ತಡವಾಗಿ ಹೊರಟ ವಿಮಾನದೊಳಗೆ ವಿಮಾನಯಾನ ಸಚಿವರು ಸಿಕ್ಕಿಹಾಕಿಕೊಂಡಾಗ...
ನವದೆಹಲಿ, ಡಿಸೆಂಬರ್ 14: ಸ್ಥಳ ನವದೆಹಲಿ.. ಅಲ್ಲಿ ನಿಂತಿದ್ದದ್ದು ವಿಜಯವಾಡಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ.. ವಿಮಾನದೊಳಗೆ 100ಕ್ಕೂ ಹೆಚ್ಚು ಪ್ರಯಾಣಿಕರು.. ಒಂದೂವರೆ ಗಂಟೆ ನೆಲ ಬಿಟ್ಟು ಕದಡದ ವಿಮಾನ.. ಅಲ್ಲಿ ತಾಳ್ಮೆಯ ಕಟ್ಟೆ ಒಡೆದ ಪ್ರಯಾಣಿಕರ ಜತೆ ವಿಮಾನದೊಳಗಿದ್ದರು ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು!
ಸದ್ಯ ವಿಮಾನದೊಳಗಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟವೇನಲ್ಲ. ಈ ಎಲ್ಲಾ ಘಟನೆ ನಡೆದಿದ್ದು ಬುಧವಾರ ಬೆಳಿಗ್ಗೆ.
ತಡವಾಗಿ ಹೊರಟ ವಿಮಾನಯಾನ ಸಂಸ್ಥೆಯ ವಿರುದ್ಧ ಪ್ರಯಾಣಿಕರು ಆಕ್ರೋಶಿತರಾಗಿದ್ದರು. ಅದೇ ವೇಳೆಗೆ ವಿಮಾನಯಾನ ಸಚಿವರು ವಿಮಾನದಲ್ಲೇ ಸಿಕ್ಕರೆ ಕೇಳಬೇಕೇ?
ಎಲ್ಲರೂ ಸೇರಿ ವಿಮಾನದೊಳಗೆಯೇ ಅಶೋಕ್ ಗಜಪತಿರಾಜು ಅವರಿಗೆ ಕ್ಲಾಸ್ ತೆಗೆದುಕೊಂಡರು. ಪ್ರಯಾಣಿಕರ ಪ್ರತಿಭಟನೆಯಿಂದ ಮುಜುಗರ ಅನುಭವಿಸಿದ ರಾಜು ನೇರವಾಗಿ ಏರ್ ಇಂಡಿಯಾ ಮುಖ್ಯಸ್ಥ ಪ್ರದೀಪ್ ಸಿಂಗ್ ಖರೋಲಾಗೆ ಫೋನಾಯಿಸಿ ತಮ್ಮ ಅಸಹನೆ ತೋಡಿಕೊಂಡರು.
ಪರಿಣಾಮ ತಕ್ಷಣ ಮೂವರು ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ. ಜತೆಗೆ ತಡವಾಗಿ ಬಂದ ಪೈಲಟ್ ಗೆ ಎಚ್ಚರಿಕೆ ನೀಡಲಾಗಿದೆ.