹಮತವಿದೆ" ಎಂದಷ್ಟೇ ಸಿಜಿಐ ಹೇಳಿದರು.

ಅಯೋಧ್ಯೆ ತೀರ್ಪು: ಯಕ್ಷಪ್ರಶ್ನೆಯಾಗಿಯೇ ಉಳಿದ 'ಅವರು ಯಾರು'?
ಹಾಗಾಗಿ, ಅಯೋಧ್ಯೆ ಯಂತಹ ಸೆನ್ಸಿಟಿವ್ ಕೇಸಿನ ತೀರ್ಪು ಹೊರಬಂದರೂ, ಎರಡು ಪ್ರಮುಖಾಂಶಗಳು ರಹಸ್ಯವಾಗಿಯೇ ಉಳಿಯಿತು. ಯಾಕೆ, ಸಿಜಿಐ ಈ ಹೆಸರನ್ನು ಬಹಿರಂಗ ಪಡಿಸಲಿಲ್ಲ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.












Click it and Unblock the Notifications