Atishi: ದೆಹಲಿ ಅಧಿಕಾರ ವಹಿಸಿಕೊಂಡ ಅತಿಶಿ: ಜಯಲಲಿತಾ ನೆನಪಾಗಿದ್ದೇಕೆ!
ಬೆಂಗಳೂರು, ಸೆಪ್ಟಂಬರ್ 23: ಎಎಪಿ ಪ್ರಬಲ ನಾಯಕ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಬಳಿಕ ದೆಹಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಎಎಪಿ ನಾಯಕಿ, ನೂತನ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಸಿಂಗ್ (Atishi Marlena Singh) ಅವರು ಸಿಎಂ ಕುರ್ಚಿ ಮೇಲೆ ಕೂರದಿರಲು ನಿರ್ಧರಿಸಿದ್ದಾರೆ. ಈ ಮೂಲಕ ತಮ್ಮ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಗೌರವ ಸೂಚಿಸುತ್ತಿದ್ದಾರೆ. ಅತಿಶಿ ಅವರ ಈ ನಡೆ ತಮಿಳನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ನೆನಪಿಸುತ್ತಿದೆ.
ದೆಹಲಿ ಅಬಕಾರಿ ಹಗರಣ ಸಂಬಂಧ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ ಈ ಹುದ್ದೆ ಅತಿಶಿ ಅವರಿಗೆ ಪಾಲಾಯಿತು. ಸದ್ಯ ದೆಹಲಿ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಅತಿಶಿ ಮರ್ಲೆನಾ ಸಿಂಗ್ ಅವರು ಸಿಎಂ ಕುರ್ಚಿ ಪಕ್ಕ ಮತ್ತೊಂದು ಕುರ್ಚಿ ಹಾಕಿ ಅದರ ಮೇಲೆ ಕುಳಿತಿದ್ದಾರೆ.

ದೆಹಲಿಯ ಎಂಟನೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಆತಿಶಿ ಅವರು, ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು. ಅವರ ಈ ಪೋಸ್ಟ್ಗೆ ಬಿಜೆಪಿ ಕೆಲವು ನಾಯಕರು ವ್ಯಂಗ್ಯವಾಡಿದ್ದಾರೆ.
ಪುನಃ ಅರವಿಂದ್ ಕೇಜ್ರಿವಾಲ್ ಆಯ್ಕೆ: ಸಿಎಂ ವಿಶ್ವಾಸ
ದೆಹಲಿ ವಿಧಾನಸಭಾ ಚುಣಾವಣೆಗೆ ಕೆಲವು ತಿಂಗಳು ಬಾಕಿ ಇದೆ. ಜನರು ಚುಣಾವಣೆಯಲ್ಲಿ ಪುನಃ ಅರವಿಂದ್ ಕೇಜ್ರಿವಾಲ್ ಅವರನ್ನು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ, ವಿಶ್ವಾಸ ನನ್ನಲ್ಲಿದೆ. ಅವರ ಮರಳಿ ಬರುವವರೆಗೂ ಈ ಕುರ್ಚಿ ಅವರಿಗಾಗಿ ಕಾಯುತ್ತದೆ. ಜನರು ನನ್ನನ್ನು ಪ್ರಾಮಾಣಿಕಳು ಎಂದು ನಿರ್ಧರಿಸುವವರೆಗೂ ನಾನು ಸಿಎಂ ಕುರ್ಚಿ ಮೇಲೆ ಕೂರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಸಿಎಂ ಅತಿಶಿ ಪೋಸ್ಟ್ನಲ್ಲಿ ಏನಿದೆ?
ಈ ಸಂಬಂಧ ಸಿಎಂ ಅತಿಶಿ ಅವರು, 'ಸೋಮವಾರ ನಾನು ದೆಹಲಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಅಣ್ಣ ಶ್ರೀರಾಮ 14ವರ್ಷ ವನವಾಸದಲ್ಲಿದ್ದಾಗ ತಮ್ಮ ಭರತ ಅನುಭವಿಸಿ ನೋವು ನಾನು ಅನುಭವಿಸುತ್ತಿದ್ದೇನೆ. ರಾಮನ ಚಪ್ಪಲಿಯನ್ನು ಇಟ್ಟುಕೊಂಡು ಭರತ ಆಳ್ವಿಕೆ ನಡೆಸಿದಂತೆ, ಅರವಿಂದ್ ಕೇಜ್ರಿವಾಲರ ಕುರ್ಚಿ ಮೇಲೆ ಕೂರದೇ ಮುಂದಿನ ನಾಲ್ಕು ತಿಂಗಳು ಆಡಳಿತ ನೀಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು, ಇದೊಂದು ರಾಜಕೀಯ ನಾಟಕ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ನಾಟಕ ಇಲ್ಲಿಗೆ ನಿಲ್ಲಬೇಕು. ಇವರು ಸಿಎಂ ಕುರ್ಚಿ ಪಕ್ಕ ಮತ್ತೊಂದು ಕುರ್ಚಿ ಇಟ್ಟು ಆಡಳಿತ ನಡೆಸುವುದು ನೋಡಿದರೆ ಇನ್ನೂ ಅರವಿಂದ್ ಕೇಜ್ರಿವಾಲರೇ ಮುಖ್ಯಮಂತ್ರಿ ಆಗಿರುವುದು ಗೊತ್ತಾಗುತ್ತದೆ. ಈ ಮೂಲಕ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ಅಪಹಾಸ್ಯ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಜಯಲಲಿತಾರನ್ನು ನೆನಪಿಸಿದ ಸಿಎಂ ಅತಿಶಿ ನಿರ್ಧಾರ
ಸದ್ಯ ದೆಹಲಿ ಸಿಎಂ ಆತಿಶಿಯವರ ನಡೆ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಜಯಲಲಿತಾ ಹಾಗೂ ಪನ್ನಿರ್ ಸೆಲ್ವಂ ಅವರನ್ನು ನೆನಪಿಸುತ್ತದೆ. ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಜೈಲಿಗೆ ಹೋದಾಗ ಸಿಎಂ ಸ್ಥಾನ ತೆರವಾಗಿದ್ದ ವೇಳೆ ಮುಖ್ಯಮಂತ್ರಿ ಹುದ್ದೆಗೇರಿದ ಎಐಎಡಿಎಂಕೆ ನಾಯಕ ಪನ್ನಿರ್ ಸೆಲ್ವಂ ಅವರು ಇದೇ ರೀತಿ ನಡೆದುಕೊಂಡಿದ್ದರು. ಜಯಲಲಿತಾ ಅವರು ಸಿಎಂ ಆಗಿದ್ದಾಗ ಬಳಕೆ ಮಾಡುತ್ತಿದ್ದ ವಸ್ತುಗಳನ್ನು ತಾವು ಬಳಸುವುದಿಲ್ಲ ಎಂದು ಸ್ವಯಂ ನಿರ್ಬಂಧ ಹಾಕಿಕೊಂಡಿದ್ದರು.
ಅಲ್ಲದೇ ಜಯಲಲಿತಾ ಅವರು ಕೂತಿದ್ದ ಸಿಎಂ ಕುರ್ಚಿ ಮೇಲೆ ಕೂರದೇ, ಅದರ ಮೇಲೆ ಜಯಲಲಿತಾ ಅವರ ಫೋಟೋ ಇಟ್ಟುಕೊಂಡು ರಾಜ್ಯದ ಆಡಳಿತ ನಡೆಸಿದ್ದರು. ಇದೆಲ್ಲ ಬೆಳವಣಿಗೆಗಳನ್ನು ಇಂದಿನ ದೆಹಲಿ ಸಿಎಂ ಆತಿಶಿ ಅವರ ನಿರ್ಧಾರವು ನೆನಪಿಸುವಂತಿದೆ.












Click it and Unblock the Notifications